ಕರುನಾಡಿಗೆ ಕನ್ನಡ ಕನಸುಗಳು - ಅಣಿಯಾಗಬೇಕಿವೆ ಕನ್ನಡ ಮನಸುಗಳು
ತೇಜಸ್ವಿ ಹೇಳುತ್ತಿದ್ದರು ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು ಅಂತ. ಆದರೆ ಹಾಗಾಗಬೇಕಾದರೆ ಕರ್ನಾಟಕದ ಅನ್ನ ತಿನ್ನುವವರೆಲ್ಲರೂ(ಕನಿಷ್ಟ ಪಕ್ಷ ಒಂದಿಷ್ಟು ಮಂದಿಯಾದರೂ) ಕನ್ನಡಕ್ಕಾಗಿ ದುಡಿಯಬೇಕು. ನವೆಂಬರ್ ತಿಂಗಳಿನಲ್ಲಿ ಜೋರಾಗಿ ಕನ್ನಡ ಚಿತ್ರಗೀತೆ ರೆಕಾರ್ಡುಗಳನ್ನು ಹಾಕಿಸಿ, ಆರ್ಕೆಸ್ಟ್ರಾದವರನ್ನ ಕರೆಸಿ ಕಿವಿ ಹರಿದು ಹೋಗುವಷ್ಟು ಸ್ಪೀಕರ್ ಸೌಂಡ್ ಇಟ್ಟು, ದೊಡ್ಡ ದೊಡ್ಡ ಭಾಷಣ ಬಿಗಿದರೆ ಕನ್ನಡ ಉದ್ಧಾರವಾಗುವುದಿಲ್ಲ. ಇವೆಲ್ಲವೂ ಕನ್ನಡವನ್ನು ಜೀವಂತವಾಗಿಡಲಿಕ್ಕೆ ಸಹಕಾರಿಯಾಗಬಹುದು. ಕನ್ನಡವಿರದ ಕಡೆಗಳಲ್ಲಿ ಕನ್ನಡ ಕಾರ್ಯಕ್ರಮಗಳು ರೂಪುಗೊಳ್ಳುವುದು ಶುಭ ಸಂಕೇತವೇ. ಆದರೆ ಅದು ಕೇವಲ “ಅಸ್ತಿತ್ವ(ಅಸ್ಥಿತ್ವ..!?)ಪ್ರದರ್ಶನ”ವಾಗಬಾರದು.
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯವೊಂದನ್ನು ಬಿಟ್ಟು ಉಳಿದೆಲ್ಲದರ ಬಗ್ಗೆ ಗಮನಹರಿಸುತ್ತದೆ. ಹಾಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ್ನು ನಂಬಿ ಕುಳಿತುಕೊಳ್ಳುವಂತಿಲ್ಲ. ಕನ್ನಡ ನಮ್ಮ ಮನೆ ದೇವರಿದ್ದಂತೆ. ಅದಕ್ಕೆ ಊದುಬತ್ತಿ, ಕರ್ಪೂರ ಬೆಳಗಲಿಕ್ಕೂ ಸರ್ಕಾರದ ಅನುದಾನ ಕೇಳುವುದು ಎಷ್ಟು ಸರಿ..? ಇದರ ಬಗ್ಗೇನೇ ನಕಾರಾತ್ಮಕವಾಗಿ ಬರೀತಾ ಹೋದ್ರೆ ಈ ಬರಹವೂ ಅದೇ ಕೆಟಗರಿಗೆ ಸೇರಿಬಿಡುತ್ತದೆ. ಈಗ ಸಕಾರಾತ್ಮಕವಾಗಿ ಕನ್ನಡದ ಅಭ್ಯುದಯದ ಬಗ್ಗೆ ಯೋಚಿಸೋಣ.
ಕನ್ನಡದ ಏಳ್ಗೆಗಾಗಿ, ಕನ್ನಡವನ್ನು ವೃತ್ತಿಪರವಾಗಿಸಲು ಕೆಲವು ಅಂಶಗಳನ್ನು ಸಿದ್ಧಪಡಿಸಿದ್ದೇನೆ. ಇವುಗಳ ಬಗ್ಗೆ ಚರ್ಚೆಯಾಗಬೇಕು.
ಇಲ್ಲಿ ಕೆಲವು ರಚನಾತ್ಮಕ ಕಾರ್ಯಗಳನ್ನು ಮಾತ್ರ ಹೇಳಿದ್ದೇನೆ. ಮಾಡಬೇಕಾದ ಕೆಲಸಗಳು ಬಹಳಷ್ಟಿವೆ. ಆದರೆ ಬರೀ ಪ್ರತಿಭಟನೆಗಳಿಂದ ಏನೂ ಲಭಿಸುವುದಿಲ್ಲ. ಪ್ರತಿಭಟನೆಗಳು ಬೇಡ ಎಂದು ಇದರ ಅರ್ಥವಲ್ಲ. ಅವು ಕಾರ್ಯಕ್ರಮಗಳ ಸಾಂಕೇತಿಕ ಭಾಗವಾಗಬೇಕು. ಅವುಗಳೇ ಕಾರ್ಯಕ್ರಮಗಳಾಗಬಾರದು..! ಆದರೆ ಎಲ್ಲದಕ್ಕೂ ಪ್ರತಿಭಟನೆ ನೆಡೆಸುತ್ತಾ ಹೊರಟರೆ..? ಪ್ರತಿಭಟನೆಗೊಂದು ಅರ್ಥವೇ ಇರುವುದಿಲ್ಲ.
ಈ ಎಲ್ಲಾ ಅಂಶಗಳ ಬಗ್ಗೆ ಚರ್ಚೆಯಾಗಬೇಕು. ಕಾರ್ಯಗತಗೊಳಿಸಲು ಇರುವ ಅಡೆತಡೆಗಳಬಗ್ಗೆ ಚರ್ಚೆಯಾಗಬೇಕು. ನಿಮ್ಮ ಪ್ರತಿಕ್ರಿಯೆಗಳಿಗೆ, ಸಲಹೆಗಳಿಗೆ, ಸೂಚನೆಗಳಿಗೆ ಸದಾ ಸ್ವಾಗತವಿದ್ದೇ ಇದೆ.
ಜಾಗತೀಕರಣವನ್ನು ನಾವು ಒಪ್ಪಿಯಾಗಿದೆ. ಕೈಯಲ್ಲಿ ಹಿಡಿದಿರುವ ಮೊಬೈಲು ಜಾಗತೀಕರಣದ್ದು, ಮನೆ ಮನೆಗಳನ್ನು ಹೊಕ್ಕಿರುವ ಎಲೆಕ್ಟ್ರಾನಿಕ್ ಉಪಕರಣಗಳು, ಕಂಪ್ಯೂಟರ್ಗಳು ಜಾಗತೀಕರಣದ ಫಲಗಳು. ಈಗ ಕವಿಗಳು, ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು, ದಲಿತಪರ ಕಾಳಜಿ ಹೊಂದಿರುವವರು ಏನೇ ಹೋರಾಟಗಳನ್ನು ಮಾಡಿದರೂ ಅದು ಫಲರಹಿತ ಪ್ರಯತ್ನ. ಆದರೆ ಅವರ ವಿಚಾರವನ್ನು ತೆರೆದಿಡುವ ಹಕ್ಕು ಅವರಿಗಿದೆ. ಹೋರಾಟದ ರೂಪ-ರೇಷೆಗಳು ಬದಲಾಗಬೇಕಿದೆ. ಜಾಗತೀಕರಣವನ್ನು ಬದಲಾಯಿಸುವುದು ಸಾಧ್ಯವಾಗದ ಮಾತು. ಜಾಗತೀಕರಣದ ಉಪಯೋಗವನ್ನು ಪಡೆದು ಅದರಲ್ಲಿನ ಲೋಪ-ದೋಷಗಳನ್ನು ಸರಿಪಡಿಸಿ, ನಮ್ಮ ಸಂಸ್ಕೃತಿಗೆ, ಭಾಷೆಯ ಅನುಕೂಲಕ್ಕೆ ತಕ್ಕಂತೆ ಜಾಗತೀಕರಣವನ್ನು ಬದಲಾಯಿಸಿಕೊಳ್ಳುವುದು ಇಂದಿನ ಅಗತ್ಯ.
ಜಾಗತೀಕರಣದಿಂದ ನಮ್ಮ ಭಾಷೆಯನ್ನು ಅಭಿವೃದ್ಧಿಪಡಿಸುವುದು ಹೇಗೆ ಎಂಬುದಕ್ಕೆ ಪೂರ್ಣಚಂದ್ರ ತೇಜಸ್ವಿ ಅಗ್ರಪಂಕ್ತಿ ಹಾಕಿ ಕೊಟ್ಟು ಹೋಗಿದ್ದಾರೆ. ಕನ್ನಡ ವಿಶ್ವವ್ಯಾಪಿಯಾಗಬೇಕಾದರೆ ಕಂಪ್ಯೂಟರಿನಲ್ಲಿ ಕನ್ನಡ ಮೂಡಬೇಕು. ಸಾರ್ವತ್ರಿಕವಾದ ಕನ್ನಡ ತಂತ್ರಾಂಶಗಳು ರೂಪುಗೊಳ್ಳಬೇಕು. ಕರ್ನಾಟಕದಲ್ಲಿ ಕನ್ನಡಡಿಗ ಸಾಫ್ಟ್ವೇರ್ ತಂತ್ರಜ್ಞರಿಗೆ ಕೊರತೆಯೇ? ಈಗ ಆಗಬೇಕಾಗಿರುವುದು ಅವರಲ್ಲಿನ ಕನ್ನಡತನವನ್ನು ಬಡಿದೆಬ್ಬಿಸುವ ಕೆಲಸ. ಇದು ಸರಕಾರದಿಂದ ಆಗದ ಕೆಲಸ. ಸರ್ಕಾರದ ಅಧೀನದಲ್ಲಿರುವ ಯಾವುದೇ ಸಮಿತಿ, ಪರಿಷತ್ತುಗಳುಗಳು ಉಪಯೋಗಕ್ಕೆ ಬಾರವು. ಸರ್ಕಾರದಿಂದ ಆದೇಶ ಬಂದರೂ ಕೆಲಸ ಮಾಡದ ಕೆಲಸಗಾರರಿಂದ ಕನ್ನಡತನವನ್ನು ಅಪೇಕ್ಷಿಸುವುದು ಮೂರ್ಖತನ. ಏನಿದ್ದರೂ ಸರಕಾರದ ಸಹಾಯ ಪಡೆಯಬಹುದು. ಕನ್ನಡತನ ನಮ್ಮ ಮನೆ ಹಬ್ಬದಂತೆ. ಅದನ್ನು ಆಚರಿಸಲಿಕ್ಕೆ ಸರಕಾರಕ್ಕೆ ಮೊರೆ ಹೋಗುವುದು ಎಷ್ಟು ಸರಿ?
ಕನ್ನಡದ ಬಗ್ಗೆ ಅಪಾರ ಅಭಿಮಾನವನ್ನು, ಸಕ್ರಿಯವಾಗಿ ಕನ್ನಡ ಅಂತರ್ಜಾಲ ಕಾರ್ಯದಲ್ಲಿ ಭಾಗವಹಿಸಿರುವ ಸಾಫ್ಟ್ವೇರ್ ತಂತ್ರಜ್ಞರ ಯುವ ಪಡೆಯೊಂದನ್ನು ಕಟ್ಟಬೇಕಿದೆ. ಇಂತಿಷ್ಟು ಶುಲ್ಕದಂತೆ ಸಂಗ್ರಹಿಸಿ, ಸದಸ್ಯತ್ವ ನೀಡಿ ಸಂಸ್ಥೆ ಮಾಡಬೇಕಿದೆ. ಆ ಹಣ ಸದುಪಯೋಗವಾಗುವಂತೆ ನೋಡಿಕೊಳ್ಳಬೇಕು. ಹಣದ ವೆಚ್ಚದ ವಿವರಗಳೆಲ್ಲವೂ ಪಾರದರ್ಶಕವಾಗಿರಬೇಕು. ಹಣವನ್ನ ಕನ್ನಡ ವಿದ್ಯಾರ್ಥಿಗಳ ಬೆಳವಣಿಗೆಗೆ ಉಪಯೋಗಿಸಬಹುದು. ಇದು ತಂತ್ರಜ್ಞ ಕನ್ನಡಿಗರ ಸಬಲೀಕರಣದ ಮೊದಲ ಹೆಜ್ಜೆಯಾಗಲಿದೆ.
ಕನ್ನಡ ತಂತ್ರಾಂಶ ಅಭಿವೃದ್ಧಿಗಾಗಿ ಈಗಾಗಲೇ ತಂತ್ರಾಂಶ ಅಭಿವೃದ್ಧಿ ಪಥದಲ್ಲಿ ದಾಪುಗಾಲಿಟ್ಟಿರುವ, ಅಕ್ಷರ ಕ್ರಾಂತಿಗೆ ಸಹಕರಿಸಿರುವ “ಬರಹ”ದ ಶೇಷಾದ್ರಿ ವಾಸುರಂಥವರನ್ನು ತಂತ್ರಾಂಶಾಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಿಸಿಕೊಳ್ಳಬೇಕು.
ಎಂಜಿನಿಯರಿಂಗಿನ ಕೊನೆಯ ಸೆಮಿಸ್ಟರಿನ ವಿದ್ಯಾರ್ಥಿಗಳಿಗೆ ಕನ್ನಡ ತಂತ್ರಾಶದ ಅಭಿವೃದ್ಧಿಯ ಪ್ರಾಜೆಕ್ಟ್ ನೀಡಿ, ಈ ದೆಸೆಯಲ್ಲಿ ಮುಂದುವರಿದ ಹಿರಿಯ ಸಾಫ್ಟ್ವೇರ್ ತಂತ್ರಜ್ಞರಿಂದ ಮಾರ್ಗದರ್ಶನ ಕೊಡಿಸಿ, ವಿದ್ಯಾರ್ಥಿವೇತನ ನೀಡಿದರೆ ಸರ್ಕಾರ ಕನ್ನಡ ತಂತ್ರಾಂಶ ಅಭಿವೃದ್ಧಿಗೆ ವ್ಯಯಿಸುವ ಅಪಾರ ಖರ್ಚು-ವೆಚ್ಚಗಳನ್ನು ಉಳಿಸಬಹುದು. ಮತ್ತು ಕಡಿಮೆ ವೆಚ್ಚದಲ್ಲಿ ತಂತ್ರಾಂಶವನ್ನು ತಯಾರಿಸಬಹುದು. ಎಂಜಿನಿಯರಿಂಗ್ ಹಂತದಲ್ಲಿಯೇ ಕನ್ನಡತನವನ್ನ ಜಾಗೃತಗೊಳಿಸಬಹುದು.
ಇನ್ನು ಗ್ರಂಥಾಲಯಗಳಲ್ಲಿ, ಗ್ರಂಥಾಲಯಗಳ ಬಳಿಯಲ್ಲಿ ಬರಹಗಾರರಿಗಾಗಿಯೇ ಒಂದು ಸಂಕೀರ್ಣವನ್ನು ನಿರ್ಮಿಸಬೇಕು. ಬರಹಗಾರರು ಗ್ರಂಥಾಲಯದ ಉಪಯೋಗ ಪಡೆದುಕೊಳ್ಳುವಂತೆ ಮಾಡಬೇಕು. ಬರೆಯಲು ಸೂಕ್ತ ವಾತಾವರಣ, ಅನ್ಯ ಬರಹಗಾರರ ಸಾಂಗತ್ಯ ದೊರಕುವಂಥಾ ವಾತಾವರಣ ನಿರ್ಮಿಸಬೇಕು. ಗ್ರಂಥಾಲಯಗಳ ಪುಸ್ತಕಗಳಲ್ಲಿ ವಿಶೇಷ ಪುಸ್ತಕಗಳ ಗುಣವಿಶೇಷಗಳನ್ನು ಸಾದರಪಡಿಸುವ ಕೈಪಿಡಿ ತಯಾರಿಸಬೇಕು. ಏಕೆಂದರೆ, ಯಾವುದನ್ನೇ ಆಗಲಿ ನಾವು ಆಸಕ್ತಿ ಮೂಡದ ಹೊರತು ಓದಲಿಕ್ಕೆ ಶುರುವಿಟ್ಟುಕೊಳ್ಳುವುದೇ ಇಲ್ಲ. ಹಾಗಾಗಿ ಒಂದೊಂದು ವಿಧದ ಆಸಕ್ತಿಗೆ ಅನುಗುಣವಾಗಿ, ಪುಸ್ತಕಗಳ ಪಟ್ಟಿ ಹೊಂದಿರುವ ಕೈಪಿಡಿ ಅನಿವಾರ್ಯ. ಕೈಪಿಡಿಯು ಇದು ಒಂಥರಾ ಗೂಗಲ್ ಸರ್ಚ್ ನಂತೆ. ನಿಮಗೆ ಬೇಕಾದದ್ದನ್ನ ಹುಡುಕಿ ತೆಗೆದುಕೊಳ್ಳಬಹುದು. ಪುಸ್ತಕದ ಬಗ್ಗೆ ಆಸಕ್ತಿ, ಕೌತುಕ ಮೂಡಿಸುವ ಕೈಪಿಡಿ, ಕ್ರಾಂತಿ ಖಂಡಿತ ಮಾಡಬಲ್ಲದು.
ಸೃಜನಶೀಲ ಸಾಹಿತ್ಯದ ಜೊತೆ-ಜೊತೆಗೆ ಜನೋಪಯೋಗಿ, ಮಾಹಿತಿಯುತ, ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಪುಸ್ತಕಗಳನ್ನು ರಚಿಸಲು ಯುವ ಬರಹಗಾರರಿಗೆ ಉತ್ತೇಜನ, ಮಾರ್ಗದರ್ಶನ ನೀಡಬೇಕು. ಪ್ರಕಟಿಸಿ, ಮಾರುಕಟ್ಟೆ ವ್ಯವಸ್ಥೆ ಮಾಡಬೇಕು. ಇದು ಕನ್ನಡದ ಮಾರುಕಟ್ಟೆಯನ್ನ ವಿಸ್ತಾರಗೊಳಿಸುವಲ್ಲಿ ಸಫಲವಾಗುತ್ತದೆ. ಮಾರುಕಟ್ಟೆ ಇಲ್ಲದೆ ಅಭಿವೃದ್ಧಿ ಜಪ ಮಾಡಿದರೆ, ಏನೂ ಸಿಗದು, ಸಾಗದು. ಬರಹಗಾರರಿಗೆ ಸೂಕ್ತ ಸಂಭಾವನೆ ದೊರಕುವಂತೆ ಮಾಡಿ, ಬರಹಗಾರರಿಗೆ “ಬರಹದ ಬದುಕು” ಹಿಡಿಸುವಂತೆ ಮಾಡಿದರೆ “ಬರವಣಿಗೆಯು ನಿತ್ಯ ಸಮಾರಾಧನೆ”ಯಾಗುತ್ತದೆ. ಇದಕ್ಕೆ ನನ್ನ ಬಳಿ ಒಂದು ಚಿಂತನೆಯಿದೆ. ಒಂದು ಮಧ್ಯವರ್ತಿ ಸಂಸ್ಥೆ ಬರಹಗಾರರ ಬರಹಗಳನ್ನ ಸ್ವೀಕರಿಸುವ ವ್ಯವಸ್ಥೆ ಮಾಡಬೇಕು. ಒಂದು ರೀತಿಯಲ್ಲಿ ಮಾನ್ಸ್ಟರ್ ಡಾಟ್ ಕಾಂ ಇದ್ದಂತೆ. ತಮ್ಮ ತಮ್ಮ ರೆಸ್ಯೂಮ್ ಹಾಕಿದಂತೆ. ಇದರ ಮೂಲಕವಾಗಿ ಮಾಧ್ಯಮಗಳು, ಪತ್ರಿಕೆಗಳು, ಪ್ರಕಾಶಕರು ಬರಹಗಳನ್ನ ಪಡೆದುಕೊಳ್ಳಬಹುದು. ಇದು ಬರಹಗಾರ ಮತ್ತು ಮಾಧ್ಯಮ, ಪ್ರಕಾಶಕರ ನಡುವೆ ಸ್ನೇಹಸೇತುವಾಗುತ್ತದೆ. ಇತ್ತೀಚಿನ ದಿನಮಾನಗಳಲ್ಲಿ ಇಂಟರ್ನೆಟ್ ನಲ್ಲಿ, ಬ್ಲಾಗುಗಳಲ್ಲಿ ಕಂಡುಬರುತ್ತಿರುವ ಕನ್ನಡ ಬರಹಗಳನ್ನ ನೋಡಿದರೆ, ಈ ಕ್ರಮ ಪರಿಣಾಮಕಾರಿಯಾಗುತ್ತದೆ ಎನಿಸುತ್ತದೆ. ಇದರಿಂದ ಉಭಯತರರಿಗೂ ಲಾಭ ಮತ್ತು ಸಂಪರ್ಕ ಒದಗಿದಂತಾಗುತ್ತದೆ. ಜೊತೆಗೆ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಅತಿಯಾಗಿ ಕಾಡುವ ಬರಹಗಳ ಕೊರತೆ ನೀಗಿಸಬಹುದು.
ಸರ್ಕಾರ ಬೇರೆ ರಾಜ್ಯಗಳಲ್ಲಿ ಕನ್ನಡ ಪೀಠ ಸ್ಥಾಪನೆಗೆ ಎಲ್ಲಾ ನೆರವು ನೀಡಬೇಕು. ಇದನ್ನು ಹೊರದೇಶಗಳಿಗೂ ವಿಸ್ತರಿಸಬೇಕು. ಅಲ್ಲಿ ಅಭ್ಯಾಸಿಸುವವರಿಗೆ, ಸಂಶೋಧನೆ ನೆಡೆಸುವವರಿಗೆ ವಿದ್ಯಾರ್ಥಿವೇತನ, ಆರ್ಥಿಕ ನೆರವು ಘೋಷಿಸಬೇಕು. ಕಂಡ ಕಂಡವುಗಳಿಗೆಲ್ಲಾ ಬೇಕಾ”ಬಿಟ್ಟಿ” ಹಣ ಮಂಜೂರು ಮಾಡುವ ಸರ್ಕಾರ ಇವುಗಳತ್ತ ಗಮನ ಹರಿಸಿ, ಹೊರದೇಶದ, ಹೊರರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಪೀಠ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಮಾಡೋದಕ್ಕೇ ಇಷ್ಟೊಂದು ಸತಾಯಿಸಿದ ಸರ್ಕಾರಗಳು ಇದನ್ನು ಮಾಡುವುದರ ಬಗ್ಗೆ ಒಲವು ಹರಿಸುವುದು ಕಡಿಮೆ ಎಂದೆನಿಸುತ್ತದೆ. ಆದರೆ ಹೋರಾಟ ನೆಡೆಸಿ, ಕನ್ನಡದ ಪರ ಲಾಬಿ ನೆಡೆಸುವುದು ಅನಿವಾರ್ಯ.
ಡಾ||ಯು.ಆರ್.ಅನಂತಮೂರ್ತಿಯವರು ಸೂಚಿಸಿದಂತೆ, ಪಂಪನ ಹೆಸರಿನಲ್ಲಿ ವರ್ಷಕ್ಕೊಂದು ಅಗ್ರಗಣ್ಯ ಸಾಹಿತಿಯನ್ನು, ಅವರ ಸಾಹಿತ್ಯವನ್ನು ಗುರುತಿಸಿ, ಒಂದು ರಾಷ್ಟ್ರೀಯ ಪ್ರಶಸ್ತಿ ಕೊಡಬೇಕು. ಇದು ರಾಷ್ಟ್ರ ಮಟ್ಟದ್ದಾಗಿರಬೇಕು. ಎಲ್ಲಾ ಭಾಷೆಗಳೂ ಗಣನೆಗೆ ಬರಬೇಕು. ಇದರಿಂದ ಕರ್ನಾಟಕದ ಬಗ್ಗೆ, ಕನ್ನಡದ ಬಗ್ಗೆ ಅಭಿಮಾನ, ಪ್ರೀತಿ ಹೊರ ರಾಜ್ಯಗಳಲ್ಲೂ ಬೆಳೆಯುವಂತೆ ಮಾಡಬಹುದು.
ಕನ್ನಡ ಆಕಾಶವಾಣಿ ಕೇಂದ್ರದ ಕಾರ್ಯಕ್ರಮಗಳು ಈಗಿರುವ MW(Medium Wave) ನಂತೆ SW(Short Wave)ನಲ್ಲಿ ಕೂಡಾ ಬರುವಂತೆ ನೋಡಿಕೊಂಡರೆ, ಕನ್ನಡದ ಕಂಪು ದೇಶದೆಲ್ಲೆಡೆ ಪಸರಿಸುತ್ತದೆ. ಹೊರ ರಾಜ್ಯದ ಕನ್ನಡಿಗರ ನಾಡಿಮಿಡಿತವಾಗುತ್ತದೆ. ಏಕೆಂದರೆ, SW ನ ತರಂಗಗಳು ಅತಿ ದೂರದವರೆಗೆ ಪಸರಿಸಬಲ್ಲವು. ಆದರೆ, AM ತರಂಗಗಳ ಪರಿಮಿತಿ ಕೇವಲ 150-200ಕಿ.ಮೀ. SW ನ ತರಂಗಗಳಲ್ಲಿ ಕನ್ನಡ ಕೇಂದ್ರಗಳು ಪ್ರಸಾರ ಆರಂಭಿಸಿದರೆ, ಪಕ್ಕದ ರಾಜ್ಯದಲ್ಲೂ ಕೇಳಬಹುದು. ಪಕ್ಕದ ಶ್ರೀಲಂಕಾದಲ್ಲಿ, ಪಾಕಿಸ್ತಾನದಲ್ಲಿ, ನೇಪಾಳದಲ್ಲಿ ಕೂಡಾ ಕೇಳಬಹುದು. ಇದು ಕನ್ನಡ ಮನಸುಗಳ ಏಕತ್ರೀಕರಣಕ್ಕೆ ಸಹಕಾರಿ.
ಕನ್ನಡ ಸಾಹಿತ್ಯದ ಬಗ್ಗೆ ಆಸ್ಥೆವಹಿಸಿ, ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಹದಿನೈದು ದಿನ, ತಿಂಗಳಿಗೊಂದರಂತೆ ಸಾಹಿತ್ಯ ಕಾರ್ಯಕ್ರಮ ನೆಡೆಯುವಂತೆ, ಸಾಹಿತ್ಯ ಪುಸ್ತಕಗಳು ಎಲ್ಲರಿಗೂ ಒದಗುವಂತೆ ಸಾಹಿತ್ಯ ಮಳಿಗೆಗಳನ್ನು ತೆರೆಯಬೇಕು. ಆದಷ್ಟು, ಜನರನ್ನು ಸೆಳೆಯುವಂಥ, ಮನೋರಂಜಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಚಿಂತನಗೋಷ್ಠಿಗಳು, ಉಪನ್ಯಾಸಗಳನ್ನು ಜನ ದಿನಾಲೂ ಕೇಳಿರುತ್ತಾರೆ. ಅದೇ ಊದಿದ್ದೇ ಊದೋ ತುತ್ತೂರಿ ಊದಿದರೆ ಯಾರು ತಾನೇ ಬಂದಾರು? ಜನಸಾಮಾನ್ಯರಿಗೆ, ಇನ್ನೂ ಕನ್ನಡ ಓದುಗವಲಯಕ್ಕೆ ಪ್ರವೇಶಿಸುವವರಿಗೆ ನವೋದಯ, ನವ್ಯ, ನವ್ಯೋತ್ತರಗಳು ಬೇಕಿಲ್ಲ. ವಿವಾದಗಳು ಬೇಕಿಲ್ಲ. ಕೇಳಿದರೆ ಅಹ್ಲಾದತೆಯನ್ನುಂಟುಮಾಡುವ, ಹೃದಯಸ್ಪರ್ಶಿಯಾದ ಕಾರ್ಯಕ್ರಮಗಳು ನೆಡೆಯಬೇಕು. ಉರ್ದು ಸಾಹಿತ್ಯದ “ಮುಶಾಯಿರಾ”ಗಳು ಇದಕ್ಕೆ ಸ್ಪೂರ್ತಿಯಾಗಬಹುದು. ಯುವ ಸಮೂಹದ ಸಾಹಿತ್ಯಾಭಿಮಾನಿಗಳನ್ನು, ಸಾಹಿತ್ಯರಚನಾಕಾರರನ್ನು, ಬರಹಗಾರರನ್ನು ಹೊಸ ದಿಕ್ಕಿನತ್ತ ಕರೆದೊಯ್ಯುವುದು ಈಗಿನ ಅಗತ್ಯತೆ. ಬರೀ ಭ್ರಷ್ಟಾಚಾರ, ಜಾಗತೀಕರಣ, ಕೋಮುವಾದ, ಜಾತ್ಯಾತೀತತೆ ಇವೇ ವಿಷಯಗಳಲ್ಲ ಬರೆಯಲಿಕ್ಕೆ. ಸಾಕಷ್ಟು ವಿಷಯಗಳಿವೆ, ಗಮನ ಹರಿಸಿದರೆ. ಜಾಗತೀಕರಣ ಬಂದಾಗಿದೆ. ಈಗೇನಿದ್ದರೂ ಅಳಿವು ಉಳಿವಿನ ಪ್ರಶ್ನೆ. ಈಗ ಜಾಗತೀಕರಣವನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಬಗ್ಗೆ ಚರ್ಚೆ ನೆಡೆಯಬೇಕು.
ಕನ್ನಡದ ಉಳಿವಿಗಾಗಿ ಹೋರಾಟಗಳು ನೆಡೆಯುತ್ತವೆಯೇ ಹೊರತು, ಕನ್ನಡದ ಬೆಳವಣಿಗೆಗಾಗಿ ಯಾರೂ ದನಿಯೆತ್ತುತ್ತಿಲ್ಲ. ಬೆಳವಣಿಗೆಯಿಲ್ಲದ ಭಾಷೆಯನ್ನು ಉಳಿಸಿಕೊಳ್ಳುವುದು ಕಷ್ಟಸಾಧ್ಯ. ಬರೀ ಅಸ್ತಿತ್ವವನ್ನು ಉಳಿಸಿಕೊಂಡರೆ ಅದು ಬರೀ ಬೆದರುಗೊಂಬೆಯಾದೀತು. ಉಳಿದರೆ ಸಾಲದು. ಬೆಳೆಯಬೇಕು.
ಇನ್ನು ಮುಖ್ಯವಾಗಿ ಸರ್ಕಾರಿ ಕನ್ನಡ ಶಾಲೆಗಳನ್ನು ಪುನಶ್ಚೇತನಗೊಳಿಸಬೇಕು. ಸರ್ಕಾರಿ ನೌಕರರು, ಸರ್ಕಾರಿ ಶಾಲಾ ಶಿಕ್ಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಯಲ್ಲಿ ಓದಿಸಿದರೆ, ಕನ್ನಡ ಮಾಧ್ಯಮದಲ್ಲಿ ಓದಿಸಿದರೆ ಅವರನ್ನು ಉತ್ತೇಜಿಸುವ ಸಲುವಾಗಿ ಬಡ್ತಿ ನೀಡಬೇಕು. ಸರಕಾರಿ ಶಾಲೆಗಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಮಕ್ಕಳೇ ಇಲ್ಲದ ಮೇಲೆ ಶಾಲೆಗಳನ್ನು ನೆಡೆಸುವುದು ಸಾಧ್ಯವೇ? ಇನ್ನು ಕೆಲವೇ ವರ್ಷಗಳಲ್ಲಿ ಶಾಲೆಗಳೇ ನಿರ್ನಾಮವಾಗುವ ಪರಿಸ್ಥಿತಿಯಿದೆ. ನಗರ ಪ್ರದೇಶಗಳಲ್ಲಂತೂ ಈ ಪರಿಸ್ಥಿತಿ ಭಯಾನಕವಾಗಿದೆ. ಶಾಲೆಗಳೇ ಮುಚ್ಚಿದ ಮೇಲೆ ಹೊಸದಾಗಿ ಶಿಕ್ಷಕರು ನೇಮಕಗೊಳ್ಳಲು ಸಾಧ್ಯವೇ? ವಿದ್ಯಾರ್ಥಿಗಳು, ಶಾಲೆಗಳು ಉಳಿದರೆ ತಾನೇ ಶಿಕ್ಷಕರು..? ಶಿಕ್ಷಕರು ತಮ್ಮ ಮೇಲೆ ನೇತಾಡುತ್ತಿರುವ ತೂಗುಕತ್ತಿಯನ್ನು ನೋಡಬೇಕಿದೆ.
ಶಿಕ್ಷಣ ಕ್ಷೇತ್ರದಲ್ಲಿ, ಬರೀ ಅಂಕಿ-ಅಂಶಗಳನ್ನಿಡಲಿಕ್ಕೇ ಶಿಕ್ಷಕರನ್ನ ನೇಮಿಸಿಕೊಂಡಂತಿದೆ ಸರ್ಕಾರ. ಏಕೆಂದರೆ, ಸರ್ಕಾರಕ್ಕೆ ಬೇಕಿರುವುದು ಗುಣಾತ್ಮಕ ಬೆಳವಣಿಗೆಯಲ್ಲ. ಅಂಕಿ-ಅಂಶಗಳ ಬೆಳವಣಿಗೆ. ಬರೀ ಉತ್ತೀರ್ಣತೆಯ ಪ್ರತಿಶತವನ್ನ ಹೆಚ್ಚಿಸುವುದೇ ತಮ್ಮ ಆದ್ಯ ಕರ್ತವ್ಯ ಎಂಬಂತೆ ಇಲಾಖೆ ವರ್ತಿಸುತ್ತಿದೆ. ಕನ್ನಡ ಭಾಷೆ ಪತ್ರಿಕೆಯಲ್ಲೂ ೪೦ ಅಂಕಗಳನ್ನ ಬಹುಆಯ್ಕೆ ಪ್ರಶ್ನೆಗಳನ್ನಿರಿಸುವುದು ನೋಡಿದರೆ ಇದರ ಮಹತ್ವ ತಿಳಿಯುತ್ತದೆ. ಸರ್ಕಾರಿ ಶಿಕ್ಷಕರು ಮಕ್ಕಳನ್ನ ಓದಿಸುವುದಕ್ಕಿಂತ ಎಷ್ಟು ಮಂದಿಗೆ ಏನು ಓದಲು ಬರುತ್ತದೆ, ಏನು ಬರುವುದಿಲ್ಲ, ಯಾಕೆ ಅನ್ನೋ ಅಂಕಿ ಅಂಶಗಳನ್ನಿಡುವುದರಲ್ಲೇ ಕಾಲ ವ್ಯಯವಾಗುತ್ತದೆ. ಶಿಕ್ಷಣ ವಿಧಾನ ಸುಧಾರಣೆ ಹೆಸರಿನಲ್ಲಿ ನೆಡೆದಿರುವ ಸಂಕೀರ್ಣಮಯತೆ ಇಲ್ಲವಾಗಬೇಕು. ಶಿಕ್ಷಕರು ಇವೆಲ್ಲವುಗಳಿಂದ ಬೇಸತ್ತಿದ್ದಾರೆ. ಸರ್ಕಾರಗಳು ತಮಗೆ ಅಂಕಿ ಅಂಶಗಳೇ ಪ್ರಧಾನವಾಗಿದ್ದಲ್ಲಿ, ಬೇಕಾದರೆ ಚುನಾವಣಾ ಸಮೀಕ್ಷೆ ನೆಡೆಸುವ ಏಜೆನ್ಸಿಗಳಿದ್ದಂತೆ ಶಿಕ್ಷಣ ಕ್ಷೇತ್ರದ ಸಮೀಕ್ಷೆ ನೆಡೆಸಲಿಕ್ಕೆ ಏಜೆನ್ಸಿಗಳನ್ನ ನೇಮಿಸಿಕೊಳ್ಳಲಿ. ಶಿಕ್ಷಕರ ಜೀವ ಹಿಂಡುವುದರಿಂದ, ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಶಿಕ್ಷಕರು ಪಾಠ ಮಾಡುವುದರ ಬಗ್ಗೆ ಗಮನಹರಿಸುವುದನ್ನ ಬಿಟ್ಟು ಬಿಸಿಯೂಟ, ಜನಗಣತಿ, ದನಗಣತಿ ಅಂತಾ ಹೊರಟರೆ ವಿದ್ಯಾರ್ಥಿಗಳ ಗತಿ? ಶಿಕ್ಷಣ ಸುಧಾರಕರು ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆಗಳ ಸರಳೀಕರಣದ ಬದಲಾಗಿ ಶಿಕ್ಷಕರ ಕೆಲಸಗಳ ಸರಳೀಕರಣ ಮಾಡಬೇಕಿದೆ.
ಭವ್ಯ ಕರ್ನಾಟಕದಲ್ಲಿ ಸುಂದರ, ಸುಭದ್ರ, ಶುದ್ಧ ಕನ್ನಡದ ಕನಸೊಂದು ನನಸಾಗಲೆಂದು ಬಯಸುವೆ.
- ಗಣೇಶ್.ಕೆ, 2ganesh@gmail.com
ಕನ್ನಡ ಅಳಿವಿನಂಚಿನಲ್ಲಿರುವುದು ಗೊತ್ತಿದೆ. ಅದಕ್ಕೆ ಬೊಬ್ಬೆ ಹಾಕಿದರೆ ಏನೂ ಬರುವುದಿಲ್ಲ. ರಚನಾತ್ಮಕ ಕಾರ್ಯಕ್ರಮಗಳಿಂದ ಮಾತ್ರ ಸುಧಾರಣೆ ಸಾಧ್ಯ. ತಮ್ಮ ಎಲ್ಲ ಸಿದ್ಧಾಂತಗಳನ್ನು, “ಇಗೋ”ಗಳನ್ನು ಬದಿಗೆ ಸರಿಸಿ, ಇಗೋ ಬಂದೆ ಎಂದು ಬರಬೇಕಿದೆ.
ಕನ್ನಡೇತರರಿಗೆ ಕನ್ನಡದ ಕಲಿಸುವ, ಕನ್ನಡದ ಬಗ್ಗೆ ತಿಳಿಸಿ ಹೇಳುವ, ಕನ್ನಡ ನಾಡಿನ ಬಗ್ಗೆ ಸವಿಸ್ತಾರವಾಗಿ ವಿವರಿಸುವ ವ್ಯಕ್ತಿಗಳನ್ನು ತರಬೇತುಗೊಳಿಸಿ, ಕನ್ನಡ ಕಲಿಸುವ ಕೈಂಕರ್ಯಕ್ಕೆ ಕೈಹಾಕಬೇಕು. ಈ ಕೆಲಸವನ್ನು ಸಂಘ ಸಂಸ್ಥೆಗಳು, ಕನ್ನಡಪರ ಕಾಳಜಿಯುಳ್ಳ ವಿದ್ಯಾವಂತರು, ದುಭಾಷಿಗಳು ವಹಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಈ ನಿಟ್ಟಿನಲ್ಲಿ ಆಗಲೇ ಕಾರ್ಯನಿರತರಾಗಿರುವ ಸಮೂಹಗಳನ್ನ ಪ್ರೋತ್ಸಾಹಿಸಬೇಕು.
Categories: Uncategorized
Tagged: ಕನ್ನಡ, ಕನ್ನಡ ಅಭಿವೃದ್ಧಿ, ಕನ್ನಡ ರಾಜ್ಯೋತ್ಸವ, ಗಣೇಶ್, ತೇಜಸ್ವಿ, ಸಲಹೆಗಳು, Kannada
Categories: ಮಾಹಿತಿ
Tagged: ಕರ್ನಾಟಕ ವಿಧಾನ ಸಭಾ ಚು, ಚುನಾವಣಾ ಅಭ್ಯರ್ಥಿಗಳ , ಚುನಾವಣಾ ಮಾಹಿತಿ, election 2008, Election commission, Election web links, Karnataka election, Karnataka state poll
ಇದರ ಬಗ್ಗೆ ಬರೆಯಬೇಕೆಂದುಕೊಂಡಿದ್ದೆ. ಆದರೆ, ಸಾಧ್ಯವಾಗಿರಲಿಲ್ಲ. ಈಗ ಮತ್ತೊಮ್ಮೆ ಸಕಾಲ ಬಂದೊದಗಿದೆ. ಅಕ್ಷಯ ತೃತೀಯ ಅನ್ನೋ ಮಹಾನ್ “ಚಿನ್ನದ ಹಬ್ಬ”ವನ್ನ ಎಲ್ಲ ಪೇಪರ್ನೋರು, ಟೀವಿಯವರೂ ಅದ್ಧೂರಿಯಾಗಿ ಆಚರಿಸುವ ಕಾಲ ಬಂದಿದೆ. ನಾನು ಹುಟ್ಟಿದಾಗಿನಿಂದ ನೋಡ್ತಾ ಇದೀನಿ ಈ ರೀತಿ ಹಬ್ಬ ಇದೇ ಅನ್ನೋದೆ ಗೊತ್ತಿರಲಿಲ್ಲ..! ಮಾಧ್ಯಮಗಳು ಹೊಸ ಹೊಸ ಹಬ್ಬಗಳನ್ನ ಹುಟ್ಟುಹಾಕುವಲ್ಲಿ ಗಣನೀಯ ಪಾತ್ರವಹಿಸುತ್ತಿವೆ. ಅವಕ್ಕೆ ನಮ್ಮ ಧನ್ಯವಾದಗಳು.
ಚಿನ್ನ ಅನ್ನೋದು ದುಡ್ದಿನಂತೆ ಅಲ್ಲ. ಅದು ಕೇವಲ consumption. ದುಡ್ಡಿನಂತೆ Flow ಇರೋದಿಲ್ಲ. ಒಮ್ಮೆ ಬಂಗಾರ ಕೊಂಡುಕೊಂಡವರು ಮಾರೋದಿಲ್ಲ. ಕಷ್ಟಕಾಲಕ್ಕೆ ಅಂತಾ ಬಂಗಾರ ಮಾಡಿಕೊಳ್ಳೋದಕ್ಕೂ, ತರಕಾರಿ ಕೊಂಡುಕೊಂಡಂಗೆ ಬಂಗಾರ ಕೊಂಡುಕೊಳ್ಳೋಕೂ ವ್ಯತ್ಯಾಸವಿದೆ. ಈಗ ಆಗ್ತಾ ಇರೋದು ಎರಡನೇ ವಿಧದಲ್ಲಿ. ಬಂಗಾರವೇನು ಉದ್ಭವಿಸುತ್ತದಾ? ಒಂದು ಗ್ರಾಂ ಚಿನ್ನ ಸಿದ್ಧವಾಗಬೇಕು ಅಂದ್ರೆ, ಟನ್ನುಗಟ್ಟಲೇ ಮಣ್ಣನ್ನ ಅಗೀಬೇಕು. ಗಣಿಗಾರಿಕೆ ಮಾಡಬೇಕು. ಭೂಮಿಯಲ್ಲೇನು ತರಕಾರಿ ಬೆಳೆದಂತೆ ಚಿನ್ನದ ಅದಿರೂ ಬೆಳೆಯುತ್ತದೆಯಾ? ನಮ್ಮ ಹೆಣ್ಣುಮಕ್ಕಳು ಹತ್ತು ಗ್ರಾಂ ಚಿನ್ನ ಹಾಕಿಕೊಳ್ಳಲಿಕ್ಕೆ ಹತ್ತು ಟನ್ ನೆಲ ಅಗೀಬೇಕಾ..? ನಾವು ಬಳ್ಳಾರಿಯ ಗಣಿಗಳ ಬಗ್ಗೆ ಮಾತಾಡುತ್ತೇವೆ. ಬರಿದಾದ ಕೋಲಾರದ ಗಣಿ ಮರೆತು ಹೋಗುತ್ತೆ. ತುಂಬಾ limited ಆಗಿ ಬಳಸಬೇಕಾದ ವಸ್ತುಗಳು ಮಾಧ್ಯಮಗಳ ಉತ್ಪ್ರೇಕ್ಷೆಯಿಂದಾಗಿ ಬರಿದಾಗುವ ಕಾಲ ಬಂದಿದೆ. ಮಾಧ್ಯಮಗಳು ತಮ್ಮ ಜವಾಬ್ದಾರಿ ಮರೆತು ಕೇವಲ ಜಾಹೀರಾತಿನ ಆಸೆಗೆ ಅವರು ಹೇಳಿದ್ದನ್ನ ಬರೆದು ಪಾವನವಾಗುತ್ತಿವೆ. ಸ್ಪೆಷಲ್ ಎಡಿಷನ್ ಪುರವಣಿಗಳನ್ನ ಸಿದ್ಧಪಡಿಸಿ ಕೈಗಿಡುತ್ತಿವೆ. ದೊಡ್ಡ ದೊಡ್ಡ ಬಂಗಾರದಂಗಡಿವರಿಗೆ ದಲ್ಲಾಳಿ ಕೆಲಸ ಮಾಡುತ್ತಿವೆ.
ಬೆಂಗಳೂರಿಗೆ ಐಟಿ ಕಾಲಿಟ್ಟಾಗಿನಿಂದಾ ಬೆಂಗಳೂರಿನ ಖದರ್ರೇ ಬದಲಾಗಿ ಹೋಗಿದೆ. ತರಕಾರಿಗಳು ಹವಾನಿಯಂತ್ರಿತ ಶೋ ರೂಂಗಳಲ್ಲಿ ಸಿಗುತ್ತಿವೆ, ಕೇಜಿಗಟ್ಲೇ ಚಿನ್ನ ತರಕಾರಿಯಂತೆ ಬಿಕರಿಯಾಗುತ್ತಿದೆ..! ಮಹಿಳೆಯರ ಬಂಗಾರದಾಹಕ್ಕೆ ಇಡೀ ಜಗತ್ತಿನ ಚಿನ್ನದ ಗಣಿಗಳೆಲ್ಲಾ ಬರಿದಾಗುತ್ತಿವೆ. ಐದು ಆರು ಸಾವಿರವಿದ್ದ ಒಂದು ತೊಲ ಚಿನ್ನ ಹದಿಮೂರು ಸಾವಿರದ ಬಳಿಯಿದೆ. ಆದರೂ ಬೆಂಗಳೂರಿನಲ್ಲಿ ಚಿನ್ನ ಖರೀದಿ ಮಾಡುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಮೊದಲೇ ಹೇಳಿದೆನಲ್ಲ ಬೆಂಗಳೂರಿನ ಮಂದಿ ಬಳಿ ಕಾಂಚಾಣ ಝಣಝಣ ಅಂತಾ ಇದೆ. ಮಧ್ಯಮವರ್ಗದ ಸರ್ಕಾರಿ ನೌಕರಿ ಮಾಡೋರು, ಬೇರೆ ಇನ್ಕಂ ಇರದವರು ಈಗಲೂ ಬಂಗಾರ ಖರೀದಿ ಮಾಡಲಿಕ್ಕೆ ಕಷ್ಟವಿದೆ. ಮಗಳ ಮದುವೆಗೆ ಅಂತಾ ಚಿನ್ನ ಖರೀದಿ ಮಾಡಲಿಕ್ಕೆ ಮಧ್ಯಮವರ್ಗದವರಿಗೆ ತ್ರಾಸಿದೆ. ಆದರೆ, ಐಟಿ ಜಗತ್ತಿನಲ್ಲಿ ಆಗುತ್ತಿರುವ ಹಣದ ಚಲಾವಣೆಯಿಂದಾಗಿ “ಚಿನ್ನದ ಗ್ರಾಹಕರು” ತುಂಬಾ ಆಗಿದ್ದಾರೆ. ಒಮ್ಮೆ ಮಲ್ಲೇಶ್ವರದ ಸಂಪಿಗೆ ರೋಡಿನಲ್ಲಿ ತಿರುಗಾಡಿ ಬಂದರೆ ಸಾಕು ಬಂಗಾರದಂಗಡಿಗಳ ಸರಮಾಲೆಯೇ ಕಾಣಸಿಗುತ್ತದೆ. ಒಂದೊಂದು ಅಂಗಡೀಲೂ ನಮನಮೂನಿ ಆಫರ್ಗಳು. ಒಂದು ಕೇಜಿ ಚಿನ್ನ ಕೊಂಡರೆ ನೂರು ಗ್ರಾಂ ಫ್ರೀ..! ಹತ್ತು ಪರ್ಸೆಂಟ್ ಫ್ರೀ. ಅಕ್ಷಯ ತೃತೀಯವನ್ನ ಸಂಭ್ರಮದಿಂದ ಆಚರಿಸಿ ಅನ್ನೋ ಜಾಹಿರಾತುಗಳು ಕಣ್ಣಿಗೆ ರಾಚುತ್ತವೆ. ಭಾರತದ ಬೇರೆಡೆಗೆ ಈ ಮಟ್ಟಿಗಿನ ಬಂಗಾರದ ವ್ಯಾಪಾರ ಆಗ್ತಿದೆಯೋ ಇಲ್ಲವೋ ಅಂತಾ ಅನುಮಾನ ಶುರುವಾಗುತ್ತೆ.
ಒಮ್ಮೆ ದಾವಣಗೆರೆಯಲ್ಲಿ ಇನ್ಫೋಸಿಸ್ ಸುಧಾಮೂರ್ತಿಯವರ “ಮನದ ಮಾತು” ಪುಸ್ತಕ ಬಿಡುಗಡೆ ಸಮಾರಂಭವಿತ್ತು. ಅದಕ್ಕೆ ಹಾರ್ನಹಳ್ಳಿ ರಾಮಸ್ವಾಮಿಯವರೂ ಬಂದಿದ್ದರು. ಅವರು, ಒಮ್ಮೆ ಸುಧಾಮೂರ್ತಿಯವರನ್ನ ನೋಡಿ ನಮ್ಮ ಹೆಣ್ಣು ಮಕ್ಕಳು ಕಲಿತುಕೊಳ್ಳಬೇಕು ಅಂತಾ ಅಂದರು. ಸುಧಾಮೂರ್ತಿಯವರಿಗೆ ದುಡ್ಡಿಗೇನೂ ಕೊರತೆ ಇಲ್ಲ. ಸಾವಿರಾರು ಕೋಟಿ ರೂ ವ್ಯವಹಾರವಿದೆ. ಇನ್ಕಂ ಇದೆ. ಆದರೂ ಅವರ ಕೊರಳಲ್ಲಿ ಕರಿಮಣಿಸರ ಕಾಣಸಿಗುತ್ತೆ. ಕೇಜಿಗಟ್ಲೇ ಬಂಗಾರದ ಆಭರಣಗಳು ಕಂಗೊಳಿಸೋದಿಲ್ಲ. ವಿದೇಶೀಯರೂ ಆ ಮಟ್ಟಿಗಿನ ಬಂಗಾರದಾಹಿಗಳಲ್ಲ. ಆದರೆ, ನಮ್ಮ ಹೆಣ್ಣುಮಕ್ಕಳಿಗೇಕೆ ಬಂಗಾರದ ದಾಹ. ಅದು ಬಂಗಾರದ ಬಯಕೆಯೂ ಅಲ್ಲ. ತೀರದ ದಾಹ. ಇದು ಹೀಗೇ ಮುಂದುವರಿದರೆ, ಜಗತ್ತಿನ ಎಲ್ಲ ಚಿನ್ನದ ಗಣಿಗಳೂ ಬರಿದಾಗಬೇಕಾಗುತ್ತೆ. ಈಗಲೇ ಭಾರತ, ಚಿನ್ನದ ಬಹುದೊಡ್ಡ ಮಾರುಕಟ್ಟೆ ಪ್ರಪಂಚದಲ್ಲಿ. ಇಲ್ಲಿನ ಎಲ್ಲ ಹೆಣ್ಣುಮಕ್ಕಳೂ ರೇಸಿಗೆ ಬಿದ್ದವರಂತೆ ಬಂಗಾರ ಕೊಳ್ಳಹತ್ತಿದರೆ…. ಮುಂದೆ ಕೆಲವೇ ವರ್ಷಗಳಲ್ಲಿ ಬಂಗಾರ ಮ್ಯೂಸಿಯಂ ವಸ್ತುವಾಗಿಹೋಗುತ್ತೆ.
ಇನ್ನು ಮಾಧ್ಯಮಗಳು ಜನರ ಮತ್ತು ಸುತ್ತಮುತ್ತಲಿನ ಆಗುಹೋಗುಗಳ ನಡುವಿನ ಮಧ್ಯೆ ಸ್ನೇಹ ಸೇತುವಾಗಬೇಕಾದವುಗಳು ದಲ್ಲಾಳಿ ಕೆಲಸಕ್ಕೆ ಇಳಿದುಬಿಟ್ಟರೆ, ಅಕ್ಷಯ ತೃತೀಯ ಅಂತಾ ಉತ್ಪ್ರೇಕ್ಷೆ ಮಾಡಿ, ಬಂಗಾರ ಕೊಡಿಸುವ ಕೆಲಸಕ್ಕೆ ಇಳಿದುಬಿಟ್ಟರೆ, ವಿವೇಚನೆ ವಿಕಾರವಾದರೆ, ಜನಜಾಗೃತಿ ಗತಿ..?
Categories: Uncategorized
Tagged: akshaya trithiya, ಅಕ್ಷಯ ತೃತೀಯ, ಆಭರಣ, ಕೋಲಾರ ಗಣಿ, ಚಿನ್ನ, ಟಿವಿ, ಪೇಪರ್, ಮಾಧ್ಯಮಗಳು, ಸುಧಾಮೂರ್ತಿ, ಸುವರ್ಣ ದಿನ, gold., hindu festival, Infosys, jewels
ಚುನಾವಣೆ ಸುರುವಾಗಿದೆ. ಹಣ, ಹೆಂಡ, ಸೀರೆ, ಪಂಚೆ, ಟಿ.ವಿ, ಫ್ರಿಡ್ಜು ಮುಂತಾದ ಸಕಲ ಸಾಮಗ್ರಿಗಳನ್ನ ಹೊತ್ತ ಪಕ್ಷಗಳ ಕಾರ್ಯಕರ್ತರು ಮನೆ ಮನೆಗಳಿಗೆ ಲಗ್ಗೆ ಇಡುತ್ತಿದ್ದಾರೆ. ಚುನಾವಣಾ ಆಯೋಗದ ಕೆಂಗಣ್ಣಿನಿಂದಾಗಿ ಈಗ “ಉಡುಗೊರೆ” ನೀಡುವ ಪರಿ ಕೂಡಾ ಬದಲಾಗಿದೆ. ಮೊದಲು ಮೊದಲು ಮನೆಗಳಿಗೇ ಸಾಮಾನುಗಳನ್ನ ತಲುಪಿಸುತ್ತಿದ್ದವರು ಈಗ “ಕೂಪನ್” ನೀಡಿ, ನಿರ್ದಿಷ್ಟ ಅಂಗಡಿಗಳಲ್ಲಿ “ಉಡುಗೊರೆ” ಪಡೆಯುವಂತೆ ಸೂಚಿಸುತ್ತಿದ್ದಾರೆ. ರಾಜಕಾರಣಿಗಳೇನೋ ಆಮಿಷ ಒಡ್ಡುತ್ತಾರೆ. ಇಷ್ಟು ದಿನ ಹಾಯಾಗಿ ಗೂಳಿಗಳಂಗೆ “ತಿಂದುಂಡು” ಅಲೆದಾಡಿದ್ದಕ್ಕೆ ದಂಡ ಪಾವತಿಸುತ್ತಿದ್ದಾರೆ. ಆದರೆ, ಮತದಾರರರು ಇವರ ಋಣಭಾರದಲ್ಲೇಕೆ ಇರಬೇಕು ಎಂಬುದು ನನ್ನ ಪ್ರಶ್ನೆ. ರಾಜಕಾರಣಿಗಳಿಗೇ ಇಲ್ಲದ ನಿಯತ್ತು ನಮ್ಮ ಜನಕ್ಕೇಕೆ? ಎಲ್ಲರಿಂದನೂ ಬರೋದನ್ನೆಲ್ಲವನ್ನ ತೊಗೋಬೇಕು. ತಮಗೆ ಬೇಕಾದವರಿಗೆ ಒತ್ತಬೇಕು. ಆದರೆ, ಬಡವರ, ದಲಿತರ, ಸ್ಲಂ ಜನರ “ನಿಯತ್ತು” ಹೊಲಸು ರಾಜಕಾರಣಿಗಳನ್ನ ಇನ್ನೂ ಜೀವಂತ ಇಟ್ಟಿದೆ. ಮುಗ್ಧ ಜನರ ಮುಗ್ಧತೆಯನ್ನ ಎನ್ಕ್ಯಾಷ್ ಮಾಡಿಕೊಳ್ತಾ ಇದಾರೆ ಅಷ್ಟೇ.
ಇನ್ನ ಜಾಗೃತ, ಪ್ರಜ್ಞಾವಂತ ಮತದಾರ ಮಹಾಪ್ರಭುಗಳ ಬಗ್ಗೆ ಹೇಳಬೇಕು. ಮೊನ್ನೆ ಮೊನ್ನೆ ನೆಡೆದ ನಮ್ಮೂರಿನ ಕಾರ್ಪೊರೇಷನ್ ಎಲಕ್ಷನ್ಗೆ ಹೋಗಿದ್ದೆ ಮತದಾನಕ್ಕೇ ಅಂತಲೇ. ಬಹಳ ಜನ ಕಟಕಿಯಾಡಿದ್ದರು ನಿನೊಬ್ಬ ಓಟುಹಾಕದಿದ್ರೆ ಯಾವನಿಗೂ ಏನೂ ಆಗಲ್ಲ ಅಂತಾ. ಹೋದಾಗ, ಇರುವ ಎಲ್ಲಾ ಕ್ಷೇತ್ರಗಳನ್ನ ಒಮ್ಮೆ ಗಾಡಿಯಲ್ಲಿ ಸುತ್ತಿ ಬಂದಿದ್ದೇನೆ. ೨೦ ವರ್ಷಗಳಲ್ಲಿ ತಿರುಗಾಡದ ಪ್ರದೇಶಗಳನ್ನ, ಕೇವಲ ಹೆಸರು ಕೇಳಿದ್ದ ಪ್ರದೇಶಗಳನ್ನ, ಇನ್ನೂ ಕೆಲವು ಹೆಸರೇ ಕೇಳದ ಏರಿಯಾಗಳನ್ನ ಸುತ್ತಿಬಂದಿದ್ದೇನೆ. ಸಮೀಕ್ಷೆ ಮಾಡಿದ್ದೇನೆ. ಎಲ್ಲೆಲ್ಲಿ ಬಡವರಿದ್ದಾರೋ, ದಲಿತರಿದ್ದಾರೋ, ಸ್ಲಂ ನಿವಾಸಿಗಳಿದ್ದಾರೋ, ನಿರ್ಗತಿಕರಿದ್ದಾರೋ ಅಲ್ಲೆಲ್ಲಾ ಎಲಕ್ಷನ್ ಅಂದರೆ ಹಬ್ಬದ ವಾತಾವರಣ. ಕೆ.ಟಿ.ಜೆ ನಗರ, ನಿಟ್ಟುವಳ್ಳಿ, ಆಜಾದ್ ನಗರ, ಹಳೇ ದಾವಣಗೆರೆಯ ಪ್ರದೇಶಗಳು ಜನಸಂದಣಿಯ ಪ್ರದೇಶಗಳಾಗಿದ್ದವು. ಜನ ಮನೆಯಲ್ಲಿಯೇ ಇರಲಿಲ್ಲ..! ರೋಡ ತುಂಬೆಲ್ಲಾ ಜನ. ರಾಜಕಾರಣಿಗಳೂ, ಸಚಿವರಾಗಿದ್ದವರೂ ಆಗಾಗ ಬಂದು ಹೋಗುತ್ತಿದ್ದರು. ಬ್ಯಾನರ್ ಬಂಟಿಗ್, ಎಲ್ಲಾ ರಸ್ತೆ ತುಂಬೆಲ್ಲಾ ತುಂಬಿಕೊಂಡಿತ್ತು. ಯಾವ ಧಾರ್ಮಿಕ ಹಬ್ಬಗಳಲ್ಲೂ ಕಾಣಬರದ ಉತ್ಸಾಹ, ಹುಮ್ಮಸ್ಸು, ಹಬ್ಬದ ವಾತಾವರಣ. ಜನ ಓಟು ಹಾಕಲ್ಲಿಕ್ಕೆ ಕ್ಯೂನಲ್ಲಿ ನಿಂತಿದ್ದರು. ಇನ್ನೂ ಕೆಲವು “ವಿದ್ಯಾವಂತರ, ಪ್ರಜ್ಞಾವಂತರ” ಏರಿಯಾಗಳನ್ನ ತಿರುಗಾಡಿ ಬಂದಿದ್ದೇನೆ. ಎಸ್.ಎಸ್.ಲೇ ಔಟ್, ವಿದ್ಯಾನಗರಗಳಲ್ಲಿ, ಮೆಡಿಕಲ್, ಡೆಂಟಲ್ ಕಾಲೇಜುಗಳಿರುವ ಬಡಾವಣೆಗಳಲ್ಲಿ, ಆಂಜನೇಯ ಬಡಾವಣೆಗಳಲ್ಲಿ ಎಲಕ್ಷನ್ನಿನ ಕುರುಹುಗಳೇ ಕಾಣುತ್ತಿರಲಿಲ್ಲ. ಮತಗಟ್ಟೆಗಳ ಬಳಿ ಒಬ್ಬರೊ ಇಬ್ಬರೋ ಇರುತ್ತಿದ್ದರು. ಮತಗಟ್ಟೆ ಎಲ್ಲಿದೇ ಎಂಬುದೇ ಗೊತ್ತಾಗುವಂತಿರಲಿಲ್ಲ. ಆದರೆ, ಅದೇ ಕೆಳ ಮಧ್ಯಮ ವರ್ಗದ ಜನರಿರುವ ಏರಿಯಾಗಳಲ್ಲಿ, ನಿಮ್ಮದೊಂದು ಓಟು ಇದೆ ಅಂದರೆ ಕೈ ಹಿಡಿದುಕೊಂಡು ಹೋಗಿ ಇಲ್ಲಿದೆ ಮತಗಟ್ಟೆ, ಅಣ್ಣಾ ನಮ್ಮ ಪಕ್ಷಕ್ಕೇ ಓಟು ಹಾಕಿ ಗೊತ್ತಲ್ಲಾ… ಅಂತಾ ಅನ್ನೋ ಮಂದಿ ಇದ್ದರು.
ಎಷ್ಟು ವಿರೋಧಾಭಾಸಗಳಲ್ಲವಾ? ನಾವು ಯಾರನ್ನ ವಿದ್ಯಾವಂತರು, ಪ್ರಜ್ಞಾವಂತರು ಅನ್ನೋದು? ಮತ ಹಾಕದವರನ್ನಾ? ಕೈಗೆ ಸಿಕ್ಕಾಗಲೆಲ್ಲಾ ನಮ್ಮ ಭಾರತ ಹಿಂಗೇ ಅಂತಾ ಹೀಗಳೆಯುವವರನ್ನಾ..? ನಮ್ ದೇಶ ಇನ್ನು ಉದ್ಧಾರ ಆಗೋಲ್ಲ ಅನ್ನೋ ಜೋಬದ್ರಗೇಡಿಗಳನ್ನಾ..? ಒಮ್ಮೆ ಯೋಚಿಸಬೇಕಾಗಿದೆ. 40*60 ಸೈಟುಗಳಿರುವ, ಮನೆಗಳಿರುವ ಏರಿಯಾಗಳಲ್ಲಿ ಮನೆಗೆ ಒಬ್ಬರೋ ಇಬ್ಬರೋ ಇರುತ್ತಿದ್ದರು. ಒಮ್ಮೊಮ್ಮೆ ಅದೂ ಇಲ್ಲ. ಎಲಕ್ಷನ್ನು ಬಂತೆಂದ್ರೆ, ರಜಾ ದಿನ ಕಳೆಯಲು ತಮ್ಮೂರಿಗೋ, ಮಗನೂರಿಗೋ ಪಿಕ್ನಿಕ್ ಹೊರಟುಬಿಡುತ್ತಿದ್ದರು. ರಾಜಕಾರಣಿಗಳು ನೋಡೋದು ತಲೆಗಳನ್ನ, ಎಣಿಸೋದು ತಲೆಗಳನ್ನ, ಓಟುಗಳನ್ನ. ಐಶ್ವರ್ಯವನ್ನಲ್ಲ. 10*10 ಇರೊ ಕೆಳಮಧ್ಯಮ ವರ್ಗದ, ಬಡವರ, ಹಿಂದುಳಿದವರ ಮನೆಗಳಲ್ಲಿ ಹತ್ತು ಓಟುಗಳಿರುತ್ತವೆ. ಒಬ್ಬರ ಮನೆಗೆ ಹೋಗಿ ಬಂದರೆ, ಅವರನ್ನ ಒಲಿಸಿಕೊಂಡರೆ, 10ಓಟು ಅನಾಮತ್ತಾಗಿ ಬಿತ್ತು ಅಂತಾನೇ ಅರ್ಥ. ವಿದ್ಯಾವಂತರ ಮನೆಗಳಲ್ಲಿ ಒಬ್ಬರು, ಇಬ್ಬರು ಇರುವ ಮನೆಗಳಲ್ಲಿ, ಇರುವ ಮಂದಿನೂ ಓಟು ಹಾಕದಿದ್ರೆ, ರಸ್ತೆ ಚರಂಡಿ ಲೈಟು ಎಲ್ಲಾ ಬರ್ತವಾ? ಕೈಯ್ಯಾಗೆ ಜುಟ್ಟು ಹಿಡ್ಕಳಕ್ಕೆ ಕೊಟ್ಟರೂ ಹಿಡಿದುಕೊಳ್ಳದ ಮಂದಿಯನ್ನೇನಾ ವಿದ್ಯಾವಂತರು, ಬುದ್ಧಿವಂತರು ಅನ್ನೋದು?
ಎಲ್ಲೆಲ್ಲಿ ಚುನಾವಣೆ ಅಬ್ಬರ ಹೆಚ್ಚಾಗಿತ್ತೋ ಅಲ್ಲೆಲ್ಲಾ ಸಿಮೆಂಟು ರೋಡುಗಳಾಗಿವೆ. ಪಾಪ, ಬಡವರು, ಸೂರಿದ್ದೂ ಕಡಿಮೆ ಜಾಗವಿರುವವರು, ಮಲಗೋದೇ ರಸ್ತೆಗಳ ಮೇಲೆ. ಹಾಗಾಗಿ ಓಟುಗಳಿರುವ ಕಡೆಗಳೆಲ್ಲಾ ಸಿಮೆಂಟು ರಸ್ತೆಗಳಾಗಿವೆ. ಅದೇ ವಿದ್ಯಾ ನಗರ, ಆಂಜನೇಯ ಬಡಾವಣೆ, ಎಸ್.ಎಸ್.ಲೇ ಔಟ್ಗಳಲ್ಲಿ ಒಂದು ಸರಿಯಾದ ಮಣ್ಣಿನ ರಸ್ತೇನೂ ಇಲ್ಲ. ಯಾಕಂದ್ರೆ, ಬರೀ ಮಾತಿನ ಮಲ್ಲರು ಸಿಗಬಲ್ಲರು, ದೇಶದ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ನೀಡುವ ಮಂದಿ ಸಿಗಬಲ್ಲರೇ ಹೊರತು ಮತದಾರರಲ್ಲ. ಎಲ್ಲೆಲ್ಲೆ ಮತದಾನ ನೆಡೆಯುವುದಿಲ್ಲವೋ ಆ ಕ್ಷೇತ್ರಗಳನ್ನ ರಾಜಕಾರಣಿಗಳು ನಿರ್ಲಕ್ಷಿಸಿಬಿಡುತ್ತಾರೆ. ಅವು ಅಸಲಿಗೆ ಸವಾಲುಗಳೇ ಅಲ್ಲ. ಅವರ ಮತಗಳು ನಿರ್ಣಾಯಕವಲ್ಲ. ನಿರ್ಣಾಯಕ ಮತಗಳಾಗದ ಹೊರತು ರಾಜಕಾರಣಿಗಳು ಗಮನ ಹರಿಸುವುದಿಲ್ಲ. ಹಾಗಾಗಿ 10-15 ವರ್ಷಗಳಾದರೂ ಏರಿಯಾಗಳು ಧೂಳು ಮಣ್ಣಿನಲ್ಲೇ ಇರಬೇಕಾಗುತ್ತದೆ. ಇದನ್ನ ನಮ್ಮ ಮಾನ್ಯ”ವಿದ್ಯಾವಂತ, ಪ್ರಜ್ಞಾವಂತ” ಮತದಾರರು ತಿಳಿಯುವುದೇ ಇಲ್ಲ.
ಹರಿಜನ ಕೇರಿಗಳಲ್ಲಿ, ಬಡವರ ಏರಿಯಾಗಳಲ್ಲಿ ಜನ ಹೆಂಡ, ಹಣ, ಸೀರೆ, ಪಂಚೆಗಳಿಗೆ ತಮ್ಮ ಮತಗಳನ್ನ ಮಾರಿಕೊಂಡಿರಬಹುದು. ಆದರೆ, ಅವರು ಮತದಾನ ಮಾಡಿದ್ದಾರೆ. ತಮ್ಮ ಕ್ಷೇತ್ರದ ಮತಗಳು, ತಮ್ಮವರ ಮತಗಳು ನಿರ್ಣಾಯಕವಾಗುವಂತೆ ಮಾಡಿದ್ದಾರೆ. ಇದು ಮಹತ್ಕಾರ್ಯವಲ್ಲವೇ? ಇವರು ವಿವೇಚನಾಪೂರಿತ ಮತದಾರರಾಗಿಲ್ಲದೇ ಇರಬಹುದು ಆದರೆ, ಪ್ರಜ್ಞಾವಂತ ಮತದಾರರು. ಮತದಾನದ ಪ್ರಜ್ಞೆಯಿದೆ ಅವರಲ್ಲಿ.
Categories: ದಾವಣಗೆರೆ · ವಿಚಾರವಾದ
Tagged: ಆಮಿಷ, ಚುನಾವಣೆ, ಪ್ರಜ್ಞಾವಂತ, ಮತದಾನ, ಮತದಾರ, ಸಮೀಕ್ಷೆ, Davangere, Election, Karnataka

ಇತ್ತೀಚೆಗೆ ಭಾರತಕ್ಕೆ ಬಂದ ಹೊಸ ನೆಟ್ವರ್ಕ್ Virgin mobile ಎಲ್ಲ ಬಸ್ಸ್ಟ್ಯಾಂಡು, ಗೋಡೆ, ಪರದೆ, ಎಲ್ಲವುಗಳ ಮೇಲೆ ತನ್ನ ಆಗಮನದ ಮಾಹಿತಿಯನ್ನ, ಜಾಹೀರಾತನ್ನ ಹಾಕಿದೆ. ಈ ಬರಹದ ಜೊತೆ ಅದನ್ನೂ ಮೇಲೆ ಲಗತ್ತಿಸಿದ್ದೇನೆ. ಅದರಲ್ಲಿ ಕಾಲೇಜಿಗೆ ಹೋಗೋ ಥರ ಇರೋ ‘Virgin ಯುವತಿ’ ಪುಸ್ತಕಗಳನ್ನ(ಕಾಲೇಜಿನವು ಅಂದುಕೊಳ್ಳಬಹುದು) ಮಡಿಚಿದ ಸ್ಟೈಲಿಷ್ ಕೈಯ್ಯಲ್ಲಿ ಹಿಡಿದಿದ್ದಾಳೆ. ಇನ್ನೊಂದು ಕೈ ವರ್ಣಿಸೋಣ ಅಂದರೆ, ಅದು ಮೊಣಕೈವರೆಗೆ ಅಷ್ಟೇ ಇರೋದು. ಹಾಗಾಗಿ ಚಾನ್ಸ್ ಇಲ್ಲ..! ಈಗ ‘ನೇರವಾಗಿ’ ವಿಷಯಕ್ಕೆ ಬರೋಣ. ಈ ಮೊಬೈಲ್ ನೆಟ್ವರ್ಕನ್ನ ಪ್ರಮೋಟ್ ಮಾಡಲಿಕ್ಕೆ ಆಕೆ ಫೋನ್ ಮಾಡಲಿಕ್ಕೆ ಹೇಳಬೇಕಲ್ಲ ಈ ಜಾಹೀರಾತು ನೋಡಿದವರಿಗೆ..? ಫೋನ್ ನಂಬರ್ರು ಆಕೆ ಧರಿಸಿದ ಟೀ ಶರ್ಟ್ ಮೇಲಿದೆ. ಎಲ್ಲರೂ ಇಲ್ಲಿಗೆ ಫೋನಾಯಿಸಿ ಅಂತಾ Editorial(’ಎದಿತೋರಿಯಲ್’..!??) ಬರೆದುಕೊಂಡಿದ್ದಾಳೆ. ಹುಡುಗರು ಜಾಹೀರಾತಲ್ಲಿ ಹುಡುಗಿ ಚಿತ್ರ ಹಾಕಿದ್ರೆ, ಮೊದಲು ಮುಖ ನೋಡ್ತಾರೋ ಇಲ್ವೋ ಆದ್ರೆ ಎಲ್ಲಿ ನೋಡ್ತಾರೋ ಅಲ್ಲಿನೇ ಫೋನ್ ನಂ. ಹಾಕಿದ್ದಾರೆ. ಇದೇ ಅಲ್ವಾ ಬಿಸಿನೆಸ್ಸು ಅಂದ್ರೆ..??
ಅಲ್ಲಿಗೆ ಹುಡುಗರನ್ನ ಸೆಳೆದಿದ್ದಾಯಿತು. ಇನ್ನ ಹುಡುಗಿಯರಿಗೆ ಈ ಹೆಸರೇ ಆಪ್ಯಾಯಮಾನವಾಗಿರುವಂತೆ ಇಟ್ಟಿದ್ದಾರೆ. ಹುಡುಗಿಯರಿಗೆ Virgin ಅಂದ್ರೆ ಏನೋ ಹೆಮ್ಮೆ, ಗೌರವ, ಆತ್ಮಾಭಿಮಾನ, ಇಲ್ಲಿಯವರೆಗೂ ಅಖಂಡ ಬ್ರಹ್ಮಚರ್ಯ(ಇಲ್ಲಿ ಬ್ರಹ್ಮನೇ ಯಾಕೆ..? ಸ್ತ್ರೀಲಿಂಗ ಇಲ್ವಾ?) ಪಾಲಿಸಿದ್ದರ ಧ್ಯೋತಕವಾದ virginal ಹೆಸರು. ಅಲ್ಲಿಗೆ ಹುಡುಗಿಯರಿಗೂ ಪ್ರೀತಿಪಾತ್ರವಾದ ಮೊಬೈಲಾಗುವ ಸಕಲ ಅರ್ಹತೆಗಳನ್ನೂ ಪಡೆದುಕೊಂಡಂತಾಯಿತು. ತಮಗೆ ‘Virgin ಹುಡುಗಿಯರೇ’ ಬೇಕೆಂದು ಬಯಸುವ ಹುಡುಗರಿಗೆ ಆಕಾಶಕ್ಕೆ ಒಂದು ನ್ಯಾನೋಮೀಟರ್ ಉಳೀತು ಅಷ್ಟೇ. ಇಬ್ಬಂದಿತನವೆಂದರೆ, Virginity is not a dignity. Its a loss of opportunity ಅಂತಾ ಛೇಡಿಸುವ ಹುಡುಗರೂ ‘ಕನ್ಯೆ’ಯರನ್ನೇ ಮದುವೆಯಾಗಬಯಸುತ್ತಾರೆ..!
ಸಾಮಾನ್ಯವಾಗಿ ಹುಡುಗರು ಹುಡುಗಿಯರಿಗೆ* ಫೋನಾಯಿಸುತ್ತಾರೆ. ತಮ್ಮ ಪ್ರಿಯತಮೆಯಾಗಿರಬಹುದು, ಗೆಳತಿಯಾಗಿರಬಹುದು, ಜತೆಗಾರ್ತಿಯಾಗಿರಬಹುದು ಅಥವಾ ಸಂಗಾತಿಯಾಗಿರಬಹುದು. ಗಮನಿಸತಕ್ಕ ಅಂಶವೆಂದರೆ, ಹುಡುಗರು ಹುಡುಗಿಯರಿಗೆ call ಮಾಡುವುದು ಹುಡುಗಿಯರು ಹುಡುಗರಿಗೆ ಫೋನಾಯಿಸುವುದಕ್ಕಿಂತ ಜಾಸ್ತಿ. ‘ಮೀಟರ್’ ಹಾಗಾಗಿ ಜಾಸ್ತಿ ಆಗ್ತಿರ್ತದೆ. ಇದನ್ನೇ ಗಮನಿಸಿ, ಮೊಬೈಲ್ ಕಂಪನಿಯವರು ತಾರುಣ್ಯಭರಿತ ಯುವತಿಯ ಜಾಹೀರಾತು ಹಾಕಿದ್ದಾರೆ. ಎಷ್ಟೇ ಆಗಲಿ ಅನ್ಯಲಿಂಗ ಆಕರ್ಷಣೆ ಇಲ್ಲದಿರುತ್ತದೆಯೇ? ಹುಡುಗರಂತೂ ಬಲೆಗೆ ಬೀಳ್ತಾರೆ ಅಂತಾ ಗೊತ್ತು. ಸ್ತ್ರೀ ದ್ವೇಷಿಗಳು, I mean ಒಬ್ಬ ಹುಡುಗಿಯನ್ನ ಕಂಡರೆ ಮತ್ತೊಬ್ಬ ಹುಡುಗಿಗಾಗುವುದಿಲ್ಲವಲ್ಲ ಅವರು, ಈ ಮೊಬೈಲನ್ನ ಖರೀದಿಸದೇ ಹೋಗಬಹುದು. ಇಲ್ಲಿ ಇನ್ನೊಂದು possibility ಇದೆ. ತಮಗೆ ‘Virgin’ ಹುಡುಗಿ ಬೇಕೆಂದು ಹಟ ಹಿಡಿಯುವ ಹುಡುಗರು, ತಮ್ಮ ಹುಡುಗಿಗೇ ಈ ಮೊಬೈಲನ್ನ ಕೊಡಿಸಿ virgin ಆಗಿಸಬಹುದು. ಮೊಬೈಲನ್ನ ಕೊಡಿಸಲು ಇನ್ನೊಂದು ಕಾರಣವೂ ಇದೆ. ಈ virgin mobile ಗೆ ಬರುವ ಒಳಬರುವ ಕರೆಗಳಿಗೆ ನಿಮಿಷಕ್ಕೆ 10ಪೈಸೆ ಬರುತ್ತದೆ. ಹಾಗಾಗಿ ಗಂಟೆಗಟ್ಟಲೇ ಮೀಟರ್ ಹೊಡೆದು ತಮ್ಮ ದುಡ್ಡು ಖರ್ಚು ಮಾಡಿಕೊಂಡು, ಪ್ರಣಯ ಸಲ್ಲಾಪ ನೆಡೆಸುವ ಯುವಕರು, ತಮ್ಮ incoming call ನಿಂದಾದರೂ ತಮ್ಮ ಹುಡುಗಿಯ ಮೊಬೈಲಿಗೆ ಹಣಸಂದಾಯವಾಗಲೆಂಬ ಮಹದಾಸೆ..! ಯಾಕಂದ್ರೆ, ಬಹಳ ಸಲ, ತಾವೇ ಕರೆನ್ಸಿ ಹಾಕಿಸಿಕೊಡಬೇಕಲ್ಲ..!!
(* conditions apply ಹುಡುಗಿಯರು ಗೊತ್ತಿದ್ದರೆ).
ಉಳಿದೆಲ್ಲ ನೆಟ್ವರ್ಕ್ಗಳಿಗೆ ಕನ್ನಡೀಕರಣ ಮಾಡಿದ ಹೆಸರುಗಳಿವೆ
Airtel - ಗಾಳಿದೂರವಾಣಿ
Spice - ಮಸಾಲೆ ದೂರವಾಣಿ
Vodaphone - ವಡೆ ದೂರವಾಣಿ
ಇಲ್ಲಿ ಗಂಭೀರ ಸಮಸ್ಯೆ ಎದುರಾಗಿರೋದು ಸದರಿ ಫೋನಿನ ಕನ್ನಡೀಕರಣದ್ದು. ಹಾಗಾಗಿ, ಎಲ್ಲ ಅಂತರ್ಜಾಲ ಕನ್ನಡಿಗರು, ಬ್ಲಾಗಮಂಡಲಾಧಿಪತಿಗಳು, ಕನ್ನಡ ‘ಪ್ರೇಮಿಗಳು’ ಇರುವ ಗಂಭೀರ ಚರ್ಚೆಗಳನ್ನೆಲ್ಲಾ ಇರುವಲ್ಲಿಯೇ ಬಿಟ್ಟು ಬರಬೇಕಿದೆ. ಇದಕ್ಕೆ ‘ಕನ್ಯಾ ದೂರವಾಣಿ’ ಎಂದು ಹೆಸರಿಸಬೇಕೋ ಇಲ್ಲಾ ‘ಕನ್ಯತ್ವ ದೂರವಾಣಿ’ ಅನ್ನಬೇಕೋ ತಿಳಿಯದಾಗಿದೆ. ಯಾಕೆಂದರೆ ಇದೊಂದು ರೀತಿ ಅನನ್ಯತೆ ಹೊಂದಿದೆ. ಹಾಗಾಗಿ ಕನ್ಯಾನನ್ಯ ದೂರವಾಣಿ ಎಂದು ನಾಮಕರಣ ಮಾಡಬಹುದೇನೋ ಎಂಬ ಬಗ್ಗೆ ಅನುಮಾನವಿದೆ. ಓದುಗರು suggest ಮಾಡಿದರೆ ಒಳ್ಳೇದು.
ಇಲ್ಲಿ ಇನ್ನೊಂದು ಸ್ವಾರಸ್ಯಕರ ಸಂಗತಿ ಇದೆ. Call me 09250362436 ಅಂತಾ ಎದೆಯ ಮೇಲೆ ಧರಿಸಿರುವ ಯುವತಿ, ಅಖಂಡ ಬ್ರಹ್ಮಚಾರಿಣಿ, ಕನ್ಯತ್ವ ಪರಿಭಾಷಿಣಿ ಹೀಗೆ ಒಮ್ಮಿಂದೊಮ್ಮೆಲೇ ‘ಕಾಳ್ ಮಿ’ ಎಂದರೆ ತುಂಟ ಹುಡುಗರು ‘ಕಾಳು ಹಾಕುವುದಕ್ಕೆ’ ಸಕಲ ತಯಾರಿ ಮಾಡಿಕೊಳ್ಳಲು ತಲೆ ಕೆರೆದುಕೊಳ್ಳುವಂತೆ ಮಾಡಿದ್ದೇಕೆ?
Categories: ಸ್ವಾರಸ್ಯ
Tagged: ಕನ್ಯತ್ವ, ಕನ್ಯೆ, ಕಾಲೇಜ್, ದೂರವಾಣಿ, ನಾಮಕರಣ, ವರ್ಜಿನ್ ಮೊಬೈಲ್, ಸಂಪರ್ಕ, ಸ್ವಾರಸ್ಯ, ಹುಡುಗರು, ಹುಡುಗಿಯರು, virgin mobile
ಅಂತರ್ಜಾಲದಲ್ಲಿ ಪರಿಚಯರಾದ ದಾವಣಗೆರೆಯ ಗೆಳೆಯ ಸುಪ್ರೀತ್ರವರ ‘ಸೂರ್ಯನ ಶಿಕಾರಿ’ ಬ್ಲಾಗ್ನಲ್ಲಿ ಅವರು ಬರೆದ ಮರ್ಯಾದಸ್ಥರ ಮಾನನಷ್ಟ ಪ್ರಸಂಗ… ಲೇಖನಕ್ಕೆ ಪ್ರತಿಕ್ರಿಯೆ.
ಪ್ರೀತಿಯ ಸಂಪ್ರೀತ್
ಖಂಡಿತವಾಗಿ ಇದು ಚಿಂತನಾಶೀಲ, ವಿಮರ್ಶಾ ಲೇಖನ. ರವೀಂದ್ರ ರೇಷ್ಮೆಯವರು ತಮ್ಮ ವಿಕ್ರಾಂತ ಕರ್ನಾಟಕದಲ್ಲಿ ರವಿ ಬೆಳಗೆರೆ ಬಗ್ಗೆ, ಅವರ ಬೆಳವಣಿಗೆಗಳ ಹಸಿವಿನ ಬಗ್ಗೆ, ಹಪಹಪಿತನದ ಬಗ್ಗೆ ಬರೆದಿದ್ದರು. ಅದಕ್ಕೆ ಉತ್ತರವಾಗಿ ರವಿ ತಮ್ಮ ಸಂಪಾದಕೀಯದಲ್ಲಿ ಉತ್ತರವನ್ನೂ ನೀಡಿದ್ದಾರೆ. ಕರ್ನಾಟಕದ ಯಾವ ಪತ್ರಕರ್ತನೂ ಹೋಗದ ಸ್ಥಳಗಳಿಗೆ, ದೇಶಗಳಿಗೆ ಹೋಗಿ ಬಂದು ವರದಿ ಮಾಡಿದ್ದಾರೆ. ಸ್ವಲ್ಪ ವೈಭವೀಕರಣ ಜಾಸ್ತಿಯಾಯಿತು ಅಂತಾ ಒಪ್ಪಿಕೊಳ್ಳುತ್ತೇನೆ. ಬದುಕಿನ ಚಲನಶೀಲತೆಗೆ, ಪ್ರಯೋಗಶೀಲತೆಗೆ, ಹೊಸ ಅನುಭವಗಳಿಗೆ ಎದುರಾಗುವ ಕ್ರಿಯಾಶೀಲತೆ ರವಿ ಬೆಳಗೆರೆಯಲ್ಲಿದೆ. ತಝಕಿಸ್ಥಾನ, ಕಝಕಿಸ್ಥಾನ, ಪಾಕಿಸ್ಥಾನ, ಅಫಘನಿಸ್ಥಾನ ಮುಂತಾದ ಹೆಸರೇ ಕೇಳದ ದೇಶಗಳಿಗೆ ಹೋಗಿ ಬಂದಿದ್ದಾರೆ. ಬರೀ ಹೋಗಿ ಬಂದಿಲ್ಲ. ಅಲ್ಲಿನ ಪರಿಸ್ಥಿತಿಗಳನ್ನು ವಿವರಿಸಿದ್ದಾರೆ, ವಿಶ್ಲೇಷಿಸಿದ್ದಾರೆ. ಮುಸ್ಲಿಂ ಪುಸ್ತಕ ಬರೆಯುವಾಗ, ಮುಸ್ಲಿಂ ಕಟ್ಟರ್ವಾದಿಗಳ ಬಗ್ಗೆ ಬರೆಯುವಾಗ ಒಂದು ಮಾತು ಬರೆದಿದ್ದಾರೆ. ‘ಇಲ್ಲಿ ಕುಳಿತು ಮುಸ್ಲೀಮರ ಪರವಾಗಿ ಅಥವಾ ಮುಸ್ಲೀಮರ ವಿರುದ್ಧವಾಗಿ ಮಾತನಾಡುವವರಿಗಿಂತ ನನ್ನ ಅನುಭವಗಳು ಬೇರೆಯಾಗಿಯೇ ನಿಲ್ಲುತ್ತವೆ’ ಎಂದಿದ್ದಾರೆ. ಅದು ಅಕ್ಷರಶಃ ಸತ್ಯ. ಯಾಕೆಂದರೆ, ಇಲ್ಲಿನ ಯಾರೂ ಅಫಘನಿಸ್ಥಾನವನ್ನಾಗಲೀ, ಪಾಕಿಸ್ಥಾವನ್ನಾಗಲೀ ನೋಡಿದವರಲ್ಲ. ನೋಡಿದ್ದರೂ ಉಗ್ರಗಾಮಿಗಳನ್ನು ಕಂಡು ಅವರ ಅಭಿಪ್ರಾಯ ತಿಳಿದುಬಂದವರಲ್ಲ. ಆದರೂ ಇಲ್ಲಿ ಕುಳಿತು, ಅಧಿಕಾರವಾಣಿಯಿಂದ ಬರೆಯುತ್ತಾರೆ, ಮಾತಾಡುತ್ತಾರೆ. ಇದು ವಸ್ತುಸ್ಥಿತಿ ಅರಿಯದ ಜಾಣ ಮೌನ ಅಲ್ಲವೇ?
ಇಂದು ಹಾಯ್ ಬೆಂಗಳೂರು ರಾಜ್ಯಾದ್ಯಂತ ಮಾತ್ರವಲ್ಲದೇ ಸೌದಿ ಅರೇಬಿಯಾಗಳಿಗೂ ಪಸರಿಸಿದೆ ಎಂದರೆ ಅದರ ಅಗಾಧತೆ ನಮ್ಮ ಅರಿವಿಗೆ ಬಾರದಿರದು. ಹೊರ ರಾಜ್ಯವನ್ನು ಮುಟ್ಟುವ, ಜನ ಪತ್ರಿಕೆಗಾಗಿ ಹಪ ಹಪಿಸುವ ಪರಿಸ್ಥಿತಿ ಸೃಷ್ಟಿಸಿರುವ ಪತ್ರಿಕೆಗಳನ್ನು ತೋರಿಸಿ ನೋಡೋಣ. ರವಿಗೆ ಹಪ ಹಪಿತನವಿತ್ತು, ಬೆಳವಣಿಗೆಯ ಹಸಿವಿತ್ತು. ಆ ಓದಿನ ಹಸಿವನ್ನು ಓದುಗರಿಗೂ ವಿಸ್ತರಿಸಿದ ಖ್ಯಾತಿ ಅವರದು. ಆದರೆ, ಈ ಯಾವುದನ್ನೂ ಗಮನಿಸದೇ ಬೆಳೆಯುವ ಅನಿವಾರ್ಯತೆ ಇತ್ತು. ಬೆಳೆದರು ಅನ್ನುವುದು ವೃತ್ತಿ ಮಾತ್ಸರ್ಯದ ನೆಲೆಗಟ್ಟಿನಲ್ಲಿ ಬಂದ ಬರವಣಿಗೆ ಏನೋ ಎಂದೆನಿಸದಿರದು. ಇವತ್ತಿಗೂ ಕರ್ನಾಟಕದ ಟ್ಯಾಬ್ಲಾಯ್ಡ್ಗ್ ಗಳಲ್ಲಿ ಪಕ್ಷಪಾತ ರಾಹಿತ್ಯವಾಗಿ ಬರೆಯುವ ಪತ್ರಿಕೆಗಳು ಎಷ್ಟಿವೆ ಹೇಳಿ? ಲಂಕೇಶ್ ಪತ್ರಿಕೆಯವರಿಗೆ ಬಿ.ಜೆ.ಪಿ ಕಟ್ಟಾ ವಿರೋಧಿ, ಕೋಮುವಾದಿ. ಅವರು ಆ ನಿಲುವು ತಳೆದಿರುವುದು ಪ್ರಶ್ನಾರ್ಹವೇನಲ್ಲ. ಅಭಿವ್ಯಕ್ತಿ ಸ್ವಾತಂತ್ರವಿದೆ. ಒಂದು ಪಕ್ಷಕ್ಕೆ ವಿರೋಧವಿರದಿದ್ದರೆ, ಅವರ ಉಪಟಳ ಸಹಿಸಲಾಗದು. ಆದರೆ, ವಸ್ತು ನಿಷ್ಟತೆ, ತಟಸ್ಥತೆ ಇದೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಜೆ.ಡಿ.ಎಸ್, ಕಾಂಗ್ರೇಸ್ ಗಳು ಏನೇ ವಿವೇಚನಾಹೀನ ಕೆಲಸ ಮಾಡಿದರೂ ಜಾತ್ಯಾತೀತ ಪಕ್ಷಗಳೆಂದು ಬೆಂಬಲಕ್ಕೆ ನಿಂತುಬಿಡುವುದು ಅಪಾಯಕಾರಿಯಲ್ಲವೇ? ಆದರೆ, ಹಾಯ್ ಬೆಂಗಳೂರು ಯಾವ ಪಕ್ಷಗಳನ್ನೂ ಬೆಂಬಲಿಸಿಲ್ಲವಲ್ಲ. ಬಿ.ಜೆ.ಪಿ ಬಗ್ಗೆ ಒಂದಿಷ್ಟು ಸಾಫ್ಟ್ ಕಾರ್ನರ್ ಹೊಂದಿರಬಹುದು. ಅದೂ ಈ ರಾಜಕೀಯ ರಾದ್ಧಾಂತಗಳೆಲ್ಲಾ ಆದ ಮೇಲೆ. ಆದರೆ, ಎಂದೂ ಅವರು ಮಾಡಿದವುಗಳನ್ನು ನಾಚಿಕೆ ಬಿಟ್ಟು ಬೆಂಬಲಿಸಿಲ್ಲ. ಇದಕ್ಕಿಂತ ಮೊದಲು ಕುಮಾರ ಸ್ವಾಮಿ ಹವಾ ಇದ್ದಾಗ ಕುಮಾರಣ್ಣನನ್ನೂ ಬೆಂಬಲಿಸಿದ್ದರು. ಸಮಯ ಬಂದಾಗ ಕ್ಯಾಕರಿಸಿ ಥೂ ಅಂದ್ದದ್ದೂ ಆಯಿತು. ಆದರೆ, ಅಧಿಕಾರ ಹಸ್ತಾಂತರ ಪ್ರಹಸನ ನೆಡೆಯುವಾಗ, ಬಿ.ಜೆ.ಪಿ ಗೆ ಅಧಿಕಾರ ನೀಡಬಾರದೆಂದು ಹೇಳುತ್ತಾ, ವಿಶ್ವಾಸದ್ರೋಹವನ್ನೂ ಸಮರ್ಥಿಸಿಕೊಂಡವಲ್ಲಾ ಕೆಲವು ಜಾತ್ಯಾತೀತ ಪತ್ರಿಕೆಗಳು, ಹಾಗೇನೂ ಹಾಯ್ ಬೆಂಗಳೂರು ಮಾಡಲಿಲ್ಲ. ಇನ್ನೊಂದು ಸಂಗತಿ ಎಂದರೆ, ಹಿಂದೂ ಮುಸ್ಲಿಂ ವ್ಯತ್ಯಾಸಗಳ ಬಗ್ಗೆ ನಿರ್ಭಾವುಕ ಮನಸ್ನಿನಿಂದ ವಿಶ್ಲೇಷಣೆ ಮಾಡಿದ್ದು ರವಿ.
ಇಷ್ಟೆಲ್ಲಾ ಹೇಳಿ, ನಾನು ರವಿಯವರನ್ನು ಹೊಗಳುತ್ತಿದ್ದೇನೆಂದೇನಲ್ಲ. ಆದರೆ, ಜಡ್ಡುಗಟ್ಟಿದ ಪತ್ರಿಕೋದ್ಯಮಕ್ಕೆ, ಒಂದಷ್ಟು ಹೊಸತನವನ್ನು, ಭಾವನಾತ್ಮಕತೆಯನ್ನೂ ನೀಡಿದ್ದು ರವಿ ಬೆಳಗೆರೆ. ಹಾಯ್ ಬೆಂಗಳೂರು ಇಂದಿಗೂ ನಂಬರ್ ಒನ್ ಆಗಲಿಕ್ಕೆ ಕಾರಣ ಕ್ರೈಂ, ರಾಜಕೀಯ, ರಾಸಲೀಲೆ ವರದಿಗಳೇ ಕಾರಣಗಳಲ್ಲ. ಬಾಟಮ್ ಐಟಮ್, ಖಾಸ್ ಬಾತ್ ಅಂಕಣಗಳು ಇವೆಲ್ಲವನ್ನೂ ಮೀರಿದ್ದು. ಮನಸ್ಸಿನ ಒಳದನಿಗೆ ಕನ್ನಡಿ ಹಿಡಿಯುವ ಲೇಖನಗಳು ಆಪ್ತವಾಗುತ್ತವೆ. ಆ ದನಿ ಅವರ ಬಗೆಗಿನದಾಗಿರಬಹುದು. ನಮಗೂ ಅದೇ ಥರದ ಅನುಭೂತಿಗಳು ಕೆಲವೊಮ್ಮೆ ಆಗುವುದರಿಂದ ಅವು ನಮ್ಮ ದನಿಯನ್ನೇ ಪ್ರತಿಬಿಂಬಿಸುತ್ತವೇನೋ ಎಂಬಷ್ಟು ಆಪ್ತವಾಗುತ್ತವೆ. ಇದೇ ಥರಹದ ಲೇಖನಗಳುಳ್ಳ ಓ ಮನಸೇ ಕೂಡಾ ಉತ್ತುಂಗಕ್ಕೇರಿತು. ಈ ಥರಹದ ರಾಜಕೀಯ, ಸಿದ್ಧಾಂತ ಎಲ್ಲವನ್ನೂ ಮೀರಿದ ಬದುಕಿನ ಬಗ್ಗೆ ಬರಹಗಳು ಎಷ್ಟು ಟ್ಯಾಬ್ಲಾಯ್ಡ್ ಗಳಲ್ಲಿ ಬರುತ್ತವೆ? ಜನ ಸಹಜವಾಗಿಯೇ ಅದರತ್ತ ಆಕರ್ಷಿತರಾದರು. ಓರಗೆಯ ಪತ್ರಿಕೆಗಳಲ್ಲಿ, ಅತಿಯಾದ ಸಿದ್ಧಾಂತವಾದ, ಅತಿಯಾಗಿ ಒಂದು ಪಕ್ಷದ, ವ್ಯಕ್ತಿಯ, ಧರ್ಮದ ರೀತಿ ರಿವಾಜುಗಳ ಬಗ್ಗೆ ಪೂರ್ವಾಗ್ರಹಪೀಡಿತವಾಗಿ ವಿಷಯ ಮಂಡಿಸಿ ವರದಿ ಬರೆಯುವಾಗ, ಹಾಯ್ ಬೆಂಗಳೂರು ಸ್ವಲ್ಪ ತಟಸ್ಥತೆ ಕಾಯ್ದುಕೊಂಡಿದೆ ಎಂದೆನಿಸುತ್ತದೆ.
ಪತ್ರಿಕೆಗಳ, ಮಾಧ್ಯಮಗಳ ಕೆಲಸ ಪಕ್ಷ ಕಟ್ಟುವುದಲ್ಲ, ಸರ್ಕಾರ ಬೀಳಿಸುವುದಲ್ಲ. ಕ್ರೈಂ ಇಲ್ಲವಾಗಿಸುತ್ತೇನೆಂದು ಹೊರಡುವುದಲ್ಲ. ರವೀಂದ್ರ ರೇಷ್ಮೆಯವರು ಹಿರಿಯರು. ಇವರು ಎಷ್ಟು ಸರ್ಕಾರಗಳನ್ನು ಉರುಳಿಸಬಲ್ಲರೆಂದು ಕೇಳಲಾದರೆ, ಉತ್ತರವೇನಾದೀತು? ಪತ್ರಿಕೆಗಳೂ ಶಕ್ತಿ ಪ್ರದರ್ಶನಕ್ಕೆ ತಮ್ಮನ್ನು ತಾವು ಒಡ್ಡಿಕೊಂಡರೆ ಜನಜಾಗೃತಿ ಹಳ್ಳ ಹಿಡಿಯುತ್ತದೆ. ಇದೆಲ್ಲವನ್ನೂ ಮೀರಿದ್ದು ಜನಜಾಗೃತಿ. ಟಿ.ಎನ್. ಸೀತಾರಾಂರವರ ‘ಮುಕ್ತಾ’ ಧಾರಾವಾಹಿ ಜನಾಭಿಮಾನದ, ಜನಪ್ರಿಯತೆಯ ಉತ್ತುಂಗಕ್ಕೇರಿದಾಗ ಕೆಲವು ಜನ ಕೇಳಿದ್ದರು. ನೀವು ಇಷ್ಟೆಲ್ಲಾ ತೋರಿಸಿದ ತಕ್ಷಣ ಎಲ್ಲವೂ ಸರಿಯಾಗಿಬಿಡುತ್ತದೆಯೇ? ಅಂತಾ. ಇತ್ತೀಚೆಗೆ ಜನಮನ್ನಣೆ ಗಳಿಸಿದ ‘ಮಂಥನ’ದ ಸೇತುರಾಂರವರಿಗೆ ಕೆಲವು ಜನ ಪ್ರಶ್ನೆ ಕೇಳಿದ್ದರು. ನೀವು ಭ್ರಷ್ಟಾಚಾರದ ಬಗ್ಗೆ, ಇನ್ಕಂ ಟ್ಯಾಕ್ಸ್ ರೇಡ್ಗಳ ಬಗ್ಗೆ ಇಷ್ಟೆಲ್ಲಾ ತೋರಿಸಿದ್ದೀರಿ. ಭ್ರಷ್ಟಾಚಾರವೇನೂ ಕಡಿಮೆಯಾಗಿಲ್ಲವಲ್ಲ ಅಂತಾ. ಪ್ರತಿಸಲವೂ ಜನಪ್ರಿಯತೆಯ ಉತ್ತುಂಗಕ್ಕೇರಿದ ವ್ಯಕ್ತಿ, ವಸ್ತು ಬಗ್ಗೆ ನಮಗೆ ಮಾತ್ಸರ್ಯದ, ಕಡೆಗಣಿಕೆಯ ಮಾತುಗಳು ಹೊರಡುವುದು ಸಾಮಾನ್ಯ. ಅದನ್ನೇ ವಿಮರ್ಶೆ ಎನ್ನಲಾಗದು. Criticism ಅಂದರೆ ಬರೀ ಬಯ್ಯುವುದಲ್ಲ. ಮೌಲ್ಯಾತ್ಮಕವಾದ ಮೌಲ್ಯಮಾಪನ ನಡೆಯಬೇಕು.
ಈ ಮೊದಲು ಪ್ರಸಾರವಾಗುತ್ತಿದ್ದ ಕ್ರೈಂ ಡೈರಿ ಇನ್ನೆಲ್ಲಾ ಕ್ರೈಂ ಧಾರಾವಾಹಿಗಳ ಸಾಲಿನಲ್ಲಿ ಮೊದಲಿನಲ್ಲಿ ನಿಂತಿತ್ತು. ಉತ್ತರವೂ ಸ್ಪಷ್ಟ. ಬೇರೆ ಎಲ್ಲಾ ಕ್ರೈಂ ಧಾರಾವಾಹಿಗಳು ಪೇಲವವಾದ ನಿರೂಪಣೆ ಇದ್ದಿದ್ದರೆ(ಈಗಲೂ ಹಾಗೇ ಇವೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ ಅಂದುಕೊಂಡಿದ್ದೇನೆ), ಹೊಸತನವಿರದೇ, ವೈಭವೀಕರಣ ಇದ್ದಿದ್ದರೆ, ಕ್ರೈಂ ಡೈರಿಯಲ್ಲಿ ಎಲ್ಲ ಪ್ರಕರಣಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ನೋಡುವ ಆಯಾಮ ಒದಗಿಸಿದ್ದು ಜನ ಇಷ್ಟಪಡುವಂತೆ ಮಾಡಿತ್ತು. ಈಗಲೂ ಒಮ್ಮೆ ಕ್ರೈಂ ಧಾರಾವಾಹಿಗಳತ್ತ ಒಮ್ಮೆ ಕಣ್ಣು ಹಾಯಿಸಿ. ಉದಯ ಟಿವಿಯ ಕ್ರೈಂ ಸ್ಟೋರಿ, ಟಿ.ವಿ.೯ ನ ವಾರಂಟ್ ಎಲ್ಲದರಲ್ಲೂ ಬರೀ ವೈಭವೀಕರಣವಿದೆ. ಪೇಲವ ನಿರೂಪಣೆ ಇದೆ. ಕಾರ್ಯಕ್ರಮದ ಕೊನೆಗೆ ಬುದ್ಧಿವಾದವನ್ನೂ ಅಧಿಕಾರವಾಣಿಯಿಂದ ಹೇಳುವ ‘ಅತಿ ಬುದ್ಧಿವಂತ’ ನಿರೂಪಕರಿದ್ದಾರೆ. ಇವೆಲ್ಲವುಗಳ ನಡುವೆ ಕ್ರೈಂ ಡೈರಿ ವಿಭಿನ್ನವಾಗಿಯೇ ನಿಂತಿತ್ತು. ಕ್ರೈಂ ಡೈರಿ ಎಷ್ಟು ನಂಬಿಗಸ್ಥನಾಗಿತ್ತು ಅಂದರೆ ನಮ್ಮೂರು ದಾವಣಗೆರೆಯಲ್ಲಿ ಒಂದೆರಡು ವರ್ಷಗಳ ಹಿಂದೆ ಇಬ್ಬರು ಸೌಹಾರ್ದಯುತವಾಗಿ ಬದುಕುತ್ತಿದ್ದ ಸವತಿಯರು ಗಂಡನ ಹಿಂಸೆ ತಾಳಲಾರದೆ ರವಿ ಬೆಳಗೆರೆಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ರವಿಯವರು ತಮ್ಮಬಗೆಗಿನ ವೈಭವೀಕರಣದಿಂದ ಪಡೆದ ನಂಬಿಕೆ ಎಂದು ನನಗನ್ನಿಸುವುದಿಲ್ಲ. ಜನ ಅಷ್ಟೊಂದು ನಂಬುವ, ಪ್ರೀತಿಸುವ, ಜನಪ್ರಿಯತೆ ಗಳಿಸಿರುವ, ಬಹುರೂಪತೆಗಳಿಗೆ ಅಣಿಯಾಗುತ್ತಿರುವ ಕರ್ನಾಟಕದ ಒಬ್ಬೇ ಒಬ್ಬ ಪತ್ರಕರ್ತನನ್ನು ತೋರಿಸಿ ನೋಡೋಣ. ಇಲ್ಲೆಲ್ಲವೂ ನಾನು ವಸ್ತು ಸ್ಥಿತಿಯ ಬದಲಾಗಿ ವೈಭವೀಕರಣಕ್ಕೆ ಪ್ರಯತ್ನಿಸಿದ್ದೇನೆ ಎಂದೆನ್ನಬಹುದು. ಆದರೆ, ಇವೆಲ್ಲವೂ ಶ್ರೀಸಾಮಾನ್ಯನ ದನಿ ಎಂಬುದನ್ನು ನೆನಪಿನಲ್ಲಿಡಬೇಕು.
ಇನ್ನು ‘ಮುಖ್ಯಮಂತ್ರಿ ಐ ಲವ್ ಯು’ ಚಿತ್ರ ತೆಗೆಯುತ್ತಿರುವ ಬಗ್ಗೆ. ಒಬ್ಬರ ಖಾಸಗಿ ಬದುಕನ್ನು ಪ್ರಶ್ನಿಸುವ, ಅನಾವರಣಗೊಳಿಸುವ ಹಕ್ಕು ಯಾರಿಗೂ ಇಲ್ಲ. ಆದರೆ, ಅನೈತಿಕ ಖಾಸಗಿ ಸಂಗತಿಗಳು ಸಾರ್ವತ್ರಿಕವಾದಾಗ, ಸಾರ್ವಜನಿಕರ ಸ್ವತ್ತಾಗಿಬಿಡುತ್ತವೆ. ಅದನ್ನು ಪ್ರಶ್ನಿಸುವ ಹಕ್ಕು, ವಿಮರ್ಶಿಸುವ ಹಕ್ಕು ಎಲ್ಲರಿಗೂ ಸೇರಿದ್ದು. ಎಲ್ಲದರಲ್ಲೂ ಉದಾರೀಕರಣವನ್ನು ಕಂಡಿರುವ, ಮುಕ್ತ ಲೈಂಗಿಗತೆಯ ಪ್ರತಿಪಾದಕ ಅಮೇರಿಕೆಯಲ್ಲಿ ಕೂಡಾ ಜನ ತಮ್ಮ ಅಧ್ಯಕ್ಷ ಅನೈತಿಕ ಸಂಬಂಧದಿಂದ ದೂರವಿರಬೇಕೆಂದು ಬಯಸುತ್ತಾರೆ. ಹಾಗಾಗಿಯೇ ಬಿಲ್ ಕ್ಲಿಂಟನ್ ಬಗ್ಗೆ ಅಷ್ಟೊಂದು ಗುಲ್ಲೆದ್ದಿದ್ದು. ಅಮೇರಿಕೆಗಿಂತ ಸುಸಂಸ್ಕೃತವಾಗಿರುವ ಭಾರತದಲ್ಲಿ ರಾಜಕೀಯ ನಾಯಕನ ‘ಇತರ’ ಸಂಬಂಧ ವೃತ್ತಾಂತಗಳು ವಿಮರ್ಶೆಗೆ ಒಳಪಡದಿರುತ್ತವೆಯೇ? ತೇಜೋವಧೆ ಎಂದೆನ್ನಿಸಿದರೆ, ಕೋರ್ಟ್ ತೀರ್ಮಾನಿಸುತ್ತದೆ. ಹಾಗೆ ಖಾಸಗಿ ಬದುಕನ್ನು ಪ್ರಶ್ನಿಸುವ ಸ್ವಾತಂತ್ರವಿಲ್ಲ ಅನ್ನೋದಾಗಿದ್ದರೆ, ಇಂದಿನ ಕ್ರೈಂ, ಸೆಕ್ಸ್ ಪತ್ರಿಕೆಗಳು, ಟ್ಯಾಬ್ಲಾಯ್ಡ್ಗಳು ಮುಚ್ಚಬೇಕಾಗುತ್ತಿತ್ತು. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಪರಿಗಣಿಸಲ್ಪಡುತ್ತದೆ.
ಇವೆಲ್ಲ ನಾನು ಹೇಳಿರುವ ಸಂಗತಿಗಳ ಹೊರತಾಗಿ, ರವಿ ಬೆಳಗೆರೆಯವರನ್ನು, ಸಾಧನೆಗಳನ್ನು ವಿಮರ್ಶಾತ್ಮಕ ದೃಷ್ಟಿಕೋನದಲ್ಲಿ ನೋಡಲು ಈ ಲೇಖನ ಪ್ರಯತ್ನಿಸಿದೆ. ನಿಮ್ಮ ಪ್ರಯತ್ನ ಮುಂದುವರಿಯಲೆಂದು ಬಯಸುತ್ತೇನೆ.
ಕೆ.ಗಣೇಶ್.
Categories: ಮನದ ಮಾತು · ವಿಚಾರವಾದ
Tagged: ಪತ್ರಿಕೋದ್ಯಮ, ಕನ್ನಡ ಪಂಚ್ ಲೈನ್, ರವಿ ಬೆಳಗೆರೆ, ರವೀಂದ್ರ ರೇಷ್ಮೆ, ವಿಮರ್ಶೆ, ಸೂರ್ಯನ ಶಿಕಾರಿ, Crime Dairy, critic of Ravi belagere articles, Hai Bangalore, Kannada punchline, Kannada Tabloid, Raveendra reshme, Ravi belagere
ಮೊನ್ನೆ ಮೊನ್ನೆ ಬಸವೇಶ್ವರ ನಗರದಿಂದ ಕಾರ್ಡ್ ರೋಡ್ ಕಡೆ ನಡಕೊಂಡು ಬರ್ತಾ ಇದ್ದೆ. ಎಡಗಡೆ ಒಂದು ಗೋಡೆಗೆ ಇತ್ತೀಚೆಗೆ ಬಿಡುಗಡೆಯಾದ ‘ಹನಿ ಹನಿ’ ಚಿತ್ರದ ಪೋಸ್ಟರ್ ಅಂಟಿಸಿದ್ದರು. ಗೋಡೆಗೆ ಒಬ್ಬಾತ ಕುಳಿತು ‘ಜಲಬಾಧಿತ’ ಜಲಧಾರೆ ಹರಿಸುತ್ತಿದ್ದ. ಆ ಗೋಡೆಯ ಮೇಲಿನ ಚಿತ್ರದಲ್ಲಿ ಹನಿ ಹನಿ ಚಿತ್ರದ ಹೀರೋ, ಹೀರೋಯಿನ್(ಪೂಜಾ ಗಾಂಧಿ) ಗಾಡಿ ಮೇಲೆ ಕುಂತಿರೋ ಚಿತ್ರ ಇತ್ತು. ನನಗೆ ಇನ್ನೊಂದು ವಿಷಯದ ಬಗ್ಗೆ ಸಮಜಾಯಿಷಿ ಬೇಕಿದೆ. ಅಲ್ಲಾ, ಎಲ್ಲಾ ಸಾಲದಾಗಿ ಈ ಚಿತ್ರ ಪ್ರಚಾರಕರು ಪೋಸ್ಟರ್ಗಳನ್ನ ‘ಸಾರ್ವಜನಿಕ ಬಯಲು ಶೌಚಾಲಯ’ಗಳ ಬಳಿಯಲ್ಲಿಯೇ ಯಾಕೆ ಹಚ್ಚುತಾರೆ ಅನ್ನೋದು ನನಗೆ ಕಾಡುವ ಪ್ರಶ್ನೆ. ಇಲ್ಲಾಂದ್ರೆ, ಅಲ್ಲಿ ಪೋಸ್ಟರ್ ಹಚ್ಚಿರುವ ಕಡೆ ಹೋಗಿಯೇ ಜಲಬಾಧೆ ತೀರಿಸಿಕೊಳ್ಳುತ್ತಲೇ ಪುಕ್ಕಟೆ ಮನೋರಂಜನೆ ಪಡೆಯುವ ‘ಜಲಬಾಧಿತರ’ ಇರಾದೆಯೋ..? ಗೊತ್ತಿಲ್ಲ..!
ಆದರೆ, ಈ ಪ್ರಸಂಗದಲ್ಲಿ ಗೋಡೆ ಮೇಲಿರೋ ಪಾಪ ಪೂಜಾ ಗಾಂಧಿ, ಏನಂತ ಅಂದುಕೊಳ್ಳಬೇಕು ’ಮುಂಗಾರು ಮಳೆ’ಯಾ ಇಲ್ಲಾ ’ಹನಿ ಹನಿ’ಯಾ..? ಬಹುಷಃ ಮೊದಲನೆಯದಾದ ನಂತರ ಎರಡನೆಯದು ಅಂದುಕೊಂಡಿರಬಹುದು…!!!!
Categories: ಸ್ವಾರಸ್ಯ · ಹಾಸ್ಯ
Tagged: Hani hani, Mungaru male, Pooja Gandhi, poster
ಮೊದಲ, ಮೊಟ್ಟಮೊದಲ ಇರುಳಿನಲ್ಲಿ ಏನೇನು ಮಾಡಬೇಕೆಂಬುದಕ್ಕೆ, ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಒಂದು ಅನೂಹ್ಯವಾದ, ಅಪೂರ್ವವಾದ, ಚಿಕ್ಕದಾದ, ಚೊಕ್ಕದಾದ ಡಾಕುಮೆಂಟ್. ಶೃಂಗಾರವನ್ನ, ರಸಿಕತೆಯನ್ನ, ವಿಶಿಷ್ಟಾನುಭೂತಿಯನ್ನ ಅನುಭವಿಸುವ ಬಗ್ಗೆ ಇರುವ ಒಂದು ಬರಹ. ಇದನ್ನ ಬರೆದವ ತನ್ನ ಪರಿಚಯವನ್ನೇ ಹೇಳಿಲ್ಲ. ಬರೆದವನಿಗೊಂದು ಹ್ಯಾಟ್ಸ್ ಆಫ್. PDF Documentನ ಲಿಂಕ್ ಕ್ಲಿಕ್ಕಿಸಿ ಬರಹವನ್ನ ಓದಬಹುದು.
Fresher guide to First Night.
(First impression is the best impression)
I N S I G H T
[experiencing the experience]
Categories: ಶೃಂಗಾರ
Tagged: ಕನ್ನಡ ಶೃಂಗಾರ ಬರಹ, First night, Freshers guide
ಅಕ್ಟೋಬರ್ ತಿಂಗಳಿಂದಾ ‘ಕುರ್ಚಿ ವ್ಯವಹಾರ’ ನೆಡೆದೇ ಇದೆ. ನಮ್ಮ ನಗೆ ನಗಾರಿಯವರು ಚೆಡ್ಯೂರಪ್ಪ, ಜೋಕುಮಾರಸ್ವಾಮಿಯರನ್ನ ಏಪ್ರಿಲ್ ಒಂದರಂದು ಆರಾಧ್ಯ ದೈವಗಳನ್ನಾಗಿಸಿದ್ದಾರೆ. ಅವರು ಕುರ್ಚಿ ಜಗಳಗಳ ಬಗ್ಗೆ ಬರೆದಿದ್ದರು. ಹಾಗಾಗಿ ಒಂದು ಜೋಕು ನೆನಪಿಗೆ ಬರ್ತಾ ಇದೆ. ಬಹುಷಃ ಕೇಳಿರಲಾರಿರಿ ಎಂಬ ನಂಬುಗೆಯೊಂದಿಗೆ…
ಒಮ್ಮೆ ಬಸ್ಸು ಹತ್ತುವಾಗ ತುಂಬಾ ರಷ್ ಇತ್ತು. ಹೊರಗಿನಿಂದ ಹತ್ತುವ ವ್ಯಕ್ತಿಗಳು ಕರ್ಚೀಫು, ಟವಲ್ಲುಗಳನ್ನು ಹಾಕಿ ತಮ್ಮ ಸೀಟ್ಗಳನ್ನು ಭದ್ರಪಡಿಸಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಹೀಗೇ ತಾನೆ ಅನಾಮತ್ತಾಗಿ, ಅನಧೀಕೃತವಾಗಿ ರಿಸರ್ವೇಷನ್ನು ಮಾಡೋಡು..?
ಹೀಗೆ ಕರ್ಚೀಫು ಹಾಕಿ ಒಳಗೆ ತನ್ನ ಸೀಟನ್ನ ಒಬ್ಬಾತ ರಿಸರ್ವ್ ಮಾಡಿದಿನಿ ಅಂತ ಅಂದುಕೊಂದು ಒಳಗೆ ಹೋಗಿ ನೋಡಿದರೆ, ಒಬ್ಬ ಆಸಾಮಿ ಕರ್ಚೀಫು ಸರಿಸಿ ಕೂತಿದ್ದಾನೆ. ನಾನು ಕರ್ಚೀಫು ಮೊದಲು ಹಾಕಿದೀನಿ ಈ ಸೀಟು ನಂದು ಅಂದನಂತೆ ಕರ್ಚೀಫು ಹಾಕಿದವ. ಅದಕ್ಕೆ ಕುಂತಿರುವ ವ್ಯಕ್ತಿ ಏನಂದ ಗೊತ್ತಾ? ವಿಧಾನಸೌಧದ ಮೇಲೆ ನಾನೂ ಕರ್ಚೀಫು ಹಾಕ್ತೀನಿ. ವಿಧಾನ ಸೌಧ ನಂದಾಗುತ್ತಾ ಅಂದನಂತೆ. ತರ್ಕ ಅಂದರೆ ಹಿಂಗಿರಬೇಕಲ್ಲವಾ..!
Categories: ಹಾಸ್ಯ
Tagged: April 1, Humor, Kannada Joke, Vidhana saudha
ಮೊದಲನೆಯದು : ಬಸವನಗುಡಿಗೆ ಹೋಗಬೇಕಿತ್ತು. ಸೌತ್ ಎಂಡ್ ಸರ್ಕಲ್ಲಿನಲ್ಲಿದ್ದೆ. ಸಾಮಾನ್ಯವಾಗಿ ಸರ್ಕಲ್ ಪೊಲೀಸರಿಗೆ ಕೇಳಿದರೆ, ಅಡ್ರೆಸ್ಸು ಸರಿಯಾಗಿ ಹೇಳ್ತಾರೆ ಅನ್ನೋ ನಂಬಿಕೆ. ಅದು ಹಲವಾರು ಬಾರಿ ನಿಜವಾಗಿದೆ ಬಿಡಿ. ನಾನು ಅಪರಿಚಿತ ಸ್ಥಳಗಳಲ್ಲಿ ಮತ್ತೆ ವಿಚಾರಿಸುವುದು ಬೀಡಿ ಅಂಗಡಿಗಳು, ಚಪ್ಪಲಿ ಹೊಲಿಯುವವರು, ಸರ್ಕಲ್ಲಿನಲ್ಲಿ ಹರ್ಅಟುವವರು ಮತ್ತು ಸಣ್ಣ ಪುಟ್ಟ ಅಂಗಡಿಗಳಲ್ಲೇ. ಸಾಮಾನ್ಯವಾಗಿ ಅಲ್ಲಿಯೂ ಸರಿಯಾದ ಮಾಹಿತಿ ದೊರಕುತ್ತದೆ. ಹತ್ತಿರದಲ್ಲೇ ಸರ್ಕಲ್ ಪೊಲೀಸನೊಬ್ಬ ಇದ್ದುದರಿಂದ ಮತ್ತು ಆತ ಯಾವುದೇ ಕೆಲಸವಿಲ್ಲದೇ, ಸರ್ಕಲ್ಲಿನ ಮೂಲೆಯೊಂದರಲ್ಲಿ ನಿರ್ಮಿಸಲಾಗಿರುವ ತನ್ನ ಕ್ಯಾಬಿನ್ನಿನಲ್ಲಿ ಕುಳಿತಿದ್ದರಿಂದ, ಆತನಿಗೆ ‘ಸರ್, ಬಸವನ ಗುಡಿಗೆ ಹೋಗಲಿಕ್ಕೆ ಎಲ್ಲಿ ಬಸ್ ಸಿಗ್ತವೆ?’ ಅಂತಾ ಕೇಳಿದೆ. ಆತ ಅಲ್ಲಿ ಅಂತಾ ಕೈ ತೋರಿಸಿದ. ಇದೋ ಮೊದಲೇ ಬೆಂಗಳೂರು. ಒಂದು ಸರ್ಕಲ್ಲು ಅಂದ್ರೆ ನಾಲ್ಕಕ್ಕಿಂತ ಹೆಚ್ಚು ರೋಡುಗಳು ಕೂಡುತ್ತವೆ. ಜೊತೆಗೆ ಎದುರಾ ಬದರಾ ಬಸ್ ಸ್ಟಾಪ್ಗಳಿರುತ್ತವೆ. ಹಾಗಾಗಿ ‘ಸರ್ ಈ ಕಡೆಗೆ ಇರೋದೋ ಇಲ್ಲಾ ಆ ಕಡೆಗೆ ಇರೋದೋ’ ಅಂತ ಕೇಳಿದೆ. ಅದೆಲ್ಲಿತ್ತೋ ಅಂಥಾ ಕೋಪ. ‘ರೀ ಹೋಗ್ರೀ ಸುಮ್ನೆ. ನಾವೇನ್ ಕೈ ಹಿಡ್ಕಂಡ್ ಬಂದು ಬಸ್ನಲ್ಲಿ ಕೂರ್ಸಕ್ಕಾಗುತ್ತಾ?’ ಅಂದ. ನಾನು ‘ಸಾರ್, ಎರಡು ಕಡೆ ಸ್ಟಾಪ್ಗಳಿದಾವಲ್ಲ ಸಾರ್ ಅದಕ್ಕೇ ಕೇಳಿದೆ’ ಅಂತಾ ಸಮಜಾಯಿಷಿ ನೀಡಿದೆ. ಅದಕ್ಕೆ ಅವನು ‘ಹೋಗ್ರೀ ಸುಮ್ನೆ. ಈಗ್ ಹೋಗ್ತೀರೋ ಇಲ್ಲೋ?’ ಅನ್ನೋದೇ..?
ಆಗಿನಿಂದ ಬೆಂಗಳೂರಿನಲ್ಲಿ ಎಂಥೆಂಥಾ ಮಂಗ ನನ್ಮಕ್ಳು ಇದಾರೆ ಅಂತಾ ಗೊತ್ತಾಯ್ತು. ಹಾಗಾಗಿ ಒಂದು ತತ್ವ, ಥಿಯರಂ, ಥಿಯರಿ ಎಲ್ಲಾ ಕಂಡು ಹಿಡಿದಿದ್ದೇನೆ..! ಒಬ್ಬನೇ ವ್ಯಕ್ತಿಗೆ ‘ಎರಡನೇ ಪ್ರಶ್ನೆ ಬಿಲ್ಕುಲ್ ಕೇಳಲೇ ಬಾರದು’..! ಯಾರಿಗಾದರೂ ಒಂದು ಪ್ರಶ್ನೆ ಕೇಳ್ರಿ. ಆತ ಹೇಳಿದ್ದು ಮಾತ್ರ ಕ್ಲಾರಿಫೈ ಮಾತ್ರ ಮಾಡಿಕೊಳ್ಳಬೇಡಿ..! ಜಗತ್ತಿನಲ್ಲಿ ತುಂಬಾ ಜನರಿದ್ದಾರೆ. ಪ್ರಶ್ನೆ ಕೇಳಲಿಕ್ಕೆ. ಒಬ್ಬರಿಗೆ ಒಂದೇ ಟಿಕೇಟ್ ಅನ್ನೋ ಸಿನಿಮಾ ಥೇಟರ್ಗಳಿಗೆ ಹೋಗಿ ಬಂದು, ಶ್ರೀ ರಾಮಚಂದ್ರನ ಏಕಪತ್ನೀ ವ್ರತ ನೋಡಿ ನಾನು ‘ಏಕ ಪ್ರಶ್ನೀ ವ್ರತಸ್ಥ’ನಾಗಿದ್ದೇನೆ.
ಎರಡನೆಯದು
ಮೊನ್ನೆ ಮೊನ್ನೆ ನನ್ನ ರೂಂ ಇರುವೆಡೆಗೆ ಒಬ್ಬನದು ಆತ್ಮಹತ್ಯೆ(ಅಥವಾ ಕೊಲೆ) ನೆಡೆದಿತ್ತು. ನಾನು ನಮ್ಮ ಏರಿಯಾದಲ್ಲಿ ಈ ಪಾಟಿ ಜನಾ ಸೇರಿದಾರಲ್ಲಾ ಅಂತಾ ಕೆಲವರನ್ನ ವಿಚಾರಿಸಿದೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾನಂತೆ. ಬಾಗಿಲು ಒಡೆದು ಪೊಲೀಸರು ಹೆಣ ತೆಗೀತಿದಾರೆ ಅಂದರು. ಸತ್ತು ಎರಡು ಮೂರು ದಿನ ಆಗಿರಬೇಕು, ಪೊಲೀಸರು ಮೂಗಿಗೆ ಬಟ್ಟೆ ಕಟ್ಟಿಕೊಂಡು, ಬಾಗಿಲ ಬಳಿ ಹರಸಾಹಸ ಮಾಡುತ್ತಿದ್ದರು. ಹೊರಗಡೆ ಆಂಬುಲೆನ್ಸ್, ಸುವರ್ಣ ಚಾನಲ್ನೋರು, ಪೊಲೀಸ್ ಜೀಪು ಎಲ್ಲವು ಇದ್ದವು. ಆ ಕಡೆ ಸತ್ತ ವ್ಯಕ್ತಿ ಯಾರು ಎನ್ನೋದರ ಬಗ್ಗೆ ಟಿ.ವಿ ಯೋರು ಹಿರಿಯ ಪೊಲೀಸರಿಂದ ಮಾಹಿತಿ ರೆಕಾರ್ಡ್ ಮಾಡುತ್ತಿದ್ದರು. ಗುಂಪಿನಿಂದ ಹೊರಗೆ ಒಂದಿಷ್ಟು ಪೊಲೀಸರಿದ್ದರು. ನಾನು ದೊಡ್ಡದಾಗಿ ಕ್ರೈಂ ವರದಿಗಾರನೇನೋ ಎಂಬಂತೆ ಒಬ್ಬ ಪೊಲೀಸನಿಗೆ ‘ಏನಾಗಿದೆ ಸಾರ್?’ ಅಂದೆ. ‘ಸುಯಿಸೈಡ್ ಮಾಡಿಕೊಂಡಿದ್ದಾನೆ, ಸತ್ತು ಮೂರ್ನಾಲ್ಕು ದಿನಗಳಾಗಿರಬಹುದು’ ಎಂದು ಆತ ಹೇಳಿದ. ನಾನು ‘ಈಗ ಇನ್ವೆಸ್ಟಿಗೇಷನ್ ಶುರು ಮಾಡೀದೀರಾ ಸಾರ್?’ ಅಂದೆ. ಆತನಿಗೆ ನಖಶಿಖಾಂತ ಉರಿದು ಹೋಯಿತು. ಏರಿದ ದನಿಯಲ್ಲಿ ‘ರೀ ಸ್ವಾಮೀ, ನಮಗೇನ್ ಕನಸು ಬೀಳುತ್ತೇನ್ರೀ ಹೀಗಾಗಿತ್ತು ಅಂತಾ? ನಿಮ್ಮಂಥೋರೇ ಯಾರಾದ್ರೂ ತಿಳಿಸಿದಾಗಲೇ ಗೊತ್ತಾದಮೇಲೆ ಬಂದು ಬಾಡಿ ಹೊರಗೆ ತೆಗೀತಾ ಇದೀವಿ’ ಅಂದ. ನನಗೆ ನನ್ನ ತಪ್ಪಿನ ಅರಿವಾಗಿತ್ತು. ಕೇಳುವ ಭರದಲ್ಲಿ ‘ಈಗ ಇನ್ವೆಷ್ಟಿಗೇಷನ್ ಶುರು ಮಾಡಿದೀರಾ?’ ಅನ್ನೋದು ಯಾವ ಅರ್ಥದಲ್ಲಿದೆ ಅನ್ನೋದು ತಿಳಿದಿತ್ತು. ಸಿನಿಮಾದಲ್ಲಿ ಪೊಲೀಸರು ಕೊನೆಗೆ ಬರುವವರಂತೆ, ಮೂರ್ನಾಲ್ಕು ದಿನ ಆದ ಮೇಲೆ ಇನ್ವೆಷ್ಟಿಗೇಷನ್ ಶುರು ಮಾಡೀದೀರಾ ಅನ್ನೋ ಅರ್ಥದಲ್ಲಿ ನನ್ನ ಪ್ರಶ್ನೆ ಇತ್ತು. ನಾನು ‘ಹಾಗಲ್ಲ ಸಾರ್, ನಾನು ಆ ಅರ್ಥದಲ್ಲಿ ಕೇಳಲಿಲ್ಲ. ತಪ್ಪು ತಿಳ್ಕೋಬೇಡಿ’ ಅಂತಾ ಸಮಜಾಯಿಷಿ ನೀಡಿದೆ. ಕನ್ವಿನ್ಸ್ ಮಾಡಿದೆ. ಆತ ಕೊನೆಗೆ ನಗುತ್ತಾ ನನ್ನ ಬೆನ್ನು ತಟ್ಟಿ ‘ಸ್ವಲ್ಪ ವಿಚಾರ ಮಾಡ್ಬೇಕು’ ಅಂತಾ ಹೊರಡಲು ಸಿದ್ಧವಾಗುತ್ತಿದ್ದ ಜೀಪು ಹತ್ತಿದ..!
Categories: ಸ್ವಾರಸ್ಯ
Tagged: ಪೊಲೀಸ್ ಹಾಸ್ಯ, ಬೆಂಗಳೂರು ವಿಳಾಸ, Kannada Humor