ಪ್ರತಿಸ್ಪಂದನ – Pratispandana

ಒಂದು ಆಪರೇಶನ್ ಗೆ ಅಣಿಯಾಗುತ್ತಾ….

January 5, 2010 · Leave a Comment

    ಇವತ್ತು 11 ಗಂಟೆಗೆ ಆಪರೇಶನ್ ಆಗಬೇಕಿತ್ತು. ಡಾಕ್ಟರು ಬೇರೆ ಕೇಸ್ ಅಟೆಂಡ್ ಮಾಡಲಿಕ್ಕೆ ಹೋಗಿದ್ದರಿಂದ 2 .30 ಕ್ಕೆ ಮುಂದೆ ಹೋಗಿದೆ. ಹಾಗಾಗಿ ಇಂಟರ್ನೆಟ್ ಗೆ ಬಂದು ಒಂದು ಪೋಸ್ಟ್ ಹಾಕಿ ಹೋಗೋಣ ಅಂತ ಬಂದೆ. 29 ಡಿ ನಿಂದ ಶುರುವಾದ ಎಕ್ಸಾಮು ಜನವರಿ ೨ಕ್ಕೆ ಮುಗೀತು.

    ಆದರೆ, ಕ್ರಿಸ್ ಮಸ್ ದಿನವೇ, ೨೫ ರಂದು ಮದ್ಯಾಹ್ನದಿಂದಲೇ ಹೊಟ್ಟೆ ನೋವು ಕಾಡಿತು. ಸಂಜೆ ಡಾಕ್ಟರ ಬಳಿ ಹೋದೆ. ಅಲ್ಟ್ರಾ ಸೌಂಡ್ ಮಾಡಿದರು. ಅಪೆಂಡಿಕ್ಸ್ ಆಪರೇಶನ್ ಮಾಡಬೇಕು ಅಂದ್ರು. ನಂದು ಎಕ್ಸಾಮು ನಾಲ್ಕು ದಿನ. ಪರೀಕ್ಷೆಯ ಕೊನೆಯ ದಿನಗಳು ವಜ್ರಕ್ಕಿಂತಲೂ ಬೆಲೆಬಾಳುವಂಥವು. ಓದಿದ್ದನ್ನೆಲ್ಲ, ಓದದೆ ಉಳಿದದ್ದನ್ನೆಲ್ಲ ತಿರುವಿ ಹಾಕಲಿಕ್ಕೆ ಇರುವ ಸಮಯವದು. ಲ್ಯಾಪರೋಸ್ಕೋಪಿ ಮಾಡಿದರೆ ಎರಡು ದಿವಸದಲ್ಲೇ ಹೋಗಬಹುದು ಅಂದರು. ನಾನು ಮನೆಯಲ್ಲಿ ಕೇಳಿ ಹೇಳ್ತೀನಿ ಅಂದೆ. ಮಾರನೇ ದಿನ ದಾವಣಗೆರೆಯಿಂದ ಅಪ್ಪ, ಅಮ್ಮ ಬಂದರು. ಡಾಕ್ಟರ ಬಳಿ ಅವರನ್ನೂ ಕರೆದೊಯ್ದೆ. ಅಪ್ಪ ನಿವೃತ್ತ ಫಾರ್ಮಾಸಿಸ್ಟ್. ಹಾಗಾಗಿ ಮೆಡಿಕಲ್ ಫೀಲ್ಡ್ ಗೆ ಹೊಸಬರಲ್ಲ. ಮೇಲಾಗಿ ಅಮ್ಮನಿಗೂ ಒಮ್ಮೆ ಅಪೆಂಡಿಕ್ಸ್ ಆಪರೇಶನ್ ಆಗಿತ್ತು. ಧೈರ್ಯ ಹೇಳಿದಳು. ಆದರೆ, ನನಗೆ ಹೆದರಿಕೆ ಇರಲಿಲ್ಲ. ಇದ್ದದ್ದು ಚಿಂತೆ ಪರೀಕ್ಷೆಯದು. ಡಾಕ್ಟರಿಗೆ ಗುಳಿಗೆ ಬರೆದುಕೊಡಲಿಕ್ಕೆ ಅಪ್ಪ ಹೇಳಿದರು. ಹಾಗೇನಾದರೂ ಮತ್ತೆ ಹೊಟ್ಟೆ ನೋವು ಬಂದರೆ, ಆಪರೇಟ್ ಮಾಡಿಸಿಯೇ ಬಿಡೋಣ. ಸದ್ಯಕ್ಕೆ ಎಕ್ಸಾಮ್ ಮುಗಿಯಲಿ ಅಂದರು.

    ಕೆಲವೊಮ್ಮೆ ಈ ಅಪೆಂಡಿಕ್ಸ್(ಸನ್ ಆಫ್ ಅಪೆಂಡಿಸೈಟಿಸ್) ಒಡೆದು ಹೋಗುವ ಸಂದರ್ಭಗಳಿರುತ್ತವೆ. ಅದು ಮಾರಣಾಂತಿಕವಾಗಬಹುದು. ನಾನು ರಿಸ್ಕ್ ತೆಗೆದುಕೊಂಡೆ. ಯಶಸ್ವಿಯೂ ಆಗಿದ್ದೇನೆ. ಎಲ್ಲ ಎಕ್ಸಾಮುಗಳನ್ನ ಸರಿಯಾಗಿ ಮುಗಿಸಿ ದಾವಣಗೆರೆಗೆ ಶನಿವಾರ ಬಂದು ಮುರುಘಾ ಮಠದಲ್ಲಿ ಶರಣ ಸಂಗಮ ಕಾರ್ಯಕ್ರಮ ನೋಡಿ, ಮಾರನೇದಿನ ಅಕ್ಕನ ಮಗನ ತುಂಟಾಟಗಳನ್ನ ನೋಡಿಕೊಂಡು ಬಂದೆ. ಒಂದು ವಾರದಲ್ಲಿ ಸುಧಾರಿಸಿದ್ದೇನೆ. ಆದರೆ, ಆಪರೇಟ್ ಮಾಡಬೇಕು. ಅದು ಮತ್ತೆ ಆವರ್ತನೀಯ ಆಗುವ ಸಂಭವ ಇರುತ್ತದೆ.

     ೨೫ ೨೬ ೨೭ ಈ ಮೂರು ದಿನಗಳು ಸುಧಾರಿಸಿಕೊಳ್ಳಲಿಕ್ಕೇ ಹೋದವು. ಆದರೂ ನಿಶ್ಯಕ್ತಿ. ರೂಮ್ ಮೇಟ್ ಪವನ್, ಮಂಜು ಪ್ರತಿ ದಿನವೂ ಊಟ ತಂದುಕೊಡುತ್ತಿದ್ದರು. ಇನ್ನೊಬ್ಬ ಗೆಳೆಯ ಶಿವು(ಆತನನ್ನ ಖುಷ್ ಅಂತಲೇ ಕರಿಯೋದು..! ಹೆಸರಿಗೆ ತಕ್ಕಂತೆ ಸದಾ ಖುಶಿಯಾಗಿಗುವ ಜೀವಿ) ಗೆಳತಿ ಮನೆಯಿಂದ ಊಟ ತರಲಿಕ್ಕೆ ಸಹಕರಿಸಿದ. ನನಗೆ ಅವರ ಮನೆಯಲ್ಲಿ ಮೆತ್ತಗಿನ ಆಹಾರ ತಯಾರಿಸಿ ಕೊಡುತ್ತಿದ್ದರು. ಹೊರಗಡೆ ಸಿಗುವ ಹೋಟೆಲ್, ಖಾನಾವಳಿಗಳ ಅರೆಬೆಂದ, ಹೈಜೀನ್ ಇಲ್ಲದ ಆಹಾರ ತಿಂದು ಪಿ.ಜಿ ಗಳ ಆಲ್ ಮೋಸ್ಟ್ ಎಲ್ಲ ಹುಡುಗರ ಹೊಟ್ಟೆ ಕೆಟ್ಟವು. ಇದಕ್ಕೆ ಸರಿಯಾದ ನೀರು ಸಿಗದೇ ಇರೋದೂ ಕೂಡಾ ಕಾರಣವಾಯಿತು. ಎಕ್ಸಾಮ್ ಅಂತಾ ಊಟ ತಿಂಡಿ ಮಾಡದೇ ಕುಳಿತು ಅಸಿಡಿಟಿ ಮಾಡಿಕೊಂಡವರದ್ದೂ ಪಟ್ಟಿ ಇತ್ತು.

    ಹೊಟ್ಟೆ ನೋವು ಶುರುವಾಗುವ ಮೊದಲು ಒಂದೆರಡು ದಿನ ಮುಂಚೆ ರ್ಯಾಂಡಿ ಪಾಷ್ ನ “ದಿ ಲಾಸ್ಟ್ ಲೆಕ್ಚರ್” ಕನ್ನಡಾನುವಾದ ಓದಿದ್ದೆ. ಅದೂ ಸಂಜೆ ೭ಕ್ಕೆ ಬುಕ್ ಹಿಡಿದೋನು ರಾತ್ರಿ ೨ರ ವರೆಗೂ ಓದಿದೆ! ಊಟಕ್ಕೆ ಅರ್ಧ ಗಂತೆ ಬಿಟ್ಟಿದ್ದೆ.  ಮತ್ತೆ ಬೆಳಗ್ಗೆ ೮ ರಿಂದ ೧೦.೩೦ ವರೆಗೂ ಓದಿ ಮುಗಿಸಿದೆ. ನಾನು ಗಂಟೆಗೆ ೪೦ ಪುಟ ಓದಬಲ್ಲೆ. ಹೆಚ್ಚಿಗೆ ಮಾಡಿಕೊಳ್ಳಲಿಕ್ಕೆ ಪ್ರಯತ್ನಿಸುತ್ತಿದ್ದೇನೆ.

    ಇವತ್ತು ನನ್ನ ಗೆಳೆಯರಿಗೆ ನಾನು ಕತ್ತರಿ ಪ್ರಯೋಗಕ್ಕೆ ವಸ್ತುವಾಗುತ್ತಿರುವುದನ್ನ ಹೇಳಿದೆ. ಸಿವಿಲ್ ಎಂ.ಟೆಕ್ ನ ಗೆಳೆಯ ಸಚಿನ್ ನಿಂದೂ ಲಾಸ್ಟ್ ಲೆಕ್ಚರ್, ಲಾಸ್ಟ್ ಪೋಯೆಂ ಏನಾದ್ರೂ ಏರ್ಪಡಿಸೋಣವಾ ಅಂತಾ ತಮಾಷೆ ಮಾಡೆದ. ಬೆಂಗಳೂರಿನ ಸಾಫ್ಟ್ವೇರ್ ಎಂಜಿನಿಯರ್ ಸಚಿನ್ ನರ್ಸ್ ಕೈ ಹಿಡಿಕೊಂಡು ಅಪರೇಶನ್ ಮಾಡಿಸ್ಕೋ, ಬೇಗ ವಾಸಿಯಾಗುತ್ತೆ ಅಂತಾ ಕಣ್ ಮಿಟುಕಿಸಿದ. ಹೀಗೇ ಪ್ರಮೋದ, ನವೀನ್ ಪಾಗಾದ, ಶಶಾಂಕ ಎಲ್ಲರೂ ತಮಾಷೆ ಮಾಡುತ್ತಲೇ ಇದ್ದಾರೆ.  :-)

    ಸಧ್ಯಕ್ಕೆ ನಾನಂತೂ ಓಮನಸೇ, ಮಯೂರಗಳ ಜೊತೆಗೆ ೮ ಪುಸ್ತಕಗಳನ್ನ ಇಟ್ಟುಕೊಂಡಿದ್ದೇನೆ. ಓದಲಿಕ್ಕಾಗದಿದ್ದರೂ ಜಂಗಮದೂರವಾಣಿಯಲ್ಲಿ ರಾಜಣ್ಣನ ಹಾಡುಗಳಂತೂ ಇದ್ದೇ ಇವೆ. :-)

ಆಪರೇಶನ್ ಒಳಗಾಗುವ ವ್ಯಕ್ತಿ ಹೀಗೆ ಬ್ಲಾಗ್ ಪೋಸ್ಟ್ ಬರಿಯೋದು ವಿಚಿತ್ರವಾ, ನಿಷೇಧಿತವಾ ಗೊತ್ತಿಲ್ಲ. ನನಗಂತೂ ರೋಚಕ :-)

→ Leave a CommentCategories: Uncategorized
Tagged: , , , , , ,

2010 : ಹೊಸ ವರ್ಷದ ಶುಭಾಶಯಗಳು. ನಿಮ್ಮ ಕಂಪ್ಯೂಟರ್ ಪರದೆಯ ಮೇಲೆ ಬೆಂಗಳೂರು ಪ್ರೆಸ್ ಕ್ಯಾಲೆಂಡರ್ ಇರಲಿ. ಹಬ್ಬ ಹರಿದಿನ, ರಜಾದಿನ ನೋಡೋದಕ್ಕ್ ಬರುತ್ತೆ. :-)

December 21, 2009 · Leave a Comment

           ನಮ್ಮ ಕಂಪ್ಯೂಟರ್ ಪರದೆಯ ಮೇಲೆ ಯಾವ ದೇಶದ್ದೋ ಕ್ಯಾಲೆಂಡರ್ ಯಾಕಿರಬೇಕು. ನಮ್ಮ ಕನ್ನಡ ನಾಡಿನದ್ದೆ ಇದ್ದಾರೆ ಚೆಂದ. ಗೋಡೆಯ ಮೇಲೆ ಬೆಂಗಳೂರು ಪ್ರೆಸ್ ಕ್ಯಾಲೆಂಡರ್ ನೋಡಿದ್ದೇವೆ. ನಮ್ಮ ನಮ್ಮ ಗಣಕಗಳಲ್ಲೂ ಹಾಗೆ ಇದ್ದರೆ….
ಅದಕ್ಕಾಗಿಯೇ, ಬೆಂಗಳೂರು ಪ್ರೆಸ್ ಇ ಕ್ಯಾಲೆಂಡರ್ ಇದೆ. ಡೌನ್ಲೋಡ್ ಮಾಡಿಕೊಳ್ಳಿ. Download events for the months Jan – June  2010 for the  BANGALORE PRESS “E-Calendar”    ಇನ್ಸ್ಟಾಲ್ ಮಾಡಿದ ನಂತರ events ಅಂತ ಇರೋ ಕಡೆ, import ಮಾಡಿ, event  file ನ್ನ specify  ಮಾಡಿ. ನಿಮ್ಮ ಗಣಕ ಪರದೆಯ ಮೇಲೆ ಮುಂದಿನ ಹಬ್ಬ ಹರಿದಿನ, ರಜಾದಿನ(ಹೊಸ ವರ್ಷದಲ್ಲಿ ಅದನ್ನೇ ಮೊದಲು ನೋಡೋದ್ ತಾನೇ..!) ಎಲ್ಲ ಲಭ್ಯ.
 
ಅಂದ್ ಹಾಗೆ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಸಧ್ಯಕ್ಕೆ ನನ್ನ ಎಂ.ಟೆಕ್. ಪರೀಕ್ಷೆಗಳು ನಡೆಯುತ್ತಿವೆ. ಜನವರಿ ೨ ರ ನಂತರ ಭೇಟಿಯಾಗುತ್ತೇನೆ.

→ Leave a CommentCategories: ಮಾಹಿತಿ
Tagged: , , , ,

ಪುಕ್ಸಟೆ ಯಾಕ್ ಬರೀಬೇಕು ವರ್ಡ್ ಪ್ರೆಸ್ ನಲ್ಲಿ ?

December 19, 2009 · 5 Comments

ಪುಕ್ಸಟೆ ಯಾಕ್ ಬರೀಬೇಕು ವರ್ಡ್ ಪ್ರೆಸ್ ನಲ್ಲಿ ?
ನಾವು ಬರೆಯುವ ಪ್ರತಿಯೊಂದು ಬರಹಗಳಿಗೂ ಸರ್ವಿಸ್ ಪ್ರೊವೈಡರ್, ಸರ್ಚ್ ಎಂಜಿನ್ ಗಳು ಎಲ್ಲವೂ ದುಡ್ಡು ಸಂಪಾದಿಸುತ್ತವೆ. ಎಲ್ಲರಿಗೂ ಇಂತಿಷ್ಟು ಹಣ ಅಂತಾ ಹೋಗುತ್ತದೆ. ಇಲ್ಲಿ ನಮ್ಮ ಶ್ರಮ, ಪ್ರತಿಭೆ, ಅಮೂಲ್ಯ ಸಮಯ ಎಲ್ಲವನ್ನು ಎನ್ಕ್ಯಾಶ್ ಮಾಡಿಕೊಳ್ತಾ ಇದಾರೆ ಅಷ್ಟೇ. ಅದೂ wordpress.com ನಲ್ಲಿ ನೀವು ಯಾವುದೇ ಜಾಹಿರಾತುಗಳನ್ನು ಹಾಕಲಿಕ್ಕೆ ಆಗುವುದಿಲ್ಲ. ಹಾಕಬೇಕೆಂದರೆ, wordpress.org ಒಂದು ಡೊಮೈನ್ ಕೊಂಡುಕೊಳ್ಳಬೇಕು. ಬೇರೆ ಬೇರೆ ಕಂಪನಿಗಳು ಡೊಮೈನ್ ಕೊಡ್ತವೆ. ಅದಕ್ಕೆ ವರ್ಷಕ್ಕೆ ೨೦೦ರಷ್ಟು ಕಟ್ಟಬೇಕು. ನಿಮ್ಮ ದಾಖಲೆಗಳನ್ನ, ಬರಹಗಳನ್ನ ಶೇಖರಣೆ ಮಾಡಿಕೊಳ್ಳಲಿಕ್ಕೆ, ವೆಬ್ ಸ್ಪೇಸ್ ಕೊಂಡುಕೊಳ್ಳಬೇಕು. ಅದಕ್ಕೆ ವರ್ಷಕ್ಕೆ ೧೦೦೦ ದಿಂದ ೪೦೦೦ದ ವರೆಗೂ ಕಟ್ಟಬೇಕು.

ಬೀಚಿ ಒಂದು ಮಾತಾಡಿದ್ದಾರೆ. ನಾನು ದುಡ್ಡಿಗಾಗಿ ಬರೆದಿಲ್ಲ. ಆದರೆ, ಬರೆದಿದ್ದಕ್ಕೆಲ್ಲಾ, ದುಡ್ಡು ಪಡೆದಿದ್ದೇನೆ. ಸುಮ್ನೆ ನಮ್ಮ ಭಾವನೆಗಳನ್ನ ಹಂಚಿಕೊಳ್ಳಲಿಕ್ಕೆ, ಪ್ರತಿಭೆಗೆ ವೇದಿಕೆ ದೊರೆಯಲಿಕ್ಕೆ ಬ್ಲಾಗಿಂಗ್ ಶುರು ಮಾಡಿರಬಹುದು. ಆದರೆ, ನಿಮ್ಮತನವನ್ನ ಬೇರೆಯವರು ಎನ್ಕ್ಯಾಶ್ ಮಾಡಿಕೊಳ್ಳಲಿಕ್ಕೆ ಯಾಕೆ ಅವಕಾಶ ಕೊಡಬೇಕು. ಹೋದ ವರ್ಷ ಜುಲೈ ನಿಂದಲೂ ಇದರ ಬಗ್ಗೆ ತದಕಾಡಿದ್ದೇನೆ. ಏನೂ ದೊರೆತಿಲ್ಲ. ವಿವರಗಳಿಗಾಗಿ ಇಲ್ಲಿ ನೋಡಿ. http://forums.digitalpoint.com/showthread.php?t=1159929

ಬ್ಲಾಗ್ ಸ್ಪಾಟ್ ನಲ್ಲಿ ಜಾಹಿರಾತಿನ ಅವಕಾಶವಿದೆ. ಇದಕ್ಕೆ ಇನ್ನೊಂದು ಕಾರಣವೂ ಇದೆ. ಬ್ಲಾಗ್ ಸ್ಪಾಟ್ ಮತ್ತು ಗೂಗಲ್ ad ಸೆನ್ಸ್ ಎರಡೂ ಗೂಗಲ್ ಕಂಪನಿಯವೇ. https://www.google.com/adsense/
ಗೆ ಹೋಗಿ ನೀವು ಜಾಹಿರಾತಿನ ಅವಕಾಶಗಳನ್ನ ಒಮ್ಮೆ ಪರಿಶೀಲಿಸಬಹುದು. http://www.google.com/analytics/ ಈ ವಿಳಾಸ ಬಳಸಿ, ನಿಮ್ಮ ಗೂಗಲ್ ಅಕೌಂಟ್ ನೊಂದಿಗೆ ನಿಮ್ಮ ಬ್ಲಾಗನ್ನ, ವೆಬ್ ಸೈಟ್ ನ್ನ ಎಷ್ಟ್ ಜನ ನೋಡ್ತಾರೆ ಅಂತಾ ಗಮನಿಸಬಹುದು.

ಹಾಗಾಗಿ, ವರ್ಡ್ ಪ್ರೆಸ್ ಬಳಸುವುದು ಪರಕೀಯತೆ ಅನುಭವಿಸಿದಂತೆ ಅನ್ನಿಸತೊಡಗಿದೆ. ನೀವು ಬರಹಗಳನ್ನ ಹಾಕದಿದ್ದರೆ, ಈ ವೆಬ್ ಸೈಟ್ ನೋಡಲಿಕ್ಕೆ ಯಾರು ಬರುವುದಿಲ್ಲ. ಶ್ರಮ, ಸಮಯ, ಪ್ರತಿಭೆ, ಬುದ್ಧಿ ನಮ್ಮದು, ದುಡ್ಡು ಅವರಿಗೆ. ನನ್ನೆಲ್ಲ ಬರಹಗಳನ್ನ ಬ್ಲಾಗ್ ಸ್ಪಾಟ್ ಗೆ ವರ್ಗಾವಣೆ ಮಾಡುವತ್ತ, ಅಥವಾ, ಇಲ್ಲಿ ಬರೆದು ಅದಕ್ಕೆ ಲಿಂಕಿಸುವ ಕೆಲಸದ ಬಗ್ಗೆ ಚಿಂತಿಸುತ್ತಿದ್ದೇನೆ. ಬ್ಲಾಗ್ ಸ್ಪಾಟ್ ನಲ್ಲಿ ಜಾಹಿರಾತಿಗೆ ಅವಕಾಶವಿದೆ. wordpress.com ನಿಮಗೆ ನಿಮ್ಮ ಬರಹಗಳನ್ನ ಪ್ರಕಟಿಸಲಿಕ್ಕೆ ಅವಕಾಶ ನೀಡಬಹುದು. ಆದರೆ, ಜಾಹಿರಾತು ಪ್ರಕಟಿಸುವ ಸ್ವಾತಂತ್ರವನ್ನಲ್ಲ.

→ 5 CommentsCategories: Uncategorized
Tagged: , ,

ರಾಜಶೇಖರ ರೆಡ್ಡಿ ಸಾವು. ಒಂದು ವಿಶ್ಲೇಷಣೆ.

September 3, 2009 · 4 Comments

ನಲ್ಲಮಲ್ಲ ಅಥವಾ ನಲ್ಲ ಮಲೈ ಎಂದು ಕರೆಯಲ್ಪಡುವ ಜ್ಯೋತಿರ್ಲಿಂಗವಿರುವ ಶ್ರೀಶೈಲದ ಬಳಿಯ ದಟ್ಟಾರಣ್ಯ. ಹೈದರಾಬಾದಿನಿಂದ ೩೩೦ ಕಿಮೀ. ನಮ್ಮ ಬಂಡೀಪುರ, ನಾಗರಹೊಳೆಯಷ್ಟು ದಟ್ಟವಾದ, ರಕ್ಷಿತ ಅರಣ್ಯವಲಯ.

ತಲುಪಬೇಕಾದ ಊರನ್ನ ಬಿಟ್ಟು ೧೪ ಕಿ.ಮೀ ದಾರಿ ತಪ್ಪಿದ ಹೆಲಿಕಾಪ್ಟರ್ ಕೊನೆಗೆ ಗಿರಿಶ್ರೇಣಿಯ ತುದಿಯೊಂದಕ್ಕೆ ಬಡಿದು, ಸ್ಫೋಟಗೊಂದು, ಒಳಗಿದ್ದವರೆಲ್ಲಾ ಸುಟ್ಟುಹೋದರು. ಹೆಲಿಕಾಪ್ಟರ್ ನ ಹಿಂಬದಿ ಮಾತ್ರ ಗುರುತಿಸಲು ಬರುವಂತಿದೆ. ಮುಂಭಾಗವೆಲ್ಲಾ ಅಪರಿಮಿತ ಚೂರುಗಳಾಗಿ ಗಿರಿಶ್ರೇಣಿಯಲ್ಲಿ ಹರಡಿಕೊಂಡಿದೆ. ೨ ಸೆಪ್ಟೆಂಬರ್ ಗೆ ಶುರುವಾದ ಹುಡುಕಾಟ ೩ಕ್ಕೆ ಕೊನೆಗೊಂಡು ಆಘಾತಕಾರಿ ಸುದ್ದಿಯನ್ನೇ ನೀಡಿದೆ

ಗುಲ್ಬರ್ಗಾ ವಿವಿ ಯಿಂದ ಮೆಡಿಕಲ್ ಸೈನ್ಸ್ ‍ನಲ್ಲಿ ಡಾಕ್ಟರೇಟ್ ಪದವಿ ಪಡೆದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ. ಅಕ್ಕಿಯ ಬೆಲೆ ಜಾಸ್ತಿಯಾದಾಗ, ೩೫ರ ಆಸುಪಾಸಿಗೆ ಹೋದಾಗ, ಕಡಿಮೆ ರೇಟಿನ ೧೫ರೂ ಅಕ್ಕಿ ಬಳಸಿ ಜನರಿಗೆ ಮಾದರಿಯಾದ ವ್ಯಕ್ತಿ.

ರೆಡ್ಡಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಕರ್ನೂಲ್ ಜಿಲ್ಲೆಯ ಅಟ್ಮಕೂರು ಬಳಿಯ ಅರಣ್ಯಭರಿತ ಗಿರಿಶ್ರೇಣಿಗೆ ಢಿಕ್ಕಿ ಹೊಡೆದಿರಬಹುದು. ಅತಿಯಾದ ಮಳೆ ಮತ್ತು ಪ್ರತಿಕೂಲವಾದ ವಾತಾವರಣ ಪೈಲಟ್ ಗೆ ಚಾಲನೆಗೆ ತೊಂದರೆಯೊಡ್ಡಿ, ದಿಕ್ಕು ತಪ್ಪಿಸಿರಬಹುದು. ಆದ್ರೆ, ಇಲ್ಲಿ ಬೆಲ್ ೪೩೦ ಹೆಲಿಕ್ಯಾಪ್ಟರ್ ನ ವಿಂಡ್ ಶೀಲ್ಡ್ ಬಿರುಕಿನಿಂದ ಕೂಡಿತ್ತು ಎಂಬುದು ಗಮನೀಯ ಸಂಗತಿ. ಇದು ತರಬೇತಿಗಾಗಿ ಮಾತ್ರ ಉಪಯೋಗಿಸಲು ಯೋಗ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆಂದು ರೆಡಿಫ್ ವರದಿ ಮಾಡಿದೆ.

ಇಲ್ಲಿ ಒಂದು ಗಮನಿಸಬೇಕಾದ ಅಂಘವೆಂದರೆ ಅಖಂಡ ಭಾರತದಲ್ಲೆ ಅಭೂತಪೂರ್ವ ಶೋಧ ಕಾರ್ಯ ಕೈಗೊಂಡಿದ್ದರ ಬಗ್ಗೆ. ಬೇರೆ ಸಾಮಾನ್ಯ ವ್ಯಕ್ತಿ ಕಳೆದು ಹೋಗಿದ್ದರೆ ಇಷ್ಟೆಲ್ಲಾ ಮಾಡ್ತಿದ್ರಾ..? ಇರಲಿ. ಒಬ್ಬ ರಾಜಕೀಯ ನೇತಾರ ಅದೂ ಅಧಿಕಾರದಲ್ಲಿರುವಾತ ಕಣ್ಮರೆಯಾದರೆ, ಅದೂ ಜೊತೆಗೆ ತನ್ನೆಲ್ಲ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ, ಅರಾಜಕತೆ ತಾಂಡವವಾಡುತ್ತದೆ. ಮುಂದೆ ಅಧಿಕಾರಕ್ಕಾಗಿ ಕಚ್ಚಾಟ ಶುರುವಾಗುತ್ತದೆ. ಜೊತೆಗೆ ಹಿರಿಯ ಕಾಂಗ್ರೆಸಿಗ, ಆಂಧ್ರಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾತ, ಸೋನಿಯಾಗೆ ಆಪ್ತ ಎಂಬುದೆಲ್ಲವೂ ಅಭೂತಪೂರ್ವ ಶೋಧ ಕಾರ್ಯಾಚರಣೆಗೆ ಪ್ಲಸ್ ಪಾಯಿಂಟ್‍ಗಳು.

ಇದೆಲ್ಲ ಸರಿ. ೫೦೦೦ ಸಿ.ಆರ್.ಪಿ.ಎಫ್ ಯೋಧರು, ಇಂಡಿಯನ್ ಏರ್ ಫೋರ್ಸ್ ನ ೫ ವಿಮಾನಗಳು, ಸುಖೋಯ್ ವಿಮಾನಗಳು, ಇವೆಲ್ಲವೂ ಇದರಲ್ಲಿ ಪಾಲ್ಗೊಂಡಿದ್ದವು. ಈ ಸುಸಜ್ಜಿತ ಸುಖೋಯ್ ವಿಮಾನಗಳು ಗಾಳಿಯಲ್ಲೇ ಇಂಧನ ಮರುಪೂರಣ ಸೌಲಭ್ಯ ಹೊಂದಿರುವಂಥವು. ಜೊತೆಗೆ high clarity image ಗಳನ್ನ capture ಮಾಡಲಿಕ್ಕೆ ಸಶಕ್ತವಾದಂಥವು. ವಿಮಾನದ ಅಡಿಯಲ್ಲಿ ಜೋಡಿಸಿರುವ high resolution ಕ್ಯಾಮರಾಗಳು ಶೋಧ ಕಾರ್ಯದಲ್ಲಿದ್ದವು.

ಇಸ್ರೋ ಕೂಡಾ 41 image ಗಳನ್ನ ತೆಗೆದು ಸರಕಾರದೊಂದಿಗೆ ಹಂಚಿಕೊಂಡಿದೆ. ಆದರೆ, ಇಸ್ರೋನ ಭೂಸ್ಥಿರ ಉಪಗ್ರಹ(geo stationary satellite) 3 ಸೆಪ್ಟೆಂಬರ್ ನ ಬೆಳಗ್ಗೆ ಹೊತ್ತಿಗೆ ನಲ್ಲವಲ್ಲ ಕಾಡಿನ ಪ್ರದೇಶವನ್ನ ನೇರವಾಗಿ ದಿಟ್ಟಿಸಬಹುದು. ಹಾಗಾಗಿ ಅಲ್ಲಿಯವರೆಗು ಅದರ image ಗಳು ಅಲಭ್ಯವಾದವು. Metal Detector ಗಳನ್ನ ಕೂಡಾ ಹೊಂದಿರುವುದರಿಂದ, ಹೆಲಿಕಾಪ್ಟರ್ ಅವಶೇಶಗಳನ್ನ ಗುರುತಿಸಬಹುದಿತ್ತು. ಆದ್ರೆ, ಇದಕ್ಕೆಲ್ಲಾ ಶೋಧ ಕಾರ್ಯ ಶುರುವಾಗಿ ಸರಿಯಾಗಿ ೨೪ ತಾಸುಗಳು ಬೇಕು. ಇಸ್ರೋನ ಉಪಗ್ರಹದಿಂದ ಭೂಮಿಯ ಮೇಲಿರುವ ವಾಹನದ ನಂಬರ್ ಪ್ಲೇಟನ್ನೂ ಕೂಡಾ ಗುರುತಿಸಬಹುದು..! ನಮಗೆ ಕಾಣದ, ಸಾವಿರಾರು ಕಿಲೋ ಮೀಟರ್ ದೂರದಲ್ಲಿರುವ ಉಪಗ್ರಹವೊಂದು ನಮ್ಮ ಗಾಡಿ ನಂಬರನ್ನ ಹೇಳುತ್ತದೆಯೆಂದರೆ ಇದು ಸಾಮಾನ್ಯದ ಮಾತಲ್ಲ. ಆದರೆ, ಇಸ್ರೋನ ಉಪಗ್ರಹಗಳೂ ಕೂಡಾ ದಟ್ಟ ಅರಣ್ಯವಾದ್ದರಿಂದ ಕಾರ್ಯಾಚರಣೆಗೆ ಸಾಥ್ ನೀಡದಾದವು.

ಇಲ್ಲಿ ಇನ್ನೊಂದು ಸಾಮ್ಯತೆಯಿರುವ ಸಂಗತಿಯನ್ನೂ ಗಮನಿಸಬಹುದು. ಹೆಲಿಕಾಪ್ಟರ್ ಢಿಕ್ಕಿ ಹೊಡೆದದ್ದು ೨೫೦೦ ಮಿಲಿಯನ್ ವರ್ಷಗಳ ಹಿಂದೆ ನಿರ್ಮಿತವಾದ ಶಿಖರದ ತುದಿಗೆ. ಇವು ಕಬ್ಬಿಣಾಂಶಗಳನ್ನ ಹೊಂದಿರುತ್ತವೆ. ದಾರಿ ತಪ್ಪಿದ ಹೆಲಿಕಾಪ್ಟರ್ ಪ್ರತಿಕೂಲ ವಾತಾವರದ ಕಾರಣ ಮತ್ತು ಹೆಲಿಕಾಪ್ಟರ್ ದೋಷದಿಂದ ಇದಕ್ಕೆ ಢಿಕ್ಕಿ ಹೊಡೆದಿದೆ. ತೇಜಸ್ವಿಯವರ ಕಾದಂಬರಿಯಲ್ಲಿ ಬರುವ ಮ್ಯಾಗ್ನೆಟಿಕ್ ಶಿಲಾ ಶಿಖರವೊಂದು ಹೆಲಿಕಾಪ್ಟರ್,ವಿಮಾನಗಳನ್ನ ಆಕರ್ಷಿಸುವ ಶಕ್ತಿ ಹೊಂದಿರುವಂತೆ, ಇಲ್ಲಿ ಕೂಡಾ ಅದೇ ಆಗಿರಬಹುದಲ್ಲವಾ.. ಶಿಲಾ ಶಿಖರಗಳು ಹೆಮಟೈಟ್, ಮ್ಯಾಗ್ನಟೈಟ್ ಹೊಂದಿರುವುದರಿಂದ ಅದರ ಇನ್ನೊಂದು ರೂಪವಾಗಿ ಅಯಸ್ಕಾಂತವಾಗಿಯೇ ಏಕಿರಬಾರದು.

ತನಿಖೆಯಿಂದ ಮಾತ್ರ ತಿಳಿಯಬಹುದು.

→ 4 CommentsCategories: Uncategorized
Tagged: , , ,

ಒಂದು ದುರಂತದ ಸುತ್ತ…

October 1, 2008 · 1 Comment

    ನಿನ್ನೆ (೨೭ ಸೆಪ್ಟೆಂಬರ್) ನಮ್ಮ ದಾವಣಗೆರೆಯ ಡೆಂಟಲ್ ಕಾಲೇಜ್ ರೋಡಿನಲ್ಲಿ ಜಿ.ಎಂ.ಐ.ಟಿ ಬಸ್ ಹರಿದು ಸ್ಕೂಟಿ ಮೇಲೆ ಹೊರಟಿದ್ದ ತರಳುಬಾಳು ಕಾಲೇಜಿನ ಪ್ರಿಯಾಂಕ, ಪ್ರಥಮ ಪಿಯುಸಿ ಹುಡುಗಿ, ಸ್ಥಳದಲ್ಲೇ ಸಾವನ್ನಪ್ಪಿದಳು. ಡ್ರೈವರ್ ಲಕ್ಷ್ಮೀ ಫ್ಲೋರ್ ಮಿಲ್ ವರೆಗೂ ಬಸ್ ಓಡಿಸಿಕೊಂಡು ಹೋಗಿ, ನಂತರ ಪರಾರಿಯಾಗಿದ್ದಾನೆ. ಬಿ.ಜೆ.ಪಿ ಎಮ್ಮೆಲ್ಲೆ, ಎಂಪಿ ಇರೋ ದಾವಣಗೆರೆಯಲ್ಲಿ ಪ್ರಕರಣವನ್ನ ಬಯಲಿಗೆ ಬರದಂತೆ ತಡೆಯುವುದು, ಮುಚ್ಚಿ ಹಾಕುವುದು ಚಿಟಿಕೆ ಹೊಡೆದಷ್ಟು ಸುಲಭದ ಕೆಲಸ. ಅದೂ ಬಿ.ಜೆ.ಪಿ ಸರ್ಕಾವಿರುವ ಕರ್ನಾಟಕದಲ್ಲಿ.

 

    ಆದರೆ ಆ ಹುಡುಗಿ..? ಮರಳಿ ಬರುತ್ತಾಳಾ..? ಇರುವ ಒಬ್ಬಳೇ ಮಗಳು, ಹದಿನೆಂಟು ವರ್ಷ ಸಾಕಿ ಸಲುಹಿದ ಮಗಳು, ಬಂಗಾರ ಬಾಳು ಬಾಳಬೇಕಾದವಳು ಹೀಗೆ ಸತ್ತುಹೋದರೆ ತಂದೆ ತಾಯಿಗಳ ಗತಿಯೇನು..? ಆ ವೇದನೆ, ನೋವು, ಕರುಳ ಮಿಡಿತ ಇವುಗಳಿಗೆ ಸಮಾಧಾನ ಹೇಳಲಾಗುವುದುಂಟೇ..?

 

    ೨೦೦೧ರಲ್ಲಿ ಶುರುವಾದ ಜಿ.ಎಂ.ಐ.ಟಿ ಉತ್ತಮವಾದ ಬೆಳವಣಿಗೆಯನ್ನೇ ತೋರಿತು. ನಾಲ್ಕು ವರ್ಷ ಪೂರೈಸಿದ ಮೂರನೇ ಬ್ಯಾಚ್ ವಿದ್ಯಾರ್ಥಿಗಳು ಹೊರ ಬರುವ ಹೊತ್ತಿಗೆ ಒಂದು ಮಟ್ಟಿಗೆ established ಆಗಿತ್ತು. ಈಗ ಹೊರಬಂದ ಜುಲೈ ೨೦೦೮ ಬ್ಯಾಚ್‍ನ ವಿದ್ಯಾರ್ಥಿಗಳಿಗೆ ಉತ್ತಮವಾದ ಕ್ಯಾಂಪಸ್ ಸೆಲೆಕ್ಷನ್ ಅವಕಾಶಗಳು ಸಿಕ್ಕವು. ದಿವಂಗತ ಜಿ.ಮಲ್ಲಿಕಾರ್ಜುನಪ್ಪನವರ ದೂರದೃಷ್ಟಿಯಿಂದಾಗಿ ದಾವಣಗೆರೆಯಲ್ಲಿ ಜಿ.ಎಂ.ಐ.ಟಿ ಶುರುವಾಯಿತು. ಅವರ ಎಲ್ಲ ಮಕ್ಕಳಿಗೆ ಬೆಂಗಳೂರಿನಲ್ಲಿ ಕಾಲೇಜು ಕಟ್ಟಬೇಕೆಂಬ ಹಂಬಲವಿತ್ತು. ಜಿ.ಎಂ.ಐ.ಟಿ ಉತ್ತಮ infrastructure ಹೊಂದಿದೆ. ವಿಧಾನ ಸೌಧದಂಥಾ ಕಟ್ಟಡವಿದೆ. ಐ.ಟಿ ಕಂಪನಿಗಿರುವ ಕನ್ನಡಿಗಳ ಖದರ್ರಿದೆ.

 

    ಆದರೆ ಇವೆಲ್ಲವುಗಳಿಗೆ ಪೂರಕವಾಗಿ ಉತ್ತಮ ಗುಣಮಟ್ಟದ ಶಿಕ್ಷಣ ಮೊದಲ ಆದ್ಯತೆಗಳಲ್ಲಿ ಒಂದಾಗಬೇಕು. ಆದರೆ, ಜಿ.ಎಂ.ಐ.ಟಿ ಮೇಲಿರುವ ಪ್ರಮುಖ ಆರೋಪವೆಂದರೆ, ಇಲ್ಲಿ ಮೆಟ್ಟಿಲಿನ, ನೆಲದ ಗ್ರಾನೈಟ್ ಕಲ್ಲು ಒಡೆದು ಹೋದರೆ, ನಾಳೆಯೇ ಸರಿ ಮಾಡಿಸುತ್ತಾರೆ, ಆದರೆ ಒಬ್ಬ ಒಳ್ಳೆ ಲೆಕ್ಚರರ್ ಬಿಟ್ಟು ಹೋದರೆ ಆ ಸ್ಥಳಕ್ಕೆ ಸಮರ್ಥರನ್ನ ಕರೆತರುವ ಕೆಲಸ ಆಗುವುದೇ ಇಲ್ಲ. ಜಿ.ಎಂ.ಐ.ಟಿ ಗೆ ಇನ್ನೂ ಹೆಚ್ಚಾಗಿ ಬೆಳೆಯುವ ಅವಕಾಶಗಳಿದ್ದವು. ಜಿ.ಎಂ.ಐ.ಟಿ.ಯ ಜೊತೆಗೇ  ಶುರುವಾದ ಓರಗೆಯ ಕಾಲೇಜುಗಳಲ್ಲೇ ಇದು superb ಎನ್ನುವಂತೆ performance ತೋರಿತ್ತು. ಇನ್ನೇನು ಬಿ.ಐ.ಇ.ಟಿ.ಯನ್ನೇ ಹಿಂದಿಕ್ಕುತ್ತದೆ ಅನ್ನುವಷ್ಟರ ಮಟ್ಟಿಗೆ ಬೆಳೆದುಬಿಟ್ಟಿತು. ಆದರೆ, ಆದ್ರೆ, ಅದಕ್ಕೆ ಬೇಕಾದ Dedicationನ್ನ ಮ್ಯಾನೇಜ್‍ಮೆಂಟ್ ತೋರಲಿಲ್ಲ. ಉತ್ತಮ ಅನುಭವಿ ಲೆಕ್ಚರರ್‌ಗಳನ್ನ ಕರೆತರಬಹುದಾಗಿತ್ತು. ಆದ್ರೆ. ಇಲ್ಲಿ money matter ಜೊತೆಗೆ ಪಿ.ಹೆಚ್.ಡಿ. ಮಾಡಿದವರಿಗೆ, ಮಾಡುವವರಿಗೆ ರಿಸರ್ಚ್‍ಗಾಗಿ ಇರುವ, ಒದಗಿಸಲಾಗುವ, ಅವರ ಬೆಳವಣಿಗೆಗಾಗಿ ಇರುವ ಅವಕಾಶಗಳೂ ಪರಿಗಣಿಸಲ್ಪಡುತ್ತವೆ. ಕಾಲೇಜಿನ ಸಿಂಗಾರಕ್ಕೆ ಖರ್ಚು ಮಾಡುವುದರಲ್ಲಿ ಒಂದಿಷ್ಟನ್ನ ಅನುಭವೀ ಲೆಕ್ಚರರ್‌ಗಳನ್ನ ಕರೆತರಲು ಉಪಯೋಗಿಸಿದ್ದರೆ, ಕಾಲೇಜಿನ ಉನ್ನತಿ, ಅಭಿವೃದ್ಧಿ, Status ಎಲ್ಲವೂ ಏರುಗತಿಯಲ್ಲೇ ಸಾಗುತ್ತಿದ್ದವು. ಐ.ಐ.ಟಿ ಮಂದಿ ಸಿಗದಿದ್ದರೂ ಸೂರತ್ಕಲ್‍ನಂಥ ಕಾಲೇಜಿನ ನಿವೃತ್ತ ವ್ಯಕ್ತಿಗಳನ್ನ ಕರೆತರಬಹುದಾಗಿತ್ತು. ಪ್ರತಿಯೊಂದು ಬ್ರಾಂಚಿನಲ್ಲಿ ಎಂ.ಟೆಕ್, ಪಿ.ಹೆಚ್.ಡಿ ಮಾಡಿದ ಮಂದಿ ಎಷ್ಟಿದ್ದಾರೆ ಅಂತಾ ಗಮನಿಸಿದರೆ, ಹುಡುಗರಿಗೆ ಆದರ್ಶಪ್ರಾಯವಾದ, ಸ್ಫೂರ್ತಿದಾಯರಾದ ಲೆಕ್ಚರರ್‌ಗಳು ಎಷ್ಟು ಮಂದಿ ಇದ್ದಾರೆ ಅಂತಾ ಕಣ್ಣು ಹಾಯಿಸಿದರೆ ನಿರಾಶೆ ಕವಿಯುತ್ತದೆ. ನಿರೀಕ್ಷಿಸಿದ ಮಟ್ಟಕ್ಕೆ ಕಾಲೇಜು ಏರಲೇ ಇಲ್ಲ. ಹೌದು, ನಿಜಕ್ಕೂ ಜಿ.ಎಂ.ಐ.ಟಿಯ ಅಡಿಟೋರಿಯಂ ಹಾಲ್ ನಿಜಕ್ಕೂ ಸುತ್ತಮುತ್ತಲಿನ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲೂ ಇಲ್ಲ. ಯಾವ ಒಂದು ಕಾರ್ಪೊರೇಟ್ ಕಲ್ಚರ್‌‍ಗೂ ಸರಿಸಮವೆಂಬಂತೆ ಕಾಲೇಜಿನ infrastructure ಇದೆ ಎಂಬುದನ್ನ ನಿರ್ವಿವಾದಿತವಾಗಿ ಒಪ್ಪಬಹುದು.

 

    ಆದ್ರೆ, ಇವೆಲ್ಲವುಗಳಿಗೆ ಕಳಶವಿಟ್ಟಂತೆ ಶಿಕ್ಷಣದ ಗುಣಮಟ್ಟವೂ ಇರಬೇಕು ಎಂದು ಬಯಸುವುದರಲ್ಲಿ ತಪ್ಪೇನಿದೆ..?

 

    ಒಂದೇ ಬಿಲ್ಡಿಂಗ್‌ನಲ್ಲೇ ಬೇರೆ ಬೇರೆ ಅಂತಸ್ತುಗಳಲ್ಲಿ ಬೇರೆ ಬೇರೆ ಬ್ರಾಂಚುಗಳು ನೆಲೆಸಿರುವುದೂ ಕೂಡಾ Inter branch interferenceಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಎಲ್ಲ ಕಾಲೇಜುಗಳಲ್ಲಿ ಪ್ರತಿಯೊಂದು ಬ್ರಾಂಚ್‍ಗೆ ಬೇರೆಯಾದ ಕಟ್ಟಡವೇ ಇರುತ್ತದೆ. ಇದರಿಂದ ಪ್ರತಿಯೊಂದು ಬ್ರಾಂಚ್ ಕೂಡಾ ತನ್ನದೇ ಆದ ರೀತಿಯಲ್ಲಿ ಬೆಳೆಯುತ್ತ ಹೋಗಲಿಕ್ಕೆ ಅವಕಾಶಗಳಿರುತ್ತವೆ. ಆದರೆ ಒಂದೇ ಕಟ್ಟಡವಿದ್ದಾಗ, ಪ್ರಿನ್ಸಿಪಾಲರು ಎಲ್ಲ ಬ್ರಾಂಚುಗಳ ಮೇಲ್ವಿಚಾರಣೆ ನೆಡೆಸುವುದಕ್ಕಿಂತ ಎಲ್ಲ ಬ್ರಾಂಚುಗಳಲ್ಲಿ ಹಿಡಿತ ಸಾಧಿಸುವತ್ತ ಸಾಗುವುದರಿಂದ ಬ್ರಾಂಚುಗಳು autonomous ಆಗಿ ಕೆಲಸ ಮಾಡಲಿಕ್ಕೆ ಅಡ್ಡಿಯಾಗುತ್ತದೆ. ಪ್ರತಿಸಲವೂ ಪ್ರಿನ್ಸಿಪಾಲರು ಬ್ರಾಂಚ್ ಹೆಚ್.ಓ.ಡಿ.ಗಳನ್ನ ಸಣ್ಣ ಸಣ್ಣ ವಿಷಯಗಳಿಗೆ ಪ್ರಶ್ನಿಸುವುದರಿಂದ, ಅವರು ಲೆಕ್ಚರರ್‌ಗಳ ಮೇಲೆ ರೇಗುತ್ತಾರೆ, ಲೆಕ್ಚರರ್‌ಗಳು ಹುಡುಗರ ಮೇಲೆ ರೇಗುತ್ತಾರೆ. ಇದು ಎಲ್ಲ ಕಡೆ ನೆಡೆಯುವ ಸಂಗತಿಯಾದರೂ, ವಿದ್ಯಾರ್ಥಿಗಳಲ್ಲಿ ಆಡಳಿತ ವಿರೋಧಿ ಅಲೆ ಉಂಟಾಗುವಂತೆ ಮಾಡಬಾರದು.

 

    ಅನಾಹುತಕ್ಕೆ ಸಂಬಂಧಿಸಿದಂತೆ ಇದನ್ನೆಲ್ಲಾ ಏಕೆ ಹೇಳಬೇಕಾಯಿತೆಂದರೆ, ಒಂದು ಬೇಜವಾಬ್ದಾರಿತನಕ್ಕೆ, ಲೋಪದೋಷಕ್ಕೆ ತನ್ನದೇ ಆದ internal matters ಕಾರಣವಾಗಿರುತ್ತವೆ ಅಂತಾ ತಿಳಿಸಲಿಕ್ಕೆ.

 

    ಡ್ರೈವರ್ ಮಾಡಿದ ಅನಾಹುತಕ್ಕೆ ಕಾಲೇಜಿನ ಮ್ಯಾನೇಜ್‍ಮೆಂಟ್ ನೇರ ಹೊಣೆಯಾಗಿರಲಾರದು. ಆದರೆ, ಪರೋಕ್ಷವಾಗಿ..? ಕೆಲ ತಿಂಗಳ ಹಿಂದೆ ಕಾಲೇಜು ಬಸ್ಸು ಬಿ.ಡಿ.ಟಿ ಕಾಲೇಜಿನ ಕಾಂಪೋಂಡಿಗೆ ಗುದ್ದಿ ಕಾಂಪೋಂಡು ಬಿದ್ದುಹೋಗಿತ್ತು. ಆ ಅನಾಹುತಕ್ಕೆ ಮಳೆಯ, ಕೆಸರಿನ ಕಾರಣ ಕೊಡಬಹುದಾದರೂ ಜೀವಹಾನಿ ಸಂಭವಿಸಿರಲಿಲ್ಲ. ಆಗಲೇ ಮುನ್ನೆಚ್ಚರಿಕೆ ವಹಿಸಿ ಡ್ರೈವರುಗಳನ್ನ ಹದ್ದುಬಸ್ತಿನಲ್ಲಿಡುವಂತೆ ಆದೇಶಿಸಬಹುದಾಗಿತ್ತು. ಆರೇಳು ಬಸ್ಸುಗಳಲ್ಲಿ ಐನೂರಕ್ಕೂ ಹೆಚ್ಚು ಹುಡುಗ-ಹುಡುಗಿಯರು ಓಡಾಡುವಾಗ ಎಚ್ಚರಿಕೆ ವಹಿಸುವುದು ಕರ್ತವ್ಯ. ಹುಡುಗರ ಬಸ್ಸು, ಹುಡುಗಿಯರ ಬಸ್ಸುಗಳು ಒಮ್ಮೆಗೇ ಹೊರಟಾಗ, ರೇಸಿಗೆ ಬಿಟ್ಟಂತೆ ಕೆಲ ಡ್ರೈವರ್‌ಗಳು ಡ್ರೈವ್ ಮಾಡುವುದೂ ಇತ್ತು. ಇವೆಲ್ಲವುಗಳ ಬಗ್ಗೆ ಆಡಳಿತ ಮಂಡಳಿ ಗಮನ ಹರಿಸಬೇಕಿತ್ತು. ಇಲ್ಲಿ ನಾನು ಆಡಳಿತ ಮಂಡಳಿಯ ಬಗ್ಗೆಯೇ ಆರೋಪಿಸುವುದಿಲ್ಲ. ಚಾಲಕರ ಅಜಾಗರೂಕತೆಯೂ ಇದೆ. ಆದ್ರೆ, ಮೇಲ್ವಿಚಾರಣೆಯಲ್ಲಿರುವವರು ಟೈಮ್ ಲಿಮಿಟ್‍ಗಳನ್ನ ಹಾಕಿ ಒತ್ತಡದಲ್ಲಿ ಚಾಲಕರಿಗೆ ಗಾಡಿ ಓಡಿಸುವಂತೆ ಮಾಡುವುದರಿಂದಲೂ ಅನಾಹುತಗಳು ಸಂಭವಿಸಬಹುದು.

 

    ಎ.ಐ.ಸಿ.ಟಿ.ಯು. ಕಾನೂನಿನ ಪ್ರಕಾರ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪಿ.ಯು.ಸಿ ಕಾಲೇಜುಗಳನ್ನ ನೆಡೆಸಬಾರದೆಂಬ ಕಾನೂನಿದೆ. ಮೊನ್ನೆ ಮೊನ್ನೆ ಎ.ಐ.ಸಿ.ಟಿ.ಯು. ಸಮಿತಿಯವರು ಬಂದಾಗ ಅದನ್ನ “ಸರಿಮಾಡಿಕೊಂಡರು” ಎಂಬ ಆರೋಪವಿದೆ. ಇರುವ ಎಂಜಿನಿಯರಿಂಗ್ ಕಾಲೇಜನ್ನೇ ಉತ್ತಮಿಕೆಯ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಬದಲು ಒಂದೇ ಕ್ಯಾಂಪಸ್‌ನಲ್ಲಿ, ಒಂದೇ ಬಿಲ್ಡಿಂಗ್‍ನಲ್ಲಿ ಪಿ.ಯು.ಸಿ, ಎಂ.ಬಿ.ಎ. ಕಾಲೇಜುಗಳನ್ನ ತೆರೆಯುವುದರಿಂದ Education standard ಯಾವ ಕ್ಷೇತ್ರದಲ್ಲೂ ಎತ್ತರಿಸಲಿಕ್ಕೆ ಸಾಧ್ಯವಿಲ್ಲ ಎಂಬುದನ್ನ ಆಡಳಿತ ಮಂಡಳಿಯ ಜಿ.ಎಂ.ಲಿಂಗರಾಜ್‍ರವರು, ಸಂಸದ ಜಿ.ಎಂ.ಸಿದ್ಧೇಶ್‍ರವರು ತಿಳಿಯಬೇಕು.

 

    ವಿದ್ಯೆ ಕಮರ್ಷಿಯಲೈಸ್ ಆಗಿದೆ. ಅದನ್ನ ಒಪ್ಪಬೇಕು. ವಿದ್ಯೆ ಪಡೆಯಲಿಕ್ಕೆ, ವಿದ್ಯೆ ನೀಡುವ ಆರ್ಗನೈಸೇಷನ್ Insfrastructure setup ಮಾಡಲಿಕ್ಕೆ ಅಪಾರ ಪ್ರಮಾಣದ ದುಡ್ಡು ಬೇಕು. ಆದ್ರೆ, ಅದೇ ವ್ಯಾಪಾರವಾಗಬಾರದು. ವ್ಯಾಪಾರವೇ ಮಾಡಬೇಕೆಂದಿದ್ದರೆ, ಅಡಿಕೆ, ಮೈನಿಂಗ್‍ನಲ್ಲೇ ವ್ಯಾಪಾರ ಮಾಡಬಹುದಾಗಿತ್ತು. ಇದೇ ರೀತಿ ಮಾಡಿದ್ದರೆ, ಟಾಟಾರಂಥವರು, ಐ.ಐ.ಎಸ್.ಸಿ.ಯಂಥಾ ವಿದ್ಯಾಲಯವನ್ನ ಕಟ್ಟಲಾಗುತ್ತಿತ್ತಾ..? ಎರಡು ಮೂರು ದೋಣಿಗಳಲ್ಲಿ ಕಾಲಿಟ್ಟು ಕೆಳಗೆ ಬೀಳುವ ಬದಲು ಒಂದೇ ದೋಣಿಯಲ್ಲಿ ಸಾಗಿ ದಡಸೇರುವುದುತ್ತಮ.

 

    ಏನೇ ಆಗಲಿ, ಈ ದುರ್ಘಟನೆ ಜಿ.ಎಂ.ಐ.ಟಿ.ಗೆ ಕಪ್ಪುಚುಕ್ಕೆಯಂತೆ ಎಂಬುದಂತೂ ದಿಟ.

 

    ಈಗ ಆದದ್ದಾಯಿತು. ಮುಂದಾದರೂ ಎಚ್ಚೆತ್ತುಕೊಳ್ಳಲಿ. ಶಿಕ್ಷಣ ಕ್ಷೇತ್ರದಲ್ಲಿ ದಾಪುಗಾಲು ಹಾಕಬೇಕೆಂಬ ಸಾತ್ವಿಕ ವ್ಯಕ್ತಿ ಜಿ.ಮಲ್ಲಿಕಾರ್ಜುನಪ್ಪನವರ ಕನಸನ್ನ ಅವರ ಮಕ್ಕಳು ನನಸು ಮಾಡುವರೆಂದು ನಂಬಬಹುದೇ..?

 

 

 

 

→ 1 CommentCategories: ದಾವಣಗೆರೆ · ಮನದ ಮಾತು
Tagged: , , , , , ,