ಪ್ರತಿಸ್ಪಂದನ – Pratispandana

ರಾಜಶೇಖರ ರೆಡ್ಡಿ ಸಾವು. ಒಂದು ವಿಶ್ಲೇಷಣೆ.

September 3, 2009 · 2 Comments

ನಲ್ಲಮಲ್ಲ ಅಥವಾ ನಲ್ಲ ಮಲೈ ಎಂದು ಕರೆಯಲ್ಪಡುವ ಜ್ಯೋತಿರ್ಲಿಂಗವಿರುವ ಶ್ರೀಶೈಲದ ಬಳಿಯ ದಟ್ಟಾರಣ್ಯ. ಹೈದರಾಬಾದಿನಿಂದ ೩೩೦ ಕಿಮೀ. ನಮ್ಮ ಬಂಡೀಪುರ, ನಾಗರಹೊಳೆಯಷ್ಟು ದಟ್ಟವಾದ, ರಕ್ಷಿತ ಅರಣ್ಯವಲಯ.

ತಲುಪಬೇಕಾದ ಊರನ್ನ ಬಿಟ್ಟು ೧೪ ಕಿ.ಮೀ ದಾರಿ ತಪ್ಪಿದ ಹೆಲಿಕಾಪ್ಟರ್ ಕೊನೆಗೆ ಗಿರಿಶ್ರೇಣಿಯ ತುದಿಯೊಂದಕ್ಕೆ ಬಡಿದು, ಸ್ಫೋಟಗೊಂದು, ಒಳಗಿದ್ದವರೆಲ್ಲಾ ಸುಟ್ಟುಹೋದರು. ಹೆಲಿಕಾಪ್ಟರ್ ನ ಹಿಂಬದಿ ಮಾತ್ರ ಗುರುತಿಸಲು ಬರುವಂತಿದೆ. ಮುಂಭಾಗವೆಲ್ಲಾ ಅಪರಿಮಿತ ಚೂರುಗಳಾಗಿ ಗಿರಿಶ್ರೇಣಿಯಲ್ಲಿ ಹರಡಿಕೊಂಡಿದೆ. ೨ ಸೆಪ್ಟೆಂಬರ್ ಗೆ ಶುರುವಾದ ಹುಡುಕಾಟ ೩ಕ್ಕೆ ಕೊನೆಗೊಂಡು ಆಘಾತಕಾರಿ ಸುದ್ದಿಯನ್ನೇ ನೀಡಿದೆ

ಗುಲ್ಬರ್ಗಾ ವಿವಿ ಯಿಂದ ಮೆಡಿಕಲ್ ಸೈನ್ಸ್ ‍ನಲ್ಲಿ ಡಾಕ್ಟರೇಟ್ ಪದವಿ ಪಡೆದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ. ಅಕ್ಕಿಯ ಬೆಲೆ ಜಾಸ್ತಿಯಾದಾಗ, ೩೫ರ ಆಸುಪಾಸಿಗೆ ಹೋದಾಗ, ಕಡಿಮೆ ರೇಟಿನ ೧೫ರೂ ಅಕ್ಕಿ ಬಳಸಿ ಜನರಿಗೆ ಮಾದರಿಯಾದ ವ್ಯಕ್ತಿ.

ರೆಡ್ಡಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಕರ್ನೂಲ್ ಜಿಲ್ಲೆಯ ಅಟ್ಮಕೂರು ಬಳಿಯ ಅರಣ್ಯಭರಿತ ಗಿರಿಶ್ರೇಣಿಗೆ ಢಿಕ್ಕಿ ಹೊಡೆದಿರಬಹುದು. ಅತಿಯಾದ ಮಳೆ ಮತ್ತು ಪ್ರತಿಕೂಲವಾದ ವಾತಾವರಣ ಪೈಲಟ್ ಗೆ ಚಾಲನೆಗೆ ತೊಂದರೆಯೊಡ್ಡಿ, ದಿಕ್ಕು ತಪ್ಪಿಸಿರಬಹುದು. ಆದ್ರೆ, ಇಲ್ಲಿ ಬೆಲ್ ೪೩೦ ಹೆಲಿಕ್ಯಾಪ್ಟರ್ ನ ವಿಂಡ್ ಶೀಲ್ಡ್ ಬಿರುಕಿನಿಂದ ಕೂಡಿತ್ತು ಎಂಬುದು ಗಮನೀಯ ಸಂಗತಿ. ಇದು ತರಬೇತಿಗಾಗಿ ಮಾತ್ರ ಉಪಯೋಗಿಸಲು ಯೋಗ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆಂದು ರೆಡಿಫ್ ವರದಿ ಮಾಡಿದೆ.

ಇಲ್ಲಿ ಒಂದು ಗಮನಿಸಬೇಕಾದ ಅಂಘವೆಂದರೆ ಅಖಂಡ ಭಾರತದಲ್ಲೆ ಅಭೂತಪೂರ್ವ ಶೋಧ ಕಾರ್ಯ ಕೈಗೊಂಡಿದ್ದರ ಬಗ್ಗೆ. ಬೇರೆ ಸಾಮಾನ್ಯ ವ್ಯಕ್ತಿ ಕಳೆದು ಹೋಗಿದ್ದರೆ ಇಷ್ಟೆಲ್ಲಾ ಮಾಡ್ತಿದ್ರಾ..? ಇರಲಿ. ಒಬ್ಬ ರಾಜಕೀಯ ನೇತಾರ ಅದೂ ಅಧಿಕಾರದಲ್ಲಿರುವಾತ ಕಣ್ಮರೆಯಾದರೆ, ಅದೂ ಜೊತೆಗೆ ತನ್ನೆಲ್ಲ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ, ಅರಾಜಕತೆ ತಾಂಡವವಾಡುತ್ತದೆ. ಮುಂದೆ ಅಧಿಕಾರಕ್ಕಾಗಿ ಕಚ್ಚಾಟ ಶುರುವಾಗುತ್ತದೆ. ಜೊತೆಗೆ ಹಿರಿಯ ಕಾಂಗ್ರೆಸಿಗ, ಆಂಧ್ರಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾತ, ಸೋನಿಯಾಗೆ ಆಪ್ತ ಎಂಬುದೆಲ್ಲವೂ ಅಭೂತಪೂರ್ವ ಶೋಧ ಕಾರ್ಯಾಚರಣೆಗೆ ಪ್ಲಸ್ ಪಾಯಿಂಟ್‍ಗಳು.

ಇದೆಲ್ಲ ಸರಿ. ೫೦೦೦ ಸಿ.ಆರ್.ಪಿ.ಎಫ್ ಯೋಧರು, ಇಂಡಿಯನ್ ಏರ್ ಫೋರ್ಸ್ ನ ೫ ವಿಮಾನಗಳು, ಸುಖೋಯ್ ವಿಮಾನಗಳು, ಇವೆಲ್ಲವೂ ಇದರಲ್ಲಿ ಪಾಲ್ಗೊಂಡಿದ್ದವು. ಈ ಸುಸಜ್ಜಿತ ಸುಖೋಯ್ ವಿಮಾನಗಳು ಗಾಳಿಯಲ್ಲೇ ಇಂಧನ ಮರುಪೂರಣ ಸೌಲಭ್ಯ ಹೊಂದಿರುವಂಥವು. ಜೊತೆಗೆ high clarity image ಗಳನ್ನ capture ಮಾಡಲಿಕ್ಕೆ ಸಶಕ್ತವಾದಂಥವು. ವಿಮಾನದ ಅಡಿಯಲ್ಲಿ ಜೋಡಿಸಿರುವ high resolution ಕ್ಯಾಮರಾಗಳು ಶೋಧ ಕಾರ್ಯದಲ್ಲಿದ್ದವು.

ಇಸ್ರೋ ಕೂಡಾ 41 image ಗಳನ್ನ ತೆಗೆದು ಸರಕಾರದೊಂದಿಗೆ ಹಂಚಿಕೊಂಡಿದೆ. ಆದರೆ, ಇಸ್ರೋನ ಭೂಸ್ಥಿರ ಉಪಗ್ರಹ(geo stationary satellite) 3 ಸೆಪ್ಟೆಂಬರ್ ನ ಬೆಳಗ್ಗೆ ಹೊತ್ತಿಗೆ ನಲ್ಲವಲ್ಲ ಕಾಡಿನ ಪ್ರದೇಶವನ್ನ ನೇರವಾಗಿ ದಿಟ್ಟಿಸಬಹುದು. ಹಾಗಾಗಿ ಅಲ್ಲಿಯವರೆಗು ಅದರ image ಗಳು ಅಲಭ್ಯವಾದವು. Metal Detector ಗಳನ್ನ ಕೂಡಾ ಹೊಂದಿರುವುದರಿಂದ, ಹೆಲಿಕಾಪ್ಟರ್ ಅವಶೇಶಗಳನ್ನ ಗುರುತಿಸಬಹುದಿತ್ತು. ಆದ್ರೆ, ಇದಕ್ಕೆಲ್ಲಾ ಶೋಧ ಕಾರ್ಯ ಶುರುವಾಗಿ ಸರಿಯಾಗಿ ೨೪ ತಾಸುಗಳು ಬೇಕು. ಇಸ್ರೋನ ಉಪಗ್ರಹದಿಂದ ಭೂಮಿಯ ಮೇಲಿರುವ ವಾಹನದ ನಂಬರ್ ಪ್ಲೇಟನ್ನೂ ಕೂಡಾ ಗುರುತಿಸಬಹುದು..! ನಮಗೆ ಕಾಣದ, ಸಾವಿರಾರು ಕಿಲೋ ಮೀಟರ್ ದೂರದಲ್ಲಿರುವ ಉಪಗ್ರಹವೊಂದು ನಮ್ಮ ಗಾಡಿ ನಂಬರನ್ನ ಹೇಳುತ್ತದೆಯೆಂದರೆ ಇದು ಸಾಮಾನ್ಯದ ಮಾತಲ್ಲ. ಆದರೆ, ಇಸ್ರೋನ ಉಪಗ್ರಹಗಳೂ ಕೂಡಾ ದಟ್ಟ ಅರಣ್ಯವಾದ್ದರಿಂದ ಕಾರ್ಯಾಚರಣೆಗೆ ಸಾಥ್ ನೀಡದಾದವು.

ಇಲ್ಲಿ ಇನ್ನೊಂದು ಸಾಮ್ಯತೆಯಿರುವ ಸಂಗತಿಯನ್ನೂ ಗಮನಿಸಬಹುದು. ಹೆಲಿಕಾಪ್ಟರ್ ಢಿಕ್ಕಿ ಹೊಡೆದದ್ದು ೨೫೦೦ ಮಿಲಿಯನ್ ವರ್ಷಗಳ ಹಿಂದೆ ನಿರ್ಮಿತವಾದ ಶಿಖರದ ತುದಿಗೆ. ಇವು ಕಬ್ಬಿಣಾಂಶಗಳನ್ನ ಹೊಂದಿರುತ್ತವೆ. ದಾರಿ ತಪ್ಪಿದ ಹೆಲಿಕಾಪ್ಟರ್ ಪ್ರತಿಕೂಲ ವಾತಾವರದ ಕಾರಣ ಮತ್ತು ಹೆಲಿಕಾಪ್ಟರ್ ದೋಷದಿಂದ ಇದಕ್ಕೆ ಢಿಕ್ಕಿ ಹೊಡೆದಿದೆ. ತೇಜಸ್ವಿಯವರ ಕಾದಂಬರಿಯಲ್ಲಿ ಬರುವ ಮ್ಯಾಗ್ನೆಟಿಕ್ ಶಿಲಾ ಶಿಖರವೊಂದು ಹೆಲಿಕಾಪ್ಟರ್,ವಿಮಾನಗಳನ್ನ ಆಕರ್ಷಿಸುವ ಶಕ್ತಿ ಹೊಂದಿರುವಂತೆ, ಇಲ್ಲಿ ಕೂಡಾ ಅದೇ ಆಗಿರಬಹುದಲ್ಲವಾ.. ಶಿಲಾ ಶಿಖರಗಳು ಹೆಮಟೈಟ್, ಮ್ಯಾಗ್ನಟೈಟ್ ಹೊಂದಿರುವುದರಿಂದ ಅದರ ಇನ್ನೊಂದು ರೂಪವಾಗಿ ಅಯಸ್ಕಾಂತವಾಗಿಯೇ ಏಕಿರಬಾರದು.

ತನಿಖೆಯಿಂದ ಮಾತ್ರ ತಿಳಿಯಬಹುದು.

→ 2 CommentsCategories: Uncategorized
Tagged: , , ,

ಒಂದು ದುರಂತದ ಸುತ್ತ…

October 1, 2008 · 1 Comment

    ನಿನ್ನೆ (೨೭ ಸೆಪ್ಟೆಂಬರ್) ನಮ್ಮ ದಾವಣಗೆರೆಯ ಡೆಂಟಲ್ ಕಾಲೇಜ್ ರೋಡಿನಲ್ಲಿ ಜಿ.ಎಂ.ಐ.ಟಿ ಬಸ್ ಹರಿದು ಸ್ಕೂಟಿ ಮೇಲೆ ಹೊರಟಿದ್ದ ತರಳುಬಾಳು ಕಾಲೇಜಿನ ಪ್ರಿಯಾಂಕ, ಪ್ರಥಮ ಪಿಯುಸಿ ಹುಡುಗಿ, ಸ್ಥಳದಲ್ಲೇ ಸಾವನ್ನಪ್ಪಿದಳು. ಡ್ರೈವರ್ ಲಕ್ಷ್ಮೀ ಫ್ಲೋರ್ ಮಿಲ್ ವರೆಗೂ ಬಸ್ ಓಡಿಸಿಕೊಂಡು ಹೋಗಿ, ನಂತರ ಪರಾರಿಯಾಗಿದ್ದಾನೆ. ಬಿ.ಜೆ.ಪಿ ಎಮ್ಮೆಲ್ಲೆ, ಎಂಪಿ ಇರೋ ದಾವಣಗೆರೆಯಲ್ಲಿ ಪ್ರಕರಣವನ್ನ ಬಯಲಿಗೆ ಬರದಂತೆ ತಡೆಯುವುದು, ಮುಚ್ಚಿ ಹಾಕುವುದು ಚಿಟಿಕೆ ಹೊಡೆದಷ್ಟು ಸುಲಭದ ಕೆಲಸ. ಅದೂ ಬಿ.ಜೆ.ಪಿ ಸರ್ಕಾವಿರುವ ಕರ್ನಾಟಕದಲ್ಲಿ.

 

    ಆದರೆ ಆ ಹುಡುಗಿ..? ಮರಳಿ ಬರುತ್ತಾಳಾ..? ಇರುವ ಒಬ್ಬಳೇ ಮಗಳು, ಹದಿನೆಂಟು ವರ್ಷ ಸಾಕಿ ಸಲುಹಿದ ಮಗಳು, ಬಂಗಾರ ಬಾಳು ಬಾಳಬೇಕಾದವಳು ಹೀಗೆ ಸತ್ತುಹೋದರೆ ತಂದೆ ತಾಯಿಗಳ ಗತಿಯೇನು..? ಆ ವೇದನೆ, ನೋವು, ಕರುಳ ಮಿಡಿತ ಇವುಗಳಿಗೆ ಸಮಾಧಾನ ಹೇಳಲಾಗುವುದುಂಟೇ..?

 

    ೨೦೦೧ರಲ್ಲಿ ಶುರುವಾದ ಜಿ.ಎಂ.ಐ.ಟಿ ಉತ್ತಮವಾದ ಬೆಳವಣಿಗೆಯನ್ನೇ ತೋರಿತು. ನಾಲ್ಕು ವರ್ಷ ಪೂರೈಸಿದ ಮೂರನೇ ಬ್ಯಾಚ್ ವಿದ್ಯಾರ್ಥಿಗಳು ಹೊರ ಬರುವ ಹೊತ್ತಿಗೆ ಒಂದು ಮಟ್ಟಿಗೆ established ಆಗಿತ್ತು. ಈಗ ಹೊರಬಂದ ಜುಲೈ ೨೦೦೮ ಬ್ಯಾಚ್‍ನ ವಿದ್ಯಾರ್ಥಿಗಳಿಗೆ ಉತ್ತಮವಾದ ಕ್ಯಾಂಪಸ್ ಸೆಲೆಕ್ಷನ್ ಅವಕಾಶಗಳು ಸಿಕ್ಕವು. ದಿವಂಗತ ಜಿ.ಮಲ್ಲಿಕಾರ್ಜುನಪ್ಪನವರ ದೂರದೃಷ್ಟಿಯಿಂದಾಗಿ ದಾವಣಗೆರೆಯಲ್ಲಿ ಜಿ.ಎಂ.ಐ.ಟಿ ಶುರುವಾಯಿತು. ಅವರ ಎಲ್ಲ ಮಕ್ಕಳಿಗೆ ಬೆಂಗಳೂರಿನಲ್ಲಿ ಕಾಲೇಜು ಕಟ್ಟಬೇಕೆಂಬ ಹಂಬಲವಿತ್ತು. ಜಿ.ಎಂ.ಐ.ಟಿ ಉತ್ತಮ infrastructure ಹೊಂದಿದೆ. ವಿಧಾನ ಸೌಧದಂಥಾ ಕಟ್ಟಡವಿದೆ. ಐ.ಟಿ ಕಂಪನಿಗಿರುವ ಕನ್ನಡಿಗಳ ಖದರ್ರಿದೆ.

 

    ಆದರೆ ಇವೆಲ್ಲವುಗಳಿಗೆ ಪೂರಕವಾಗಿ ಉತ್ತಮ ಗುಣಮಟ್ಟದ ಶಿಕ್ಷಣ ಮೊದಲ ಆದ್ಯತೆಗಳಲ್ಲಿ ಒಂದಾಗಬೇಕು. ಆದರೆ, ಜಿ.ಎಂ.ಐ.ಟಿ ಮೇಲಿರುವ ಪ್ರಮುಖ ಆರೋಪವೆಂದರೆ, ಇಲ್ಲಿ ಮೆಟ್ಟಿಲಿನ, ನೆಲದ ಗ್ರಾನೈಟ್ ಕಲ್ಲು ಒಡೆದು ಹೋದರೆ, ನಾಳೆಯೇ ಸರಿ ಮಾಡಿಸುತ್ತಾರೆ, ಆದರೆ ಒಬ್ಬ ಒಳ್ಳೆ ಲೆಕ್ಚರರ್ ಬಿಟ್ಟು ಹೋದರೆ ಆ ಸ್ಥಳಕ್ಕೆ ಸಮರ್ಥರನ್ನ ಕರೆತರುವ ಕೆಲಸ ಆಗುವುದೇ ಇಲ್ಲ. ಜಿ.ಎಂ.ಐ.ಟಿ ಗೆ ಇನ್ನೂ ಹೆಚ್ಚಾಗಿ ಬೆಳೆಯುವ ಅವಕಾಶಗಳಿದ್ದವು. ಜಿ.ಎಂ.ಐ.ಟಿ.ಯ ಜೊತೆಗೇ  ಶುರುವಾದ ಓರಗೆಯ ಕಾಲೇಜುಗಳಲ್ಲೇ ಇದು superb ಎನ್ನುವಂತೆ performance ತೋರಿತ್ತು. ಇನ್ನೇನು ಬಿ.ಐ.ಇ.ಟಿ.ಯನ್ನೇ ಹಿಂದಿಕ್ಕುತ್ತದೆ ಅನ್ನುವಷ್ಟರ ಮಟ್ಟಿಗೆ ಬೆಳೆದುಬಿಟ್ಟಿತು. ಆದರೆ, ಆದ್ರೆ, ಅದಕ್ಕೆ ಬೇಕಾದ Dedicationನ್ನ ಮ್ಯಾನೇಜ್‍ಮೆಂಟ್ ತೋರಲಿಲ್ಲ. ಉತ್ತಮ ಅನುಭವಿ ಲೆಕ್ಚರರ್‌ಗಳನ್ನ ಕರೆತರಬಹುದಾಗಿತ್ತು. ಆದ್ರೆ. ಇಲ್ಲಿ money matter ಜೊತೆಗೆ ಪಿ.ಹೆಚ್.ಡಿ. ಮಾಡಿದವರಿಗೆ, ಮಾಡುವವರಿಗೆ ರಿಸರ್ಚ್‍ಗಾಗಿ ಇರುವ, ಒದಗಿಸಲಾಗುವ, ಅವರ ಬೆಳವಣಿಗೆಗಾಗಿ ಇರುವ ಅವಕಾಶಗಳೂ ಪರಿಗಣಿಸಲ್ಪಡುತ್ತವೆ. ಕಾಲೇಜಿನ ಸಿಂಗಾರಕ್ಕೆ ಖರ್ಚು ಮಾಡುವುದರಲ್ಲಿ ಒಂದಿಷ್ಟನ್ನ ಅನುಭವೀ ಲೆಕ್ಚರರ್‌ಗಳನ್ನ ಕರೆತರಲು ಉಪಯೋಗಿಸಿದ್ದರೆ, ಕಾಲೇಜಿನ ಉನ್ನತಿ, ಅಭಿವೃದ್ಧಿ, Status ಎಲ್ಲವೂ ಏರುಗತಿಯಲ್ಲೇ ಸಾಗುತ್ತಿದ್ದವು. ಐ.ಐ.ಟಿ ಮಂದಿ ಸಿಗದಿದ್ದರೂ ಸೂರತ್ಕಲ್‍ನಂಥ ಕಾಲೇಜಿನ ನಿವೃತ್ತ ವ್ಯಕ್ತಿಗಳನ್ನ ಕರೆತರಬಹುದಾಗಿತ್ತು. ಪ್ರತಿಯೊಂದು ಬ್ರಾಂಚಿನಲ್ಲಿ ಎಂ.ಟೆಕ್, ಪಿ.ಹೆಚ್.ಡಿ ಮಾಡಿದ ಮಂದಿ ಎಷ್ಟಿದ್ದಾರೆ ಅಂತಾ ಗಮನಿಸಿದರೆ, ಹುಡುಗರಿಗೆ ಆದರ್ಶಪ್ರಾಯವಾದ, ಸ್ಫೂರ್ತಿದಾಯರಾದ ಲೆಕ್ಚರರ್‌ಗಳು ಎಷ್ಟು ಮಂದಿ ಇದ್ದಾರೆ ಅಂತಾ ಕಣ್ಣು ಹಾಯಿಸಿದರೆ ನಿರಾಶೆ ಕವಿಯುತ್ತದೆ. ನಿರೀಕ್ಷಿಸಿದ ಮಟ್ಟಕ್ಕೆ ಕಾಲೇಜು ಏರಲೇ ಇಲ್ಲ. ಹೌದು, ನಿಜಕ್ಕೂ ಜಿ.ಎಂ.ಐ.ಟಿಯ ಅಡಿಟೋರಿಯಂ ಹಾಲ್ ನಿಜಕ್ಕೂ ಸುತ್ತಮುತ್ತಲಿನ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲೂ ಇಲ್ಲ. ಯಾವ ಒಂದು ಕಾರ್ಪೊರೇಟ್ ಕಲ್ಚರ್‌‍ಗೂ ಸರಿಸಮವೆಂಬಂತೆ ಕಾಲೇಜಿನ infrastructure ಇದೆ ಎಂಬುದನ್ನ ನಿರ್ವಿವಾದಿತವಾಗಿ ಒಪ್ಪಬಹುದು.

 

    ಆದ್ರೆ, ಇವೆಲ್ಲವುಗಳಿಗೆ ಕಳಶವಿಟ್ಟಂತೆ ಶಿಕ್ಷಣದ ಗುಣಮಟ್ಟವೂ ಇರಬೇಕು ಎಂದು ಬಯಸುವುದರಲ್ಲಿ ತಪ್ಪೇನಿದೆ..?

 

    ಒಂದೇ ಬಿಲ್ಡಿಂಗ್‌ನಲ್ಲೇ ಬೇರೆ ಬೇರೆ ಅಂತಸ್ತುಗಳಲ್ಲಿ ಬೇರೆ ಬೇರೆ ಬ್ರಾಂಚುಗಳು ನೆಲೆಸಿರುವುದೂ ಕೂಡಾ Inter branch interferenceಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಎಲ್ಲ ಕಾಲೇಜುಗಳಲ್ಲಿ ಪ್ರತಿಯೊಂದು ಬ್ರಾಂಚ್‍ಗೆ ಬೇರೆಯಾದ ಕಟ್ಟಡವೇ ಇರುತ್ತದೆ. ಇದರಿಂದ ಪ್ರತಿಯೊಂದು ಬ್ರಾಂಚ್ ಕೂಡಾ ತನ್ನದೇ ಆದ ರೀತಿಯಲ್ಲಿ ಬೆಳೆಯುತ್ತ ಹೋಗಲಿಕ್ಕೆ ಅವಕಾಶಗಳಿರುತ್ತವೆ. ಆದರೆ ಒಂದೇ ಕಟ್ಟಡವಿದ್ದಾಗ, ಪ್ರಿನ್ಸಿಪಾಲರು ಎಲ್ಲ ಬ್ರಾಂಚುಗಳ ಮೇಲ್ವಿಚಾರಣೆ ನೆಡೆಸುವುದಕ್ಕಿಂತ ಎಲ್ಲ ಬ್ರಾಂಚುಗಳಲ್ಲಿ ಹಿಡಿತ ಸಾಧಿಸುವತ್ತ ಸಾಗುವುದರಿಂದ ಬ್ರಾಂಚುಗಳು autonomous ಆಗಿ ಕೆಲಸ ಮಾಡಲಿಕ್ಕೆ ಅಡ್ಡಿಯಾಗುತ್ತದೆ. ಪ್ರತಿಸಲವೂ ಪ್ರಿನ್ಸಿಪಾಲರು ಬ್ರಾಂಚ್ ಹೆಚ್.ಓ.ಡಿ.ಗಳನ್ನ ಸಣ್ಣ ಸಣ್ಣ ವಿಷಯಗಳಿಗೆ ಪ್ರಶ್ನಿಸುವುದರಿಂದ, ಅವರು ಲೆಕ್ಚರರ್‌ಗಳ ಮೇಲೆ ರೇಗುತ್ತಾರೆ, ಲೆಕ್ಚರರ್‌ಗಳು ಹುಡುಗರ ಮೇಲೆ ರೇಗುತ್ತಾರೆ. ಇದು ಎಲ್ಲ ಕಡೆ ನೆಡೆಯುವ ಸಂಗತಿಯಾದರೂ, ವಿದ್ಯಾರ್ಥಿಗಳಲ್ಲಿ ಆಡಳಿತ ವಿರೋಧಿ ಅಲೆ ಉಂಟಾಗುವಂತೆ ಮಾಡಬಾರದು.

 

    ಅನಾಹುತಕ್ಕೆ ಸಂಬಂಧಿಸಿದಂತೆ ಇದನ್ನೆಲ್ಲಾ ಏಕೆ ಹೇಳಬೇಕಾಯಿತೆಂದರೆ, ಒಂದು ಬೇಜವಾಬ್ದಾರಿತನಕ್ಕೆ, ಲೋಪದೋಷಕ್ಕೆ ತನ್ನದೇ ಆದ internal matters ಕಾರಣವಾಗಿರುತ್ತವೆ ಅಂತಾ ತಿಳಿಸಲಿಕ್ಕೆ.

 

    ಡ್ರೈವರ್ ಮಾಡಿದ ಅನಾಹುತಕ್ಕೆ ಕಾಲೇಜಿನ ಮ್ಯಾನೇಜ್‍ಮೆಂಟ್ ನೇರ ಹೊಣೆಯಾಗಿರಲಾರದು. ಆದರೆ, ಪರೋಕ್ಷವಾಗಿ..? ಕೆಲ ತಿಂಗಳ ಹಿಂದೆ ಕಾಲೇಜು ಬಸ್ಸು ಬಿ.ಡಿ.ಟಿ ಕಾಲೇಜಿನ ಕಾಂಪೋಂಡಿಗೆ ಗುದ್ದಿ ಕಾಂಪೋಂಡು ಬಿದ್ದುಹೋಗಿತ್ತು. ಆ ಅನಾಹುತಕ್ಕೆ ಮಳೆಯ, ಕೆಸರಿನ ಕಾರಣ ಕೊಡಬಹುದಾದರೂ ಜೀವಹಾನಿ ಸಂಭವಿಸಿರಲಿಲ್ಲ. ಆಗಲೇ ಮುನ್ನೆಚ್ಚರಿಕೆ ವಹಿಸಿ ಡ್ರೈವರುಗಳನ್ನ ಹದ್ದುಬಸ್ತಿನಲ್ಲಿಡುವಂತೆ ಆದೇಶಿಸಬಹುದಾಗಿತ್ತು. ಆರೇಳು ಬಸ್ಸುಗಳಲ್ಲಿ ಐನೂರಕ್ಕೂ ಹೆಚ್ಚು ಹುಡುಗ-ಹುಡುಗಿಯರು ಓಡಾಡುವಾಗ ಎಚ್ಚರಿಕೆ ವಹಿಸುವುದು ಕರ್ತವ್ಯ. ಹುಡುಗರ ಬಸ್ಸು, ಹುಡುಗಿಯರ ಬಸ್ಸುಗಳು ಒಮ್ಮೆಗೇ ಹೊರಟಾಗ, ರೇಸಿಗೆ ಬಿಟ್ಟಂತೆ ಕೆಲ ಡ್ರೈವರ್‌ಗಳು ಡ್ರೈವ್ ಮಾಡುವುದೂ ಇತ್ತು. ಇವೆಲ್ಲವುಗಳ ಬಗ್ಗೆ ಆಡಳಿತ ಮಂಡಳಿ ಗಮನ ಹರಿಸಬೇಕಿತ್ತು. ಇಲ್ಲಿ ನಾನು ಆಡಳಿತ ಮಂಡಳಿಯ ಬಗ್ಗೆಯೇ ಆರೋಪಿಸುವುದಿಲ್ಲ. ಚಾಲಕರ ಅಜಾಗರೂಕತೆಯೂ ಇದೆ. ಆದ್ರೆ, ಮೇಲ್ವಿಚಾರಣೆಯಲ್ಲಿರುವವರು ಟೈಮ್ ಲಿಮಿಟ್‍ಗಳನ್ನ ಹಾಕಿ ಒತ್ತಡದಲ್ಲಿ ಚಾಲಕರಿಗೆ ಗಾಡಿ ಓಡಿಸುವಂತೆ ಮಾಡುವುದರಿಂದಲೂ ಅನಾಹುತಗಳು ಸಂಭವಿಸಬಹುದು.

 

    ಎ.ಐ.ಸಿ.ಟಿ.ಯು. ಕಾನೂನಿನ ಪ್ರಕಾರ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪಿ.ಯು.ಸಿ ಕಾಲೇಜುಗಳನ್ನ ನೆಡೆಸಬಾರದೆಂಬ ಕಾನೂನಿದೆ. ಮೊನ್ನೆ ಮೊನ್ನೆ ಎ.ಐ.ಸಿ.ಟಿ.ಯು. ಸಮಿತಿಯವರು ಬಂದಾಗ ಅದನ್ನ “ಸರಿಮಾಡಿಕೊಂಡರು” ಎಂಬ ಆರೋಪವಿದೆ. ಇರುವ ಎಂಜಿನಿಯರಿಂಗ್ ಕಾಲೇಜನ್ನೇ ಉತ್ತಮಿಕೆಯ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಬದಲು ಒಂದೇ ಕ್ಯಾಂಪಸ್‌ನಲ್ಲಿ, ಒಂದೇ ಬಿಲ್ಡಿಂಗ್‍ನಲ್ಲಿ ಪಿ.ಯು.ಸಿ, ಎಂ.ಬಿ.ಎ. ಕಾಲೇಜುಗಳನ್ನ ತೆರೆಯುವುದರಿಂದ Education standard ಯಾವ ಕ್ಷೇತ್ರದಲ್ಲೂ ಎತ್ತರಿಸಲಿಕ್ಕೆ ಸಾಧ್ಯವಿಲ್ಲ ಎಂಬುದನ್ನ ಆಡಳಿತ ಮಂಡಳಿಯ ಜಿ.ಎಂ.ಲಿಂಗರಾಜ್‍ರವರು, ಸಂಸದ ಜಿ.ಎಂ.ಸಿದ್ಧೇಶ್‍ರವರು ತಿಳಿಯಬೇಕು.

 

    ವಿದ್ಯೆ ಕಮರ್ಷಿಯಲೈಸ್ ಆಗಿದೆ. ಅದನ್ನ ಒಪ್ಪಬೇಕು. ವಿದ್ಯೆ ಪಡೆಯಲಿಕ್ಕೆ, ವಿದ್ಯೆ ನೀಡುವ ಆರ್ಗನೈಸೇಷನ್ Insfrastructure setup ಮಾಡಲಿಕ್ಕೆ ಅಪಾರ ಪ್ರಮಾಣದ ದುಡ್ಡು ಬೇಕು. ಆದ್ರೆ, ಅದೇ ವ್ಯಾಪಾರವಾಗಬಾರದು. ವ್ಯಾಪಾರವೇ ಮಾಡಬೇಕೆಂದಿದ್ದರೆ, ಅಡಿಕೆ, ಮೈನಿಂಗ್‍ನಲ್ಲೇ ವ್ಯಾಪಾರ ಮಾಡಬಹುದಾಗಿತ್ತು. ಇದೇ ರೀತಿ ಮಾಡಿದ್ದರೆ, ಟಾಟಾರಂಥವರು, ಐ.ಐ.ಎಸ್.ಸಿ.ಯಂಥಾ ವಿದ್ಯಾಲಯವನ್ನ ಕಟ್ಟಲಾಗುತ್ತಿತ್ತಾ..? ಎರಡು ಮೂರು ದೋಣಿಗಳಲ್ಲಿ ಕಾಲಿಟ್ಟು ಕೆಳಗೆ ಬೀಳುವ ಬದಲು ಒಂದೇ ದೋಣಿಯಲ್ಲಿ ಸಾಗಿ ದಡಸೇರುವುದುತ್ತಮ.

 

    ಏನೇ ಆಗಲಿ, ಈ ದುರ್ಘಟನೆ ಜಿ.ಎಂ.ಐ.ಟಿ.ಗೆ ಕಪ್ಪುಚುಕ್ಕೆಯಂತೆ ಎಂಬುದಂತೂ ದಿಟ.

 

    ಈಗ ಆದದ್ದಾಯಿತು. ಮುಂದಾದರೂ ಎಚ್ಚೆತ್ತುಕೊಳ್ಳಲಿ. ಶಿಕ್ಷಣ ಕ್ಷೇತ್ರದಲ್ಲಿ ದಾಪುಗಾಲು ಹಾಕಬೇಕೆಂಬ ಸಾತ್ವಿಕ ವ್ಯಕ್ತಿ ಜಿ.ಮಲ್ಲಿಕಾರ್ಜುನಪ್ಪನವರ ಕನಸನ್ನ ಅವರ ಮಕ್ಕಳು ನನಸು ಮಾಡುವರೆಂದು ನಂಬಬಹುದೇ..?

 

 

 

 

→ 1 CommentCategories: ದಾವಣಗೆರೆ · ಮನದ ಮಾತು
Tagged: , , , , , ,

Ondu kavana.

September 19, 2008 · 1 Comment

ಭಾವಾಂತರಾಳದ ಭಾವನೆಗಳ

ಮುಗುಳ್ನಗೆಯಲಿ ಚಿಮ್ಮಿಸಿದವಳೇ,

ಪ್ರೇಮಾನುಭವದ ವಿಸ್ಮಯಗಳ

ನನಗಾಗಿ ತಂದವಳೇ,

ಭಾವಗಡಲ ಭಾವಲಹರಿಗಳ

ಮನದ ತಡಿಗೆ ಅಪ್ಪಳಿಸಿದವಳೇ,

ಅರ್ಪಣೆ ನಿನಗರ್ಪಣೆ

ಈ ಭಾವ ಕುಸುಮ

–ಕೆ.ಗಣೇಶ್

→ 1 CommentCategories: Uncategorized
Tagged: ,

ಯಾವ ಮೋಹನ ಮುರಳಿ ಕರೆಯಿತೋ …

September 19, 2008 · 3 Comments

೨೭ ಮೇ ೨೦೦೫, ಭಾನು.

ಯಾವ ಮೋಹನ ಮುರಳಿ ಕರೆಯಿತೋ …

ಬದುಕಿನ ಭಾವದಲಿ ಬಣ್ಣದ ಛಾಯೆ.

ಸತ್ತ ಭಾವನೆಗಳಿಗೆ ಮರು ಹುಟ್ಟು.

ಹೀಗೇಕೆ..?

ಕೇವಲ ಮುಖದ ಮೇಲೆ

ಪ್ರಶ್ನಾರ್ಥಕ ಚಿಹ್ನೆ, ನಿರರ್ಥಕ ಚಿಹ್ನೆ.

 

ಬದುಕು ಕಲಿಸುವ ಪಾಠಗಳ ಕಲಿಯದೇ ಹೋದೆನಾ..?

ಎಲ್ಲರಿಗಿಂತಲೂ ಹಿಂದುಳಿದೆನಾ..?

ಹೀಗೇಕೆ ನಾ ಹೀಗೇಕೆ..?

 

ಆಶಾವಾದವೇಕೆ ನಿರಾಶಾವಾದವಾಯಿತು..?

ಬದುಕಿನಲ್ಲಿ ಕಪ್ಪು-ಬಿಳುಪುಗಳೇ ಬಣ್ಣಗಳಾದವಾ..?

ಬಣ್ಣಗಳೇ ಬಣ್ಣ ಕಳೆದುಕೊಂಡವಾ…?

ಇಲ್ಲಾ.., ಬದುಕಿನಲ್ಲಿ ನಾ ಬಣ್ಣ ಕಳೆದುಕೊಂಡೆನಾ..?

 

ಹೃದಯ ಸಮುದ್ರ ಕಲಕಿದ ತಾರುಣ್ಯವೆಲ್ಲಿ ಏನಾಯಿತು..?

ಉತ್ಸಾಹದ ಸುನಾಮಿ ಅಲೆ ಶಾಂತವಾಗಿದೆಯೇಕೆ..?

ಗರಿಗೆದರಿ ಚಿಮ್ಮಬೇಕಿದ್ದ ಸಮುದ್ರದ ಅಲೆಗಳಾದರೂ ಎಲ್ಲಿ..?

ಸಮುದ್ರವೇಕೆ ಸರೋವರವಾಯಿತು? ಮಾನಸ ಸರೋವರವಾಯಿತು..?

ಗುರಿಗಳೆಲ್ಲ ಗರಿ ಬಿಚ್ಚಿ ಹಾರುವ ಕಾಲಕ್ಕೆ ಕಾಲು ಕಳೆದುಕೊಂಡ ಹಕ್ಕಿಯಾದೆನಾ..?

 

ಜಗತ್ತಿಗೆ ನನ್ನ ಕಾಣ್ಕೆ ಬೇಕು.

ಜಗತ್ತಿಗೆ ನಾ ಬೇಕಾದವ.

ಜಗತ್ತಿಗೆ ನಾ ಬೆಳೆಯಬೇಕೆಂಬ ಹಂಬಲವಿದೆ.

ನನ್ನನ್ನು ಮುಗಿಲೆತ್ತರಕ್ಕೇರಿಸುವ ಬಲವಿದೆ, ಒಲವಿದೆ.

ಜಗತ್ತಿನಿಂದ ನನಗೆ ಬುಲಾವಿದೆ.

 

ಅಡಗಿ ಹೋದ, ಉಡುಗಿ ಹೋದ ಉತ್ಸಾಹವ ಹುಡುಕಿ ತರುವೆ.

ಮತ್ತೊಂದು ಹೊಸ ಸೆಲೆಯಲ್ಲಿ, ಹೊಸ ಹುರುಪಿನೊಂದಿಗೆ ಬರುವೆ.

ಅರ್ಥ ಕಳೆದುಕೊಂಡ ಬಾಳಿಗೆ ‘ಅರ್ಥ’ವೂ ಬೇಕು.

ಬೇಕು-ಬೇಕುಗಳ ಮಧ್ಯೆ ಬೇಡವೇಕೆ ಸೇರಿಕೊಂಡಿತು..?

ಬೇಡ-ಬೇಡಗಳೆಲ್ಲ ಬಾಡುವವರೆಗೆ ಹೋರಾಡುವೆ.

ಬದುಕಿನ ಸರ್ವ ಸ್ವತಂತ್ರ ಭಾವನೆಗಳಿಗೆ ದನಿಯಾಗುವೆ.

ಕಿತ್ತುಹೋದ ಕತ್ತನ್ನು ಕೊರಳಿಗೆ ಸೇರಿಸುವೆ, ಜೀವ ತುಂಬುವೆ.

 

ನಿರಾಶಾವಾದವೇಕೆ ಮನೆಮಾಡಿದೆ ಮನದ ಮನೆಯಲ್ಲಿ..?

ಸಶಕ್ತನಾಗುವೆ ಹೊಡೆದೋಡಿಸಲು, ಬಡಿದೋಡಿಸಲು.

ಬಡಿಗೋಲಾಗುವೆ ನಾ ಬದುಕು ಡೋಲಾಯಮಾನವಾಗುವ ಮುನ್ನ.

ನಿನ್ನೆಗಳ ನಿನ್ನೆಗಳಿಗೆ ಸೇರಿಸಿ, ಇಂದು-ನಾಳೆಗಳ ನನ್ನವುಗಳನ್ನಾಗಿಸಿಕೊಳ್ಳುತ್ತೇನೆ.

 

ಯಾವ ಮೋಹನ ಮುರಳಿ ಕರೆಯಿತೋ ಮರಳಿದೆ

ಆಶಾವಾದದೊಂದಿಗೆ…!

ಮೋಹನ ಸುಧೆ ಹರಿಸಲಿಕ್ಕೆ..!

→ 3 CommentsCategories: ಕವನ
Tagged: ,

‘ಮೊಗ್ಗಿನ ಮನಸು’ – ಫಸ್ಟ್ ಹಾಫ್ ತಗಡು; ಸೆಕೆಂಡ್ ಹಾಫ್‍ನಲ್ಲಿ “ಸ್ವಲ್ಪ” ಸೊಗಡು. – ಚಿತ್ರದ ಒನ್ ಲೈನ್ ವಿಮರ್ಶೆ..!

August 10, 2008 · 2 Comments

-  ಗಣೇಶ್.ಕೆ , 2ganesh@gmail.com

moggina manasu

moggina manasu

  ಫಸ್ಟ್ ಹಾಫ್ ತಗಡು; ಸೆಕೆಂಡ್ ಹಾಫ್‍ನಲ್ಲಿ “ಸ್ವಲ್ಪ” ಸೊಗಡು. – ‘ಮೊಗ್ಗಿನ ಮನಸು’ ಚಿತ್ರದ ಒನ್ ಲೈನ್ ವಿಮರ್ಶೆ..! 
 
   

    ಇದು ‘ಮೊಗ್ಗಿನ ಮನಸು’ ಚಿತ್ರದ ಒನ್ ಲೈನ್ ವಿಮರ್ಶೆ..! ಸೆನ್ಸಾರ್ ಮಂಡಳಿಯವರು ‘ಎ’ ಸರ್ಟಿಫಿಕೇಟು ಕೊಟ್ಟಿದ್ದ್ರು, ಅಪ್ರಬುದ್ಧರ ಪ್ರೇಮ ಅಪ್ರಾಪ್ತ ವಯಸ್ಕರ ಮೇಲೆ ಹಾನಿಕಾರಕ ಪರಿಣಾಮ ಬೀರಬಹುದೆಂದು. ದೆಹಲಿ ಟ್ರಿಬ್ಯೂನಲ್ ನಲ್ಲಿ ಅನುಮತಿ ಪಡೆದುಕೊಂಡು ‘ಯು/ಎ’  ಸರ್ಟಿಫಿಕೇಟಿನೊಂದಿಗೆ ಪ್ರದರ್ಶಿತವಾಗುತ್ತಿದೆ. ‘ಎ’ ಅಂತಾ ಕೊಟ್ಟಿದ್ದರಿಂದ ಪಡ್ಡೆ ಹುಡುಗರಲ್ಲಿ ಅತಿ ಕುತೂಹಲವಿತ್ತು..! ಸೆನ್ಸಾರ್ ಮಂಡಳಿಯವರು ಮೊದಲಾರ್ಧ ಕತ್ತರಿಸಿ ಒಗೆದಿದ್ದರೂ ಏನೂ ಪರಿಣಾಮ ಬೀರುತ್ತಿರಲಿಲ್ಲ. ಹಾಗಾದ್ರೂ ಪ್ರೇಕ್ಷಕರ ಅಮೂಲ್ಯ ಸಮಯ ಉಳಿಸಬಹುದಿತ್ತು. ಎಚ್ಚರಿಕೆ ಈ ಚಿತ್ರ ವೀಕ್ಷಿಸುವುದರಿಂದ ಹುಡುಗರ ಹೃದಯಕ್ಕೆ ಆಘಾತವಗಬಹುದು ಅಂತಾ ಪಂಚ್ ಲೈನ್ ಸರಿಯೆನಿಸುತ್ತೆ. ಯಾಕಂದ್ರೆ, ಮೊದಲರ್ಧ ಹುಡುಗರಿಗಲ್ಲ. ದ್ವಿತೀಯಾರ್ಧ ಗೋಳೋ ಎನ್ನುವ ಹುಡುಗಿಯರಿಗೆ. ಹಾಗಾಗಿ ದುಡ್ಡು ಇಸಗೊಂಡು ತಮ್ಮದಲ್ಲದ ಸಿನಿಮಾ ತೋರಿಸಿದರೆ ಹುಡುಗರಿಗೆ ಆಘಾತವಾಗದೇ ಇರುತ್ತಾ..??!! 

 
    ನಾಲ್ವರು ಹುಡುಗಿಯರಿಗೆ ಬಾಯ್ ಫ್ರೆಂಡ್‍ಗಳನ್ನ ಹುಡುಕಿಕೊಳ್ಳುವ ಬಯಕೆಯಾಗುತ್ತದೆ,

Moggina Manasu actresses

Moggina Manasu actresses

ಅನಿವಾರ್ಯವಾಗುತ್ತದೆ. ನಂತರ ದ್ವಿತೀಯಾರ್ಧದಲ್ಲಿ ಒಬ್ಬಾಕೆ ಆತ್ಮಹತ್ಯೆಮಾಡಿಕೊಳ್ಳುತ್ತಾಳೆ, ಉಳಿದವರಿಗೂ ಕಹಿ ಅನುಭವಗಳಾಗುತ್ತವೆ, ಒಬ್ಬಾಕೆ ಎಲ್ಲದರಿಂದ ತಟಸ್ಥಳಾಗಿಬಿಡುತ್ತಾಳೆ. ಆದರೆ, ನಿರ್ದೇಶಕ ಶಶಾಂಕ್ ಬಾಯ್ ಫ್ರೆಂಡ್‍ಮಾಡಿಕೊಳ್ಳುವ ಅವಶ್ಯಕತೆಯನ್ನ ತೋರಿಸಬೇಕಿತ್ತು. ಹಾಗಾಗಿ ಕಥೆ ಕಥೆಯೆನಿಸದೆ ಜಾಳು ಜಾಳಾಗಿ ಕಾಣುತ್ತದೆ. ಕೊನೆಯಲ್ಲಿ ಕಥೆ ಫ್ಲಾಷ್ ಬ್ಯಾಕ್‍ಗೆ ಹೋಗುವ ಸಂದರ್ಭ ಚೆನ್ನಾಗಿದೆ. ಆದರೆ, ಒಟ್ಟಾರೆಯಾಗಿ ಹೇಳುವುದಾದರೆ, ಸಿನಿಮಾ ಪರಿಣಾಮಕಾರಿಯಾಗಿ ಬರಬಹುದಿತ್ತು.

 

Radhika Pandit ರಾಧಿಕಾ ಪಂಡಿತ್

Radhika Pandit ರಾಧಿಕಾ ಪಂಡಿತ್

 ಇನ್ನು ನಟನೆ ವಿಷಯಕ್ಕೆ ಬಂದರೆ ರಾಧಿಕಾ ಪಂಡಿತ್ ಉತ್ತಮ. ಶುಭಾ ಪೂಂಜಾಗೆ ಅದರ ಗಂಧ ಗಾಳಿ ಗೊತ್ತಿಲ್ಲ. ಇನ್ನುಳಿದವರು ಅಷ್ಟಕಷ್ಟೇ. ರಾಧಿಕಾ ಪಂಡಿತ್ ಮತ್ತು ಶುಭಾ ಪೂಂಜಾ ಸಿನಿಮಾ ಪೋಸ್ಟರ್‍ಗಳಲ್ಲಿ ಕಾಣಿಸಿಕೊಂಡರೂ ಶುಭಾ ಪೂಂಜಾ ಪರಿಣಾಮಕಾರಿಯಲ್ಲ. ಉಳಿದ ನಾಲ್ಕು ಜನ ಬಾಯ್ ಫ್ರೆಂಡ್‍ಗಳ ಪೈಕಿ ಮೂವರ ಅಭಿನಯ ಅಷ್ಟಕಷ್ಟೇ. ಅದರೆ, ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಯ ‘ಯಶ್’ ಚೆನ್ನಾಗಿ ಅಭಿನಯಿಸಿದ್ದಾನೆ. ರಾಧಿಕಾ ಪಂಡಿತ್ ಮತ್ತು ಯಶ್ ಇಬ್ಬರೇ ಸಿನಿಮಾದ ಹೈಲೈಟ್ ಆಗಿ ಚಿತ್ರಿಸಲಾಗಿದೆ. ಉಳಿದ ಪಾತ್ರ ಕಾಲಾವಕಾಶದ ಕೊರತೆಯಿಂದಲೋ, ಸಮರ್ಥ ನಿರ್ದೇಶನದ ಕೊರತೆಯಿಂದಲೋ ಪರಿಣಾಮಕಾರಿಯಾಗಿ ಮೂಡಿಬಂದಿಲ್ಲ.

 

 ಮನೋ ಮೂರ್ತಿ ಸಂಗೀತ ಸೂಪರ್. ಕೆಮ್ಮಂಗೇ ಇಲ್ಲ. ಮುಂಗಾರು ಮಳೆ ಕೃಷ್ಣಪ್ಪನವರು ಇನ್ನೊಂದು ಮುಂಗಾರು ಮಳೆಯ ಕನಸು ಒಂದಿಷ್ಟು ನನಸಾಗಿದ್ದರೂ ಅದು ಮನೋಮೂರ್ತಿಯವರಿಂದ. ಕ್ಯಾಮರಾ ವರ್ಕ್ ಚೆನ್ನಾಗಿದೆ. ಲೊಕೋಷನ್ ಸೆಲೆಕ್ಷನ್ ಚೆನ್ನಾಗಿದೆ. ಇನ್ನಷ್ಟು ಅನಗತ್ಯ ದೃಷ್ಯಗಳಿಗೆ ಕತ್ತರಿ ಹಾಕಿ, ಪರಿಣಾಮಕಾರಿ ಅಭಿನಯ ತೆಗೆಸಿದ್ದರೆ, ಹಾಡುಗಳನ್ನ ಅನಗತ್ಯವಾಗಿ ಸೇರಿಸದಿದ್ದರೆ ಚಿತ್ರ ಚೆನ್ನಾಗಿ ಬರಬಹುದಿತ್ತು.

     Anyway good luck Shashank.

→ 2 CommentsCategories: ಮಾಹಿತಿ
Tagged: , , , , , , ,