ಇವತ್ತು 11 ಗಂಟೆಗೆ ಆಪರೇಶನ್ ಆಗಬೇಕಿತ್ತು. ಡಾಕ್ಟರು ಬೇರೆ ಕೇಸ್ ಅಟೆಂಡ್ ಮಾಡಲಿಕ್ಕೆ ಹೋಗಿದ್ದರಿಂದ 2 .30 ಕ್ಕೆ ಮುಂದೆ ಹೋಗಿದೆ. ಹಾಗಾಗಿ ಇಂಟರ್ನೆಟ್ ಗೆ ಬಂದು ಒಂದು ಪೋಸ್ಟ್ ಹಾಕಿ ಹೋಗೋಣ ಅಂತ ಬಂದೆ. 29 ಡಿ ನಿಂದ ಶುರುವಾದ ಎಕ್ಸಾಮು ಜನವರಿ ೨ಕ್ಕೆ ಮುಗೀತು.
ಆದರೆ, ಕ್ರಿಸ್ ಮಸ್ ದಿನವೇ, ೨೫ ರಂದು ಮದ್ಯಾಹ್ನದಿಂದಲೇ ಹೊಟ್ಟೆ ನೋವು ಕಾಡಿತು. ಸಂಜೆ ಡಾಕ್ಟರ ಬಳಿ ಹೋದೆ. ಅಲ್ಟ್ರಾ ಸೌಂಡ್ ಮಾಡಿದರು. ಅಪೆಂಡಿಕ್ಸ್ ಆಪರೇಶನ್ ಮಾಡಬೇಕು ಅಂದ್ರು. ನಂದು ಎಕ್ಸಾಮು ನಾಲ್ಕು ದಿನ. ಪರೀಕ್ಷೆಯ ಕೊನೆಯ ದಿನಗಳು ವಜ್ರಕ್ಕಿಂತಲೂ ಬೆಲೆಬಾಳುವಂಥವು. ಓದಿದ್ದನ್ನೆಲ್ಲ, ಓದದೆ ಉಳಿದದ್ದನ್ನೆಲ್ಲ ತಿರುವಿ ಹಾಕಲಿಕ್ಕೆ ಇರುವ ಸಮಯವದು. ಲ್ಯಾಪರೋಸ್ಕೋಪಿ ಮಾಡಿದರೆ ಎರಡು ದಿವಸದಲ್ಲೇ ಹೋಗಬಹುದು ಅಂದರು. ನಾನು ಮನೆಯಲ್ಲಿ ಕೇಳಿ ಹೇಳ್ತೀನಿ ಅಂದೆ. ಮಾರನೇ ದಿನ ದಾವಣಗೆರೆಯಿಂದ ಅಪ್ಪ, ಅಮ್ಮ ಬಂದರು. ಡಾಕ್ಟರ ಬಳಿ ಅವರನ್ನೂ ಕರೆದೊಯ್ದೆ. ಅಪ್ಪ ನಿವೃತ್ತ ಫಾರ್ಮಾಸಿಸ್ಟ್. ಹಾಗಾಗಿ ಮೆಡಿಕಲ್ ಫೀಲ್ಡ್ ಗೆ ಹೊಸಬರಲ್ಲ. ಮೇಲಾಗಿ ಅಮ್ಮನಿಗೂ ಒಮ್ಮೆ ಅಪೆಂಡಿಕ್ಸ್ ಆಪರೇಶನ್ ಆಗಿತ್ತು. ಧೈರ್ಯ ಹೇಳಿದಳು. ಆದರೆ, ನನಗೆ ಹೆದರಿಕೆ ಇರಲಿಲ್ಲ. ಇದ್ದದ್ದು ಚಿಂತೆ ಪರೀಕ್ಷೆಯದು. ಡಾಕ್ಟರಿಗೆ ಗುಳಿಗೆ ಬರೆದುಕೊಡಲಿಕ್ಕೆ ಅಪ್ಪ ಹೇಳಿದರು. ಹಾಗೇನಾದರೂ ಮತ್ತೆ ಹೊಟ್ಟೆ ನೋವು ಬಂದರೆ, ಆಪರೇಟ್ ಮಾಡಿಸಿಯೇ ಬಿಡೋಣ. ಸದ್ಯಕ್ಕೆ ಎಕ್ಸಾಮ್ ಮುಗಿಯಲಿ ಅಂದರು.
ಕೆಲವೊಮ್ಮೆ ಈ ಅಪೆಂಡಿಕ್ಸ್(ಸನ್ ಆಫ್ ಅಪೆಂಡಿಸೈಟಿಸ್) ಒಡೆದು ಹೋಗುವ ಸಂದರ್ಭಗಳಿರುತ್ತವೆ. ಅದು ಮಾರಣಾಂತಿಕವಾಗಬಹುದು. ನಾನು ರಿಸ್ಕ್ ತೆಗೆದುಕೊಂಡೆ. ಯಶಸ್ವಿಯೂ ಆಗಿದ್ದೇನೆ. ಎಲ್ಲ ಎಕ್ಸಾಮುಗಳನ್ನ ಸರಿಯಾಗಿ ಮುಗಿಸಿ ದಾವಣಗೆರೆಗೆ ಶನಿವಾರ ಬಂದು ಮುರುಘಾ ಮಠದಲ್ಲಿ ಶರಣ ಸಂಗಮ ಕಾರ್ಯಕ್ರಮ ನೋಡಿ, ಮಾರನೇದಿನ ಅಕ್ಕನ ಮಗನ ತುಂಟಾಟಗಳನ್ನ ನೋಡಿಕೊಂಡು ಬಂದೆ. ಒಂದು ವಾರದಲ್ಲಿ ಸುಧಾರಿಸಿದ್ದೇನೆ. ಆದರೆ, ಆಪರೇಟ್ ಮಾಡಬೇಕು. ಅದು ಮತ್ತೆ ಆವರ್ತನೀಯ ಆಗುವ ಸಂಭವ ಇರುತ್ತದೆ.
೨೫ ೨೬ ೨೭ ಈ ಮೂರು ದಿನಗಳು ಸುಧಾರಿಸಿಕೊಳ್ಳಲಿಕ್ಕೇ ಹೋದವು. ಆದರೂ ನಿಶ್ಯಕ್ತಿ. ರೂಮ್ ಮೇಟ್ ಪವನ್, ಮಂಜು ಪ್ರತಿ ದಿನವೂ ಊಟ ತಂದುಕೊಡುತ್ತಿದ್ದರು. ಇನ್ನೊಬ್ಬ ಗೆಳೆಯ ಶಿವು(ಆತನನ್ನ ಖುಷ್ ಅಂತಲೇ ಕರಿಯೋದು..! ಹೆಸರಿಗೆ ತಕ್ಕಂತೆ ಸದಾ ಖುಶಿಯಾಗಿಗುವ ಜೀವಿ) ಗೆಳತಿ ಮನೆಯಿಂದ ಊಟ ತರಲಿಕ್ಕೆ ಸಹಕರಿಸಿದ. ನನಗೆ ಅವರ ಮನೆಯಲ್ಲಿ ಮೆತ್ತಗಿನ ಆಹಾರ ತಯಾರಿಸಿ ಕೊಡುತ್ತಿದ್ದರು. ಹೊರಗಡೆ ಸಿಗುವ ಹೋಟೆಲ್, ಖಾನಾವಳಿಗಳ ಅರೆಬೆಂದ, ಹೈಜೀನ್ ಇಲ್ಲದ ಆಹಾರ ತಿಂದು ಪಿ.ಜಿ ಗಳ ಆಲ್ ಮೋಸ್ಟ್ ಎಲ್ಲ ಹುಡುಗರ ಹೊಟ್ಟೆ ಕೆಟ್ಟವು. ಇದಕ್ಕೆ ಸರಿಯಾದ ನೀರು ಸಿಗದೇ ಇರೋದೂ ಕೂಡಾ ಕಾರಣವಾಯಿತು. ಎಕ್ಸಾಮ್ ಅಂತಾ ಊಟ ತಿಂಡಿ ಮಾಡದೇ ಕುಳಿತು ಅಸಿಡಿಟಿ ಮಾಡಿಕೊಂಡವರದ್ದೂ ಪಟ್ಟಿ ಇತ್ತು.
ಹೊಟ್ಟೆ ನೋವು ಶುರುವಾಗುವ ಮೊದಲು ಒಂದೆರಡು ದಿನ ಮುಂಚೆ ರ್ಯಾಂಡಿ ಪಾಷ್ ನ “ದಿ ಲಾಸ್ಟ್ ಲೆಕ್ಚರ್” ಕನ್ನಡಾನುವಾದ ಓದಿದ್ದೆ. ಅದೂ ಸಂಜೆ ೭ಕ್ಕೆ ಬುಕ್ ಹಿಡಿದೋನು ರಾತ್ರಿ ೨ರ ವರೆಗೂ ಓದಿದೆ! ಊಟಕ್ಕೆ ಅರ್ಧ ಗಂತೆ ಬಿಟ್ಟಿದ್ದೆ. ಮತ್ತೆ ಬೆಳಗ್ಗೆ ೮ ರಿಂದ ೧೦.೩೦ ವರೆಗೂ ಓದಿ ಮುಗಿಸಿದೆ. ನಾನು ಗಂಟೆಗೆ ೪೦ ಪುಟ ಓದಬಲ್ಲೆ. ಹೆಚ್ಚಿಗೆ ಮಾಡಿಕೊಳ್ಳಲಿಕ್ಕೆ ಪ್ರಯತ್ನಿಸುತ್ತಿದ್ದೇನೆ.
ಇವತ್ತು ನನ್ನ ಗೆಳೆಯರಿಗೆ ನಾನು ಕತ್ತರಿ ಪ್ರಯೋಗಕ್ಕೆ ವಸ್ತುವಾಗುತ್ತಿರುವುದನ್ನ ಹೇಳಿದೆ. ಸಿವಿಲ್ ಎಂ.ಟೆಕ್ ನ ಗೆಳೆಯ ಸಚಿನ್ ನಿಂದೂ ಲಾಸ್ಟ್ ಲೆಕ್ಚರ್, ಲಾಸ್ಟ್ ಪೋಯೆಂ ಏನಾದ್ರೂ ಏರ್ಪಡಿಸೋಣವಾ ಅಂತಾ ತಮಾಷೆ ಮಾಡೆದ. ಬೆಂಗಳೂರಿನ ಸಾಫ್ಟ್ವೇರ್ ಎಂಜಿನಿಯರ್ ಸಚಿನ್ ನರ್ಸ್ ಕೈ ಹಿಡಿಕೊಂಡು ಅಪರೇಶನ್ ಮಾಡಿಸ್ಕೋ, ಬೇಗ ವಾಸಿಯಾಗುತ್ತೆ ಅಂತಾ ಕಣ್ ಮಿಟುಕಿಸಿದ. ಹೀಗೇ ಪ್ರಮೋದ, ನವೀನ್ ಪಾಗಾದ, ಶಶಾಂಕ ಎಲ್ಲರೂ ತಮಾಷೆ ಮಾಡುತ್ತಲೇ ಇದ್ದಾರೆ. :-)
ಸಧ್ಯಕ್ಕೆ ನಾನಂತೂ ಓಮನಸೇ, ಮಯೂರಗಳ ಜೊತೆಗೆ ೮ ಪುಸ್ತಕಗಳನ್ನ ಇಟ್ಟುಕೊಂಡಿದ್ದೇನೆ. ಓದಲಿಕ್ಕಾಗದಿದ್ದರೂ ಜಂಗಮದೂರವಾಣಿಯಲ್ಲಿ ರಾಜಣ್ಣನ ಹಾಡುಗಳಂತೂ ಇದ್ದೇ ಇವೆ.
ಆಪರೇಶನ್ ಒಳಗಾಗುವ ವ್ಯಕ್ತಿ ಹೀಗೆ ಬ್ಲಾಗ್ ಪೋಸ್ಟ್ ಬರಿಯೋದು ವಿಚಿತ್ರವಾ, ನಿಷೇಧಿತವಾ ಗೊತ್ತಿಲ್ಲ. ನನಗಂತೂ ರೋಚಕ :-)