ಪ್ರತಿಸ್ಪಂದನ – Pratispandana

Entries from January 2008

ಜಗತ್ನಲ್ಲಿ ಇರೋದು ಎರಡೇ ಥರ. ಒಂದು ಚೆನ್ನಾಗಿರೋದು. ಇನ್ನೊಂದು ತುಂಬಾ ಚೆನ್ನಾಗಿರೋದು.

January 29, 2008 · 2 Comments

    ಗೆಳೆಯ ಶಶಾಂಕ ಹಿಂಗೆ ಹೇಳ್ತಾ ಇದ್ರೆ, ಇದ್ಯಾವುದೋ ಕಾರ್ಪೊರೇಟ್ ಮಂದಿ ಮಾತಾಡೋ ಪಾಸಿಟಿವ್ ಥಿಂಕಿಂಗ್ ಥಿಯರಿ ಥರಾ ಇದೆ ಅನ್ನಿಸ್ತಾ ಇತ್ತು. ಎಷ್ಟೇ ಆಗ್ಲಿ ಆತ ಸಾಫ್ಟ್‍ವೇರ್ ಕಂಪನಿಯವ ತಾನೇ. ಅದನ್ನ ಅವನು ಉಪಯೋಗಿಸಿಕೊಳ್ಳೋದು ವಿಚಿತ್ರ ಸಂದರ್ಭದಲ್ಲಿ..! ಶನಿವಾರ, ಭಾನುವಾರ ಹಿಂಗೇ ಸುತ್ತಾಡುವಾಗ ಸಿಗುವ ಹುಡುಗಿಯರನ್ನು ನೋಡಿ ಕಾಮೆಂಟ್ ಹೊಡೆಯುವಾಗ, ಅಷ್ಟೇನೂ ಸುಂದರಿಯರಲ್ಲದ ಹುಡುಗಿಯರನ್ನು ನೋಡಿದಾಗ ಬೇರೆ ಹುಡುಗರು ಚೆನ್ನಾಗಿದ್ದಾಳೆ ಅಂದಾಗ ನನ್ನ ಪ್ರತಿಕ್ರಿಯೆ “ಏನು ಕಮ್ಮಗೆ ಅದಳೆ ಬಿಡೋ” ಅನ್ನೋ ಶುದ್ಧ ಉಡಾಫೆ ಅಗಿರ್ತಾ ಇತ್ತು (ಮತ್ತು ಇದೆ..!). “ಕಂಡದ್ದನ್ನ ಕಂಡಂಗೆ ಹೇಳ್ತೀನಪ್ಪಾ ಅದ್ರಲ್ಲೇನು ವಿಶೇಷ? ಲೇ, ಬೆಂಗಳೂರಿಗೆ ಬಂದಮೇಲೆ ನಿನ್ನ ಟೇಷ್ಟು ಕೆಟ್ಟು ಕೆರ ಹಿಡಿದುಬಿಟ್ಟಿದೆ. ಯಾವ್ಯಾವಳಿಗೋ ಫಿಗರ್ರು ಅಂತೀಯಲ್ಲಲೇ?” ಅಂತಾ ಛೇಡಿಸ್ತಾ ಇದ್ದೆ. ಆತ ಆಗ, “ಲೇ, ಜಗತ್ತಿನಲ್ಲಿ ಎರಡೇ ಥರಾ ಇರೋದು. ಒಂದು ಚೆನ್ನಾಗಿರೋದು. ಇನ್ನೊಂದು ತುಂಬಾ ಚೆನ್ನಾಗಿರೋದು” ಅಂತಾ ಲೆಕ್ಚರ್ ಕೊಡ್ತಾ ಇದ್ದ. ನಮ್ಮಿಬ್ಬರ ಜೊತೆಗೆ ಗೆಳೆಯ ಕಾರ್ತೀಕ ಸೇರಿಕೊಂಡುಬಿಟ್ಟರೆ, “ಲೇ ನಿನ್ನ ಮದುವ್ಯಾಗೆ ಸ್ಟೇಜ್ ಮ್ಯಾಲ್ ಬಂದೇ ಹೇಳ್ತೀನಲೇ. ಲೇ ಎನ್ ಕಮ್ಮಗದಳಲೇ ನಿನ್ನ್ ಹೇಣ್ತಿ” ಅಂತಾ ನನಗೇ ಕಾಲೆಳೆಯುತ್ತಾನೆ..! ಬೆಂಗಳೂರು ಕಡೆ ಈ ‘ಕಮ್ಮಗೆ’ ಅನ್ನೋ ಪದ ಚಾಲ್ತಿಯಲ್ಲಿರೋದು ಕಡಿಮೆ. ನಮ್ಮ ದಾವಣಗೆರೆ ಕಡೆ ಹೆಚ್ಚು ಚಾಲ್ತಿಯಲ್ಲಿದೆ. ಅಷ್ಟೇನೂ ಚೆನ್ನಾಗಿಲ್ಲದ್ದಕ್ಕೆ, ಆಕರ್ಷಕವಾಗಿಲ್ಲದ್ದಕ್ಕೆ ವಸ್ತುವಿಗಾಗಲೀ ವ್ಯಕ್ತಿಗಾಗಲೀ ಬಳಸಲ್ಪಡುತ್ತದೆ.

    “ಕಟ್ರಾಸು” ಎಂಬ ಪದವೂ ಕನಿಷ್ಟದಲ್ಲಿ ಅತಿ ಕನಿಷ್ಟ ಎನ್ನುವುದನ್ನು ಬಿಂಬಿಸಲಿಕ್ಕೆ ಬಳಸಲ್ಪಡುತ್ತದೆ. ಬೆಂಗಳೂರಿನಲ್ಲಿ ಆ ಥರ ಶಬ್ದಗಳು ಕಿವಿಗೆ ಈ ವರೆಗೆ ಬಿದ್ದಿಲ್ಲ. ಇನ್ನೊಂದು ವಿಷ್ಯ. ಇದ್ದಿದ್ದು ಇದ್ದಂಗೆ ಹೇಳ್ತೀನಿ. ಇದರಲ್ಲೇನು ಉತ್ಪ್ರೇಕ್ಷೆ ಇಲ್ಲ. ನಮ್ಮ ದಾವಣಗೆರೆ, ಉತ್ತರ ಕರ್ನಾಟಕದ ಭಾಗಗಳಲ್ಲಿ(ದಾವಣಗೆರೆ ಮಧ್ಯಕರ್ನಾಟಕ..!) ಅಷ್ಟೇನೂ ಸುಂದರಿಯರಲ್ಲದವರನ್ನು ನೋಡಿದರೆ, ತುಂಬಾ ವಿಕಾರದ ವ್ಯಕ್ತಿಗಳನ್ನು ಕಂಡ್ರೆ “ಹೇತ್ರೆ ಹೇಲ್ ಬರಲ್ಲ” ಅನ್ನೋ ಮಾತಿದೆ. ಆದ್ರೆ, ಸುಂದರವಾಗಿದ್ದೋರನ್ನ ಕಂಡಾಗಲೆಲ್ಲಾ ಅದು ಬರುತ್ತಾ ಅನ್ನೋದು ನನ್ನ ಪ್ರಶ್ನೆ..!

   ಬೆಂಗಳೂರಿಗೆ ತನ್ನದೇ ಅದ ಭಾಷೆ ಅನ್ನೋದು ಉಳಿದಿಲ್ಲ. ಎಲ್ಲ ಕಲಸು ಮೇಲೋಗರ. “ಏನ್ ಮಗಾ? ಹೆಂಗವ್ಳೆ ನಿನ್ನ್ ಡವ್?” ಅನ್ನೋದೇ ಬೆಂಗಳೂರಿನ ಅಸಲಿಯತ್ತಿನ ಭಾಷೆ ಅಂತಾ ಬಿಂಬಿಸುತ್ತಿದ್ದಾರೆ. ಅದರ ಚಾಳಿ ನಮ್ಮೂರುಕಡೆಗೂ ಹಬ್ತಾ ಇದೆ. ಆದ್ರೆ, ನಮ್ಮಕಡೆ ಭಾಷೆಯಲ್ಲಿನ ಸೊಗಡು, ಗ್ರಾಮೀಣ ಸೊಗಸು ಇಲ್ಲಿ ಮಾಯವಾಗಿದೆ. ಬೆಂಗಳೂರು, ಮೈಸೂರುಗಳು ಮೊದಲು “ಸೌಮ್ಯ ಕನ್ನಡ”ಕ್ಕೆ ಹೆಸರಾಗಿದ್ದಂಥವುಗಳು. ಬರೀ ಕಲಾಸಿ ಪಾಳ್ಯದ ಭಾಷೇನ ತಗಂಡು, ಸಿನಿಮಾದಲ್ಲಿ ತೋರಿಸಿ ತೋರಿಸಿ, ಇದೇ ಬೆಂಗಳೂರು, ಇದೇ ಕರ್ನಾಟಕ ಅಂತಾ ತೋರಿಸೋ ಹಡಕಲಾಸಿ ನಿರ್ದೇಶಕರು, ನಿರ್ಮಾಪಕರು ಬೆಂಗಳೂರಲ್ಲಿ ಬಹಳಷ್ಟಿದ್ದಾರೆ.

   ಒಮ್ಮೆ ಯೋಚಿಸಿ ನೋಡಿ. ಸಿನಿಮಾ ಮತ್ತು ತಾರುಣ್ಯದ ಬದುಕು ಎಷ್ಟು ಬೆಸೆದುಕೊಂಡಿವೆ. ಮತ್ತು ಎಷ್ಟು ಪೂರಕವಾಗಿ ಕೆಲಸ ಮಾಡುತ್ತಿವೆ ಅಂತಾ. ಸಿನಿಮಾದಲ್ಲಿ ತೋರಿಸಿದ್ದನ್ನ ಹುಡುಗರು, ಹುಡುಗಿಯರು ಅನುಕರಿಸುತ್ತಾರೆ. ಅದು ಒಳ್ಳೇದೋ ಕೆಟ್ಟದ್ದೋ. ಹುಡುಗರು-ಹುಡುಗಿಯರು ಕಬ್ಬನ್ ಪಾರ್ಕು, ಹೋಟೆಲ್ಲು, ಲಾಲ್‍ಬಾಗು, ಶಾಪಿಂಗ್ ಕಾಂಪ್ಲೆಕ್ಸು ಸುತ್ತಾಡೋದನ್ನೇ ತಾರುಣ್ಯದ ಜೀವನ. ಕಾಲೇಜು ಬಿಟ್ಟು ತಿರುಗಾಡೋದನ್ನೇ ದೊಡ್ಡಸ್ತಿಕೆ ಅಂತಾ ತೋರಿಸೋ ಅವಿವೇಕಿ ನಿರ್ದೇಶಕರು, ನಿರ್ಮಾಪಕರು “ಸ್ಯಾಂಡಲ್‍ವುಡ್”ನಲ್ಲಿ ಹಲವರಿದ್ದಾರೆ. ಒಮ್ಮೆ ಕಣ್ಣು ಹಾಯಿಸಿ. ಪಾರ್ಕು, ಹೋಟೇಲ್, ಶಾಪಿಂಗ್ ಕಾಂಪ್ಲೆಕ್ಸ್‌ಗಳಲ್ಲಿ ಅಪ್ಪನ ದುಡ್ನಲ್ಲಿ ಐಶಾರಾಮಿ ಮಜಾ ಮಾಡೋ ಯುವಕ ಯುವತಿಯರನ್ನ ತೋರಿಸಿಯೇ ಸಿನಿಮಾ ಮಾಡುತ್ತಾರೆ. ಮತ್ತೆ ಅದು ಯುವಕ ಯುವತಿಯರನ್ನೇ ಬಲಿಯಾಗಿಸುತ್ತದೆ. “ಚೆಲುವಿನ ಚಿತ್ತಾರ ಸ್ಟೈಲ್ ಎಸ್ಕೇಪ್” ಅನ್ನೋ ಲೇಖನ ಮೂಡಿಬಂದಿತ್ತು “ಹಾಯ್ ಬೆಂಗಳೂರ್”ನಲ್ಲಿ. ಚೆಲುವಿನ ಚಿತ್ತಾರ ನೋಡಿ ಅದೆಷ್ಟು ಮುಗ್ಧ ಹುಡುಗಿಯರು ಹುಡುಗರ ಜೊತೆ ಓಡಿಹೋಗಿದ್ದಾರೋ. ಸಿನಿಮಾದಲ್ಲಿ ತೋರಿಸಿದ್ದನ್ನೇ ಜನ ಮಾಡ್ತಾರೆ. ಜನ ಮಾಡಿದ್ದನ್ನೇ ಸಿನಿಮಾ ಮಾಡಿದ್ದೇವೆ ಅಂತಾ ಬೊಗಳೇ ಬಿಡುವ ಬೊಗಳೇ ದಾಸರು ಇದ್ದರೆ ಕ್ರಿಯೇಟಿವಿಟಿ ಹೇಗೆ ಬಂದೀತು?

   ಮೊನ್ನೆ ಬಿ.ಎಂ.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ನೆಡೆದ ಘಟನೆ. ರಶ್ ಜಾಸ್ತಿ ಇದ್ದುದರಿಂದ, ಒಬ್ಬನ ಕಾಲು ಇನ್ನೊಬ್ಬನಿಗೆ ತಾಗಿತು. ಬಹುಷಃ ತುಳಿದ ಅಂತಾ ಕಾಣುತ್ತೆ. ತುಳಿಸಿಕೊಂಡವ ಕ್ಯಾತೆ ತೆಗೆದ. ತುಳಿದವನಿಗೆ ರೇಗಿ ಹೋಯಿತು. ಆತ ಏನನ್ನಬೇಕು. ಮೊದಲೇ ಯುವಕ. ಸ್ವಲ್ಪ ಒರಟ. “ಮರ್ಡರ್ ಆಗ್ಬಿಡ್ತೀಯ” ಅನ್ನಬೇಕೇ? ನಮ್ಮೂರು ಕಡೆಗೆ ಜಗಳ ಆಡಲಿಕ್ಕಾದರೂ ಬರ್ತದೆ. ಮನುಷ್ಯತ್ವ ಐತೋ ಇಲ್ಲೋ? ಹೊಟ್ಟೀಗೆ ಅನ್ನ ತಿನ್ತಿಯಾ ಏನ್ ತಿನ್ತೀಯ ಅಂತಾ ಬೈತಾರೆ. ಹಳೀತಾರೆ. ಆದರೆ ಒಂದೇ ಮಾತಿಗೆ “ಮರ್ಡರ್” ಮಾತುಗಳು ಬರುವುದಿಲ್ಲ. ಇಲ್ಲಿ ಇದು ಬೆಂಗಳೂರು ಪ್ರಭಾವ..

   ನಮ್ಮೂರಲ್ಲಿ ಪಾರ್ಕುಗಳಲ್ಲಿ ಜನ ಅಡ್ಡಾಡೊ ಕಡೆ ಕೂತು “ಬಾಂಡು” ಹೊಡೆಯುವ ಜೋಡಿಗಳಿಲ್ಲ. ಇದ್ದರೂ ಕಂಡಕಂಡವರ ಮುಂದೆ ಹಿಂಗೆ ಮಂಗಾಟ, ಹುಚ್ಚಾಟ ಮಾಡೋದಿಲ್ಲ. ಇದನ್ನೆಲ್ಲಾ ನೆನೆಸಿಕೊಂಡಾಗ ನಮ್ಮೂರು ಚೆನ್ನಾಗಿದೆ ಅನ್ನಿಸುತ್ತೆ. ಬೆಂಗಳೂರನ್ನ ರೆಫರೆನ್ಸಾಗಿ ಹಿಡಿದರೂ, ಇನ್ನೂ ಚೆನ್ನಾಗಿದೆ ಅನ್ಸುತ್ತೆ. ನಮ್ಮೂರು ಮಾತ್ರವಲ್ಲ ಬೆಂಗಳೂರನ್ನುಳಿದು ಬೇರೆ ಎಲ್ಲಾ ಕರ್ನಾಟಕದ ಊರುಗಳೂ..!

Categories: ದಾವಣಗೆರೆ · ಮನದ ಮಾತು
Tagged: , ,

ಬಸವೇಶ್ವರ ಬ್ರಾಹ್ಮಣ ಸಂಘ..!

January 3, 2008 · 4 Comments

ಮೊನ್ನೆ ಮೊನ್ನೆ ಪೇಪರ್ರಲ್ಲಿ ಕಾರ್ಯಕ್ರಮಗಳ ಪಟ್ಟಿಯಲ್ಲಿ ಬಸವೇಶ್ವರನಗರ ಬ್ರಾಹ್ಮಣ ಸಂಘ ಅಂತಾ ಇತ್ತು. ಅದರೊಟ್ಟಿಗೇ ಇಂಥಾ ಯೋಚನೆಯೊಂದು ಸುಳಿದು ಹೋಯಿತು..! ಎಷ್ಟೇ ಆಗಲಿ ಬಸವಣ್ಣನವರು ಬ್ರಾಹ್ಮಣರಾಗಿಯೇ ಹುಟ್ಟಿದವರು ತಾನೇ. ಬಸವಣ್ಣನವರು ಬ್ರಾಹ್ಮಣ ಸಂಪ್ರದಾಯದ ಅನಾಚಾರಗಳ ವಿರುದ್ಧ ೧೨ನೇ ಶತಮಾನದಲ್ಲಿಯೇ ದನಿಯೆತ್ತಿದವರು. ಈ ಹೆಸರಿನಲ್ಲಿ ಒಂದು ಸಂಘ ತೆರೆದರೆ, ಬ್ರಾಹ್ಮಣರು ಬಸವಣ್ಣನನ್ನು ತಮ್ಮವರೆಂದುಕೊಳ್ಳಲು ಒಂದು ಅವಕಾಶ! ನನ್ನ ಬ್ರಾಹ್ಮಣ ಗೆಳೆಯನಿಗೆ ಈ ಬಗ್ಗೆ ಹೇಳುತ್ತಿದ್ದೆ. ಆತ ನಕ್ಕು ಸುಮ್ಮನಾದ. ಸುಮ್ಮನೇ ಆತ್ಮೀಯತೆಯಿಂದ ಛೇಡಿಸುವಾಗ, ಆತನಿಗೆ ನೀವು ಬಾಮುಂಡ್ರು ಹಿಂಗೆಲ್ಲಾ ಮಾಡ್ಬಾರ್ದು ಅಂತಾ ಹೇಳಿದಾಗಲೆಲ್ಲಾ ಆತನ ಉತ್ತರ ಬ್ರಾಹ್ಮಣನಾಗಿ ಹುಟ್ಟಿ ಏನು ಉಪಯೋಗ ಆಯ್ತು ಹೇಳು ಎನ್ನುವುದೇ ಆಗಿರುತ್ತಿತ್ತು. ತೀರಾ ಮಧ್ಯಮ ವರ್ಗದಿಂದ ಬೆಳೆದು ಬಂದ ಆತನಿಗೆ ಜಾತಿಯಿಂದ ಏನೂ ಲಾಭವಾಗಿಲ್ಲ.

ಇನ್ನೊಂದು ವಿಷಯವೆಂದರೆ ನಮ್ಮೂರಿನ ಲಾಯರ್ ರೋಡಿನ “ಮಾಧ್ವ ಯುವಕ ಸಂಘ”ದ ಆಟದ ಮೈದಾನದಲ್ಲಿ ಬರೀ ಮಾಧ್ವ ಬ್ರಾಹ್ಮಣ ಹುಡುಗರೇ ಆಡುತ್ತಾರೆ. ಸ್ಮಾರ್ತ ಹುಡುಗರೂ ಹೋಗುವುದಿಲ್ಲ..! ಜನಿವಾರಕ್ಕೂ ಬೆಲೆಇಲ್ಲ..! ಇನ್ನು ಅದರ ಪಕ್ಕದ ದೀಕ್ಷಿತ್ ರೋಡಿನ ಕಥೆಯೂ ಅದೇ. ಬೇರೆ ಹುಡುಗರೊಂದಿಗೆ ಈ ಹುಡುಗರು ಸೇರುವುದೇ ಇಲ್ಲ. ಅದೇಕೆ ಆ ಮಟ್ಟಿಗೆ ಒಂದು ಗೆರೆ ಕೊರೆದುಕೊಂಡುಬಿಟ್ಟಿರುತ್ತಾರೆ? ದೇವರು ಧರ್ಮ ಸಂಪ್ರದಾಯ ಇವುಗಳಾಚೆಗಿನ ಬದುಕು ಏಕೆ ಕಣ್ಮರೆಯಾಗಿರುತ್ತದೆ? ಬೇರೆ ಹುಡುಗರ ಜೊತೆ ಹೋದರೂ ಬ್ರಾಹ್ಮಣ ಹುಡುಗರೊಂದಿಗೆ ಇರುವ ಆತ್ಮೀಯತೆ, ಸಲುಗೆ ಬೆಳೆಸಿಕೊಳ್ಳುವುದಿಲ್ಲ. ಇನ್ನು ಭಾರತೀಯ ಸಂಸ್ಕೃತಿ ಎಂದರೆ ವೇದ, ವೇದಾಂತ, ಭಗವದ್ಗೀತೆ, ಉಪನಿಷತ್ತು ಇಷ್ಟೇನಾ? ರಾಮಾಯಣ ಮಹಾಭಾರತ ಮಾತ್ರ ನಮ್ಮ ಸಂಸ್ಕೃತಿಯನ್ನು ಜೋಪಾನ ಮಾಡಿವೆಯಾ? ಬಸವಣ್ಣನಂಥವರು ೧೨ನೇ ಶತಮಾನದಲ್ಲಿ ಮಾಡಿದ ವೈಚಾರಿಕ ಕ್ರಾಂತಿ, ಜಾಗೃತವಾದ ಕಾಯಕ-ದಾಸೋಹ ಪ್ರಜ್ಞೆ ಇವೆಲ್ಲವೂ ನಮ್ಮ ಸಂಸ್ಕೃತಿಯನ್ನು ಜತನವಾಗಿ ಕಾಪಾಡಲಿಕ್ಕೆ, ವಿಚಾರದ ಓರೆಗಲ್ಲಿಗೆ ಹಚ್ಚಲಿಕ್ಕೆ ಕಾರಣವಾಗಿವೆ.

ಬಸವಣ್ಣನ ಅನುಯಾಯಿಗಳಾದ ಲಿಂಗಾಯಿತರ ಮನೆಗಳಲ್ಲಿ ಬೇಕಾದ್ರೆ ಭಗವದ್ಗೀತೆ ಸಿಗುತ್ತದೆ. ಆದರೆ ಎಷ್ಟು ಜನ ಬ್ರಾಹ್ಮಣರ ಮನೆಗಳಲ್ಲಿ ಬಸವಣ್ಣನ ವಚನಗಳು ಸಿಗುತ್ತವೆ? ಸಂಸ್ಕೃತಿ ಎಂದರೆ ವೈದಿಕ ಮಾತ್ರವೇ ಅಲ್ಲ. ಅದನ್ನು ಧಿಕ್ಕರಿಸಿ ವೈಚಾರಿಕ ನೆಲೆಗಟ್ಟಿನಲ್ಲಿ ಹೊಸದೊಂದು ಕ್ರಾಂತಿಗೆ, ಧರ್ಮದ ಮರುಹುಟ್ಟಿಗೆ, ಮರುವಿಮರ್ಶೆಗೆ ಕಾರಣವಾದ ಅವೈದಿಕದ ನಿಲುವನ್ನೂ ಗಂಭೀರವಾಗಿ ಪರಿಗಣಿಸಬೇಕು.

ಮತಾಂತರ ನೆಡೆಯುತ್ತಿದೆ ಎಂದಾಕ್ಷಣ ಜಾಗೃತರಾಗಿ ಅದನ್ನು ತಡೆಯಲು, ಕ್ರೈಸ್ತ ಮಿಷಿನರಿಗಳ ಕುತಂತ್ರದ ಆಮಿಷಕ್ಕೆ ಬಲಿಯಾಗಿ ಮತಾಂತರವಾಗುವ ಅಮಾಯಕರನ್ನು, ದಲಿತರನ್ನು ರಕ್ಷಿಸಲು ಮುಂದಾಗುವ ಆರ್.ಎಸ್.ಎಸ್-ಬಜರಂಗದಳಗಳು ಅವರನ್ನು ಬ್ರಾಹ್ಮಣರನ್ನಾಗಿಸಿ ಜನಿವಾರ ದೀಕ್ಷೆ ನೀಡುತ್ತವೆಯೇ? ತುಳಿತಕ್ಕೊಳಗಾದವರು, ಶೋಷಿತರು, ಕಾಲಡಿಯಲ್ಲಿದ್ದವರು ಎಲ್ಲಿರಬೇಕೋ ಅಲ್ಲೇ ಇರಬೇಕೇ? ಇದು ಅವರ ನಿಲುವೇ? ಪ್ರಶ್ನೆಗಳ ಸರಮಾಲೆ ಇದೆ. ಉತ್ತರ… ಯಾರಿಗೆ ಕೇಳೋಣ?

ಇದನ್ನೆಲ್ಲಾ ನೆನಸಿಕೊಂಡಾಗ ವಿಚಾರವಂತ ಬ್ರಾಹ್ಮಣ ಹುಡುಗರು ಸೇರಿ ಇಂಥದೊಂದು ಸಂಘ ಕಟ್ಟಬಹುದಲ್ಲವೇ ಅನ್ನಿಸಿತ್ತು..!

Categories: ಮನದ ಮಾತು · ವಿಚಾರವಾದ
Tagged: , , , , ,