೨೭ ಮೇ ೨೦೦೫, ಭಾನು.
ಯಾವ ಮೋಹನ ಮುರಳಿ ಕರೆಯಿತೋ …
ಬದುಕಿನ ಭಾವದಲಿ ಬಣ್ಣದ ಛಾಯೆ.
ಸತ್ತ ಭಾವನೆಗಳಿಗೆ ಮರು ಹುಟ್ಟು.
ಹೀಗೇಕೆ..?
ಕೇವಲ ಮುಖದ ಮೇಲೆ
ಪ್ರಶ್ನಾರ್ಥಕ ಚಿಹ್ನೆ, ನಿರರ್ಥಕ ಚಿಹ್ನೆ.
ಬದುಕು ಕಲಿಸುವ ಪಾಠಗಳ ಕಲಿಯದೇ ಹೋದೆನಾ..?
ಎಲ್ಲರಿಗಿಂತಲೂ ಹಿಂದುಳಿದೆನಾ..?
ಹೀಗೇಕೆ ನಾ ಹೀಗೇಕೆ..?
ಆಶಾವಾದವೇಕೆ ನಿರಾಶಾವಾದವಾಯಿತು..?
ಬದುಕಿನಲ್ಲಿ ಕಪ್ಪು-ಬಿಳುಪುಗಳೇ ಬಣ್ಣಗಳಾದವಾ..?
ಬಣ್ಣಗಳೇ ಬಣ್ಣ ಕಳೆದುಕೊಂಡವಾ…?
ಇಲ್ಲಾ.., ಬದುಕಿನಲ್ಲಿ ನಾ ಬಣ್ಣ ಕಳೆದುಕೊಂಡೆನಾ..?
ಹೃದಯ ಸಮುದ್ರ ಕಲಕಿದ ತಾರುಣ್ಯವೆಲ್ಲಿ ಏನಾಯಿತು..?
ಉತ್ಸಾಹದ ಸುನಾಮಿ ಅಲೆ ಶಾಂತವಾಗಿದೆಯೇಕೆ..?
ಗರಿಗೆದರಿ ಚಿಮ್ಮಬೇಕಿದ್ದ ಸಮುದ್ರದ ಅಲೆಗಳಾದರೂ ಎಲ್ಲಿ..?
ಸಮುದ್ರವೇಕೆ ಸರೋವರವಾಯಿತು? ಮಾನಸ ಸರೋವರವಾಯಿತು..?
ಗುರಿಗಳೆಲ್ಲ ಗರಿ ಬಿಚ್ಚಿ ಹಾರುವ ಕಾಲಕ್ಕೆ ಕಾಲು ಕಳೆದುಕೊಂಡ ಹಕ್ಕಿಯಾದೆನಾ..?
ಜಗತ್ತಿಗೆ ನನ್ನ ಕಾಣ್ಕೆ ಬೇಕು.
ಜಗತ್ತಿಗೆ ನಾ ಬೇಕಾದವ.
ಜಗತ್ತಿಗೆ ನಾ ಬೆಳೆಯಬೇಕೆಂಬ ಹಂಬಲವಿದೆ.
ನನ್ನನ್ನು ಮುಗಿಲೆತ್ತರಕ್ಕೇರಿಸುವ ಬಲವಿದೆ, ಒಲವಿದೆ.
ಜಗತ್ತಿನಿಂದ ನನಗೆ ಬುಲಾವಿದೆ.
ಅಡಗಿ ಹೋದ, ಉಡುಗಿ ಹೋದ ಉತ್ಸಾಹವ ಹುಡುಕಿ ತರುವೆ.
ಮತ್ತೊಂದು ಹೊಸ ಸೆಲೆಯಲ್ಲಿ, ಹೊಸ ಹುರುಪಿನೊಂದಿಗೆ ಬರುವೆ.
ಅರ್ಥ ಕಳೆದುಕೊಂಡ ಬಾಳಿಗೆ ‘ಅರ್ಥ’ವೂ ಬೇಕು.
ಬೇಕು-ಬೇಕುಗಳ ಮಧ್ಯೆ ಬೇಡವೇಕೆ ಸೇರಿಕೊಂಡಿತು..?
ಬೇಡ-ಬೇಡಗಳೆಲ್ಲ ಬಾಡುವವರೆಗೆ ಹೋರಾಡುವೆ.
ಬದುಕಿನ ಸರ್ವ ಸ್ವತಂತ್ರ ಭಾವನೆಗಳಿಗೆ ದನಿಯಾಗುವೆ.
ಕಿತ್ತುಹೋದ ಕತ್ತನ್ನು ಕೊರಳಿಗೆ ಸೇರಿಸುವೆ, ಜೀವ ತುಂಬುವೆ.
ನಿರಾಶಾವಾದವೇಕೆ ಮನೆಮಾಡಿದೆ ಮನದ ಮನೆಯಲ್ಲಿ..?
ಸಶಕ್ತನಾಗುವೆ ಹೊಡೆದೋಡಿಸಲು, ಬಡಿದೋಡಿಸಲು.
ಬಡಿಗೋಲಾಗುವೆ ನಾ ಬದುಕು ಡೋಲಾಯಮಾನವಾಗುವ ಮುನ್ನ.
ನಿನ್ನೆಗಳ ನಿನ್ನೆಗಳಿಗೆ ಸೇರಿಸಿ, ಇಂದು-ನಾಳೆಗಳ ನನ್ನವುಗಳನ್ನಾಗಿಸಿಕೊಳ್ಳುತ್ತೇನೆ.
ಯಾವ ಮೋಹನ ಮುರಳಿ ಕರೆಯಿತೋ ಮರಳಿದೆ
ಆಶಾವಾದದೊಂದಿಗೆ…!
ಮೋಹನ ಸುಧೆ ಹರಿಸಲಿಕ್ಕೆ..!

3 responses so far ↓
M G Harish // September 19, 2008 at 5:58 am |
ಕವಿ ಗಣೇಶ ಮರಳಿ ಬಂದಂತಿದೆ!!
Ganesh K // September 19, 2008 at 7:55 am |
Ya. sure…! aadre hale kavanagalondige..!
raghavendra // October 1, 2009 at 11:24 am |
nice work…..,
nice ‘kavana’….
“baala janjaatadali manake niraalava koduva kelasave shresta niraaladode niraalavaagi babukalu….,
saantvanisuva kavanadante….”
by — raghavendra….