ಕಾಶ್ಮೀರಿ ಉಪ್ಚಾ..!

Kashmiri Noon Chai – Wikipedia

ಹೋದ ಡಿಸೆಂಬರ್ ನಲ್ಲಿ ಮೈಸೂರಿನಲ್ಲಿ ಕಾಗ್ನಿಷನ್ ಮತ್ತು ರೆಕಗ್ನಿಷನ್ ಕಾನ್ಫರೆನ್ಸ್ ಗೆ ಹೋದಾಗ ಒಬ್ಬ ಮಂಗಳೂರು ವಿವಿಯಲ್ಲಿ ಬಿಗ್ ಡೇಟಾ ಬಗ್ಗೆ ಸಂಶೋಧನೆಯಲ್ಲಿ ತೊಡಗಿದ ಕಾಶ್ಮೀರಿ ಸಂಶೋಧಕ ಪರಿಚಯವಾಗಿದ್ದ. ಕಾಶ್ಮೀರದ ಬಗ್ಗೆ ಕುತೂಹಲಕಾರಿಯಾಗಿ ಅಲ್ಲಿನ ಬೆಳಗಿನ ತಿಂಡಿ ಪೇಯಗಳ ಬಗ್ಗೆ ಕೇಳುತ್ತಿದ್ದಾಗ ಆತ “ನುನ್ ಚಾಯ್” ಬಗ್ಗೆ ಹೇಳಿದ್ದ. ನುನ್ ಅಂದ್ರೆ ಕಾಶ್ಮೀರಿ ಭಾಷೆಯಲ್ಲಿ ಉಪ್ಪು. ಚಾ ಗೂ ಉಪ್ಪಿಗೂ ಸಂಬಂಧವೇನು? 🙂 ಮಂಡ್ಯ ಕಡೆ ಮುದ್ದೆಗೆ ಮಾಡುವ ಸಾರಿಗೆ “ಉಪ್ಸಾರು” ಅಂದಂಗೆ ನಾವು ಇದನ್ನ “ಉಪ್ಚಾ” ಅನ್ಕಬೋದೇನೋ. ನನ್ನ ಕಾಶ್ಮೀರಿ ವಿದ್ಯಾರ್ಥಿನಿ ಒಬ್ಬಾಕೆ ಈ ಬಾರಿ ಊರಿಗೆ ಹೋದಾಗ ಈ ಚಹಾ ಪುಡಿ ತರುವುದಾಗಿ ಆಶ್ವಾಸನೆ ಕೊಟ್ಟಿದ್ದಾಳೆ.

ಹೀಗೇ ನುನ್ ಚಾ ಬಗ್ಗೆ ಕಣ್ಣಗಲಿಸಿ ಗೂಗಲಿಸಿದಾಗ ಸಿಕ್ಕ ಲಿಂಕನ್ನ, ವಿಕಿ ಹೌ ನಲ್ಲಿ ಸಿಕ್ಕ ಮಾಹಿತಿ, ವೀಡಿಯೋವನ್ನ ಶೇರ್ ಮಾಡುತ್ತಿದ್ದೇನೆ. ಉಪ್ಚಾಗೆ ಜೈ..!

ಲಕ್ಷ್ಮೀ ಬಾರಮ್ಮ ಸೀರಿಯಲ್ಲಿನ ಹೊಸ ಲಕ್ಷ್ಮಿ :)

image

ಹೊಸ ಲಕ್ಷ್ಮಿ ಪಾತ್ರಧಾರಿಯ ಎಡಗಣ್ಣು ಮೊದಲೇ ಸಣ್ಣದಿದೆ. ಪಾಪ ಅಳಿಸಿ ಅಳಿಸಿ ಇನ್ನೂ ಸಣ್ಣಗೆ ಮಾಡಬಾರದಾಗಿ ನಿರ್ದೇಶಕರಲ್ಲಿ ವಿನಂತಿ . 🙂

ಅನೈತಿಕತೆ vs ಭ್ರಷ್ಟತೆ?

ಜನರ ಕಣ್ಣಲ್ಲಿ ಭ್ರಷ್ಟತೆ ಅನ್ನೋದು ಸಾಮಾನ್ಯ ವಿಷಯ. ಅವನು ಅಷ್ಟ್ ದುಡ್ ತಗಂಡ ಅವನು ಅಷ್ಟ್ ಲಂಚ ಕೇಳಿದ ಅನ್ನೋದು ಜನರ ಕಣ್ಣಲ್ಲಿ ಸುದ್ದಿಯೇ ಅಲ್ಲ. (ಇನ್ಫಾರ್ಮೇಷನ್ ಥಿಯರಿ ಪ್ರಕಾರ ಅತಿ ಕಡಿಮೆ ಸಂಭವನೀಯತೆ ಇರುವ ವಿಚಾರ ಅತಿ ಹೆಚ್ಚಿನ ಸುದ್ದಿ ಹೊಂದಿರುತ್ತದೆ) ಅದು ರಂಜನೀಯವೂ ಅಲ್ಲ. ರಸವತ್ತಾಗಿ ಬಾಯ ಮೇಲೆ ನಲಿದಾಡುವಂಥದ್ದೂ ಅಲ್ಲ. ದುಡ್ಡು ಹೊಡೆದ ಹೊಡೆದ ಅಷ್ಟೇ. ಮುಗೀತು.

ಆದರೆ, ಅನೈತಿಕತೆಯ ವಿಷಯ ಹಾಗಲ್ಲ. ಅದು ಪ್ರತಿ ಕ್ಷಣಕ್ಕೂ ಹೊಸ ಹೊಸ ತಿರುವುಗಳನ್ನ ನೀಡುತ್ತ, ರಂಜನೆ, ಕುತೂಹಲ ಹುಟ್ಟಿಸುತ್ತದೆ ಜೊತೆಗೆ ಸುದ್ದಿಯಾಗುತ್ತದೆ. ಈ ಸುದ್ದಿ ಹೊಸ ಸುದ್ದಿಗಳಿಗೆ ಕಾರಣೀಭೂತವಾಗುತ್ತದೆ. ಜನರ ಬಾಯಲ್ಲಿ ಆಡಿಕೊಂಡು ನಗಲಿಕ್ಕೆ, ಹೀಯಾಳಿಸಲಿಕ್ಕೆ, ಜನ ಈ ಸುದ್ದಿ ಹೇಳುವಾಗ ತಾವೇನೋ ಸಾಚಾ ಎಂದು ಜಂಭ ಕೊಚ್ಚಿಕೊಳ್ಳಲೊಕ್ಕೂ ವೇದಿಕೆ ಒದಗಿಸುತ್ತದೆ.

ಹಾಗಾಗಿ, ಕೂಡ್ಲಿಗಿ ಡಿ.ವೈ.ಎಸ್.ಪಿ. ಅನುಪಮಾ ಶೆಣೈ ಪಿ.ಟಿ.ಪರಮೇಶ್ವರ ನಾಯ್ಕರ ವಿರುದ್ಧ ಭ್ರಷ್ಟತೆಯ, ಅಧಿಕಾರ ದುರುಪಯೋಗದ ಆರೋಪ ಮಾಡಿದ್ದರೆ ಆದು ಸುದ್ದಿಯೇ ಆಗುತ್ತಿರಲಿಲ್ಲ. ಯಾವಾಗ ಅದಕ್ಕೆ ಪರಮೇಶಿ ಪ್ರೇಮ ಪ್ರಸಂಗ, ವಾಷಿಂಗ್ ಪೌಡರ್ ನಿರ್ಮಾ ಅನ್ನೋ ಶೀರ್ಷಿಕೆಗಳು ಲಭಿಸಿದವೋ, ಅದೇ ಕ್ಷಣದಿಂದ ಒಂದು ಕೆಟ್ಟ ಕುತೂಹಲವನ್ನು ಕೋಟ್ಯಂತರ ಜನರ ಮನಸ್ಸಿನಲ್ಲಿ ಈ ಸುದ್ದಿ ಬಿತ್ತಿಬಿಟ್ಟಿದೆ. ಇನ್ನು ಏನೇ ಬೆಳವಣಿಗೆಗಳು ಈ ವಿಷಯವಾಗಿ ನಡೆದರೂ ಅದು ಸಾವಿರ ಅರ್ಥಗಳನ್ನ ಕಲ್ಪಿಸಿಕೊಳ್ಳುವಷ್ಟು ಪ್ರಬಲವಾಗಿ ಕೆಟ್ಟ ಕುತೂಹಲವನ್ನು ನಿರ್ಮಿಸಿಕೊಟ್ಟಿದೆ.

ಯಾವುದಕ್ಕೂ ಹೆದರದ ಭಂಡ, ಭ್ರಷ್ಟರು ಆನೈತಿಕತೆಯ ಕೆಟ್ಟ ಕುತೂಹಲಕ್ಕೆ ಬೆಚ್ಚಿ ಬೆದರಿರುವುದು ಒಂಥರಾ ಆಸಕ್ತಿಕರ ವಿಷಯ. ಜನರ ಸಾಮಾಜಿಕ ವರ್ತನೆ ಮತ್ತು ಕಾಲಕ್ಕೆ ತಕ್ಕಂತೆ ಅದರ ಪರಿವರ್ತನೆ ಅಭ್ಯಾಸಿಸುವವರಿಗಂತೂ ಸುಗ್ಗಿ ಕಾಲ.

ಬಸವಜಯಂತಿ ವಿಶೇಷ: ೧೨ನೇ ಶತಮಾನದ ಶರಣರ ಕಾಲದ ಖಾದ್ಯ ಪದಾರ್ಥಗಳು

ಹೋಳಿಗೆ (ಕೋಲಶಾಂತಯ್ಯ ವಚನದಲ್ಲಿದೆ)

ಎಣ್ಣೆ ಹೋಳಿಗೆ (ಚನ್ನಬಸವಣ್ಣನ ವಚನದಲ್ಲಿದೆ), ಎಣ್ಣೆ ಹೂರಿಗೆ(ಮಡಿವಾಳ ಮಾಚಯ್ಯ). ಹೋಳಿಗೆಗೆ ೮೦೦ ವರ್ಷಗಳ ಇತಿಹಾಸವಿದೆ..!

ಬೀಸುಂಬೂರಿಗೆ(ಹರಿಹರ ಕವಿ)

ಹೂರಿಗೆ (ಮಂಗರಸನ ಸೂಪಶಾಸ್ತ್ರ) -ಗೋಧಿಯ ಹಿಟ್ಟು ಅಥವಾ ರವೆಯನ್ನು ಕಲಿಸಿ ಸ್ವಲ್ಪ ಸೇರಿಸಿ ನಾರು ಹರಿಯದ ಕಣಕವನ್ನಾಗಿ ಮಾಡಿ, ನಿಂಬೆ ಹಣ್ಣಿನ ಗಾತ್ರದ ಉಂಡೆಗಳನ್ನು ಬಟ್ಟೆಯಲ್ಲಿ ಮುಚ್ಚಿಡಬೇಕು. ಕಡಲೆಬೇಳೆಯನ್ನು ಬೇಯಿಸಿ ಅದಕ್ಕೆ ತಕ್ಕಷ್ಟು ಬೆಲ್ಲವನ್ನು ಸೇರಿಸಿ ತಯಾರಿಸಿದ ಹೂರಣವನ್ನು ಒಂದು ಗೋಳಕದ ಮೇಲಿಟ್ಟು, ಅದರ ಮೇಲೆ ಮತ್ತೊಂದು ಹಿಟ್ಟಿನುಂಡೆಯನ್ನಿಟ್ಟು , ಕೈಗಳ ಹರವಿ ಅದನ್ನು ಹಂಚಿನ ಮೇಲೆ ತುಪ್ಪದಲ್ಲಿ ಬೇಯಿಸುವುದು.

ಖಂಡಮಂಡಗೆ(ಬಸವಣ್ಣನ ವಚನ) , ಕಟ್ಟು ಮಂಡಗೆ(ಮಡಿವಾಳ ಮಾಚಿದೇವ) – ಕಣಕದಲ್ಲಿ ಬರಿಯ ಸಕ್ಕರೆ ತುಪ್ಪಗಳ ಹೂರಣವನ್ನು ಅಟ್ಟು ಸಕ್ಕರೆಯನ್ನು ತಳಿದು ಬಿಯೋಡಿನ(ಬಿಸಿ ಹಂಚು) ಮೇಲಿರಿಸುವುದು.

ಸುಲಿಗಡಲೆಯ ಕಜ್ಜಾಯ(ಬಸವಣ್ಣನ ವಚನ)

ಉಂಡಲಿಗೆ, ಉಂಡೆ, ಹಾಲುಂಡೆ (ಹರಿಹರ ಕವಿ)  – ಕಡೆಗಂದಿಯೆಮ್ಮೆಯ ಹಾಲಿನಲ್ಲಿ ತುರುವೆ ಬೇರನ್ನು ಜಜ್ಜಿ ಹಾಕಿ, ಆ ಹಾಲನ್ನು ಅರ್ಧ ಆಗುವವರೆಗೂ ಕಾಯಿಸಿ ಅದಕ್ಕೆ ತುಪ್ಪ ಸಕ್ಕರೆಗಳನ್ನು ಬೆರೆಸಿ, ಲವಂಗ – ಪತರೆ – ಏಲಕ್ಕಿಗಳನ್ನು ಪುಡಿ ಮಾಡಿ ಅದರಲ್ಲಿ ಕಲಸಿ, ಆ ಗಟ್ಟಿಯಾದ ಹಾಲನ್ನು ತೆಗೆದು ಉಂಡೆಗಳನ್ನಾಗಿ ಮಾಡುವುದೇ ಹಾಲುಂಡೆ ಅಥವಾ ಕ್ಷೀರದುಂಡೆ (ಲೋಕೋಪಕಾರ ಗ್ರಂಥ) – ಧಾರವಾಡ ಪೇಡ ಮಾಡುವ ವಿಧಾನವೂ ಇದೇ.

ಸೂಸಲು – ಅಲ್ಲಮಪ್ರಭು ವಚನ. ಈಗ ಸೂಸಲು ಎಂಬುದು ಸೇವಗೆ(ಶ್ಯಾವಿಗೆ?)ಯೊಡನೆ ಕಲಸಿ ತಿನ್ನಲು ಮಾಡಿದ ಎಳ್ಳು ಬೆಲ್ಲಗಳ ಮಿಶ್ರಣವನ್ನು ಸೂಚಿಸುತ್ತದೆ. ಸೇವಗೆಯನ್ನು ಪರಡಿ ಎಂತಲೂ ಕರೆಯುತ್ತಿದ್ದರು. ಹರಿಹರನು ಪರಡಿಯ ಪಾಯಸವನ್ನು ಹೆಸರಿಸುತ್ತಾನೆ. ಮಂಗರಸನು ಹೇಳುವ ‘ಸೂಸಲು ಸಕ್ಕರೆ’ಯೂ ಅಲ್ಲಮನು ಹೇಳುವ ಸೂಸಲು ಒಂದೇ ಇರಬಹುದು. ಹಾಲನ್ನು ಗಟ್ಟಿಯಾಗುವಂತೆ ಕಾಸಿ ಅದನ್ನು ಆರಿಸಿ ಸಕ್ಕರೆಯನ್ನು ಸೇರಿಸಿದರೆ ಸೂಸಲು ಸಕ್ಕರೆಯಾಗುತ್ತದೆಯೆಂದು ಮಂಗರಸನು ವಿವರಿಸುತ್ತಾನೆ.

ಪಾಯಸವನ್ನು ವಚನಗಳಲ್ಲಿ ‘ತುಯ್ಯಲು’ ಎಂದು ಕರೆದಿದ್ದಾರೆ. (ಅಲ್ಲಮಪ್ರಭು, ಬಸವಣ್ಣ)

ಹಡಪದ ಅಪ್ಪಣ್ಣನು ದೋಸೆ-ಕಡುಬುಗಳನ್ನು ಹೆಸರಿಸುತ್ತಾನೆ. ‘ಕಡುಬು’ ಎನ್ನುವುದು ಬಹುಷಃ ‘ಇಡ್ಡಲಿ’ಯನ್ನು ಸೂಚಿಸುತ್ತದೆ. ‘ಇಡ್ಡಲಿಗೆ’ ಯನ್ನು ಶಿವಕೋಟ್ಯಾಚಾರ್ಯನ ವಡ್ಡಾರಾಧನೆ ಉಲ್ಲೇಖಿಸುತ್ತದೆ. – ಉದ್ದನ್ನು ರುಬ್ಬಿ, ಮೊಸರು, ಇಂಗು, ಜೀರಿಗೆ, ಕೊತ್ತಂಬರಿ, ಮೆಣಸು, ಶುಂಠಿಗಳನ್ನು ಸೇರಿಸಿ ಬೇಯಿಸುವುದು ಇಡ್ಡಲಿಗೆ ಎಂದೆನಿಸಿಕೊಳ್ಳುತ್ತಿತ್ತು. (ಲೋಕೋಪಕಾರ) . ನನ್ನದೊಂದು ಪ್ರಶ್ನೆ. ಕರ್ನಾಟಕದ ಸಂಸ್ಕೃತಿಯ ಅವಿಭಾಜ್ಯ ಅಂಗವೇ ಆಗಿರುವ ಶರಣ ಸಂಸ್ಕೃತಿಯ ಕಾಲದಲ್ಲೇ ಇಡ್ಲಿ ದೋಸೆಗಳು ಉಲ್ಲೇಖಿತವಾಗಿರುವಾಗ ಇಡ್ಲಿ ದೋಸೆಗಳು ತಮಿಳುನಾಡು ಮೂಲದವು ಎಂದು ಹೇಗೆ ಹೇಳುತ್ತೀರಿ?

ಗುಗ್ಗರಿ ಎನ್ನುವುದೂ ಒಂದು ಖಾದ್ಯವಾಗಿತ್ತು – ಬಸವಣ್ಣನ ವಚನ

ಅವಲಕ್ಕಿ – ಬಸವಣ್ಣನ ವಚನ
ಕಿಚ್ಚಡಿ ಮತ್ತು ಮೇಲೋಗರ ಎಂಬುವು ವಿಶಿಷ್ಟ ರೀತಿಯಲ್ಲಿ ತಯಾರಿಸಿದ ಅನ್ನಗಳು. – ಬಸವಣ್ಣ ಹಾಗೂ ದೇವರ ದಾಸಿಮಯ್ಯ ವಚನಗಳು.

ಹುಗ್ಗಿ (ಗೋಧಿ ಹುಗ್ಗಿ?) ಮತ್ತು ಬೆಳಸೆ- ಚನ್ನಬಸವಣ್ಣನ ವಚನಗಳಲ್ಲಿ ಉಲ್ಲೇಖವಾಗಿದೆ. (ಪುಳ್ಗೆಳ್ಗೆ – ಹುಗ್ಗಿಯ ಹಳಗನ್ನಡ ರೂಪವು ‘ರಾಮಚಂದ್ರ ಚರಿತ ಪುರಾಣ’ ದಲ್ಲಿ ಉಲ್ಲೇಖವಾಗಿದೆ)

ಪ್ರಾಚೀನಭಾರತದ ಸಮಯದಲ್ಲಿಯೇ ಪಂಚಾಮೃತದ ಉಲ್ಲೇಖವಿದೆ. ಹಾಲಿಗೆ ಸಕ್ಕರೆ, ತುಪ್ಪ, ಮೊಸರು ಮತ್ತು ಜೇನುಗಳನ್ನು ಸೇರಿಸಿ ದೇವರಿಗೆ ಅಭಿಷೇಕ ಮಾಡಿದಾಗ ಪಂಚಾಮೃತವೆನಿಸಿಕೊಳ್ಳುತ್ತಿತ್ತು. ‘ಬಸವ ಪುರಾಣ’ವು ಮೊಸರಿಗೆ ಬದಲು ಬಾಳೆಯ ಹಣ್ಣನ್ನು ಹೇಳುತ್ತದೆ.

ಹಾಲಿಗೆ ತುಪ್ಪ, ಸಕ್ಕರೆಗಳನ್ನು ಸೇರಿಸುವುದನ್ನು ಮಹಾದೇವಿಯಕ್ಕನು ‘ತ್ರಿವಿಧಾಮೃತ’ ಎಂದು ಕರೆದಿದ್ದಾಳೆ.

ಈ ಬಸವ ಜಯಂತಿಗೆ ಕೇಜಿಗಟ್ಲೇ ಬಂಗಾರ ತೊಗೋಬೇಡಿ. ಬಂಗಾರ ತಿನ್ನಕ್ಕಾಗಲ್ಲ. ಇಲ್ಲಿರುವ ಖಾದ್ಯ ಪದಾರ್ಥಗಳನ್ನ ಮನೆಯಲ್ಲಿ ತಯಾರಿಸಿ ಮಕ್ಕಳೊಂದಿಗೆ ಸೇವಿಸಿ, ವಚನ ಹೇಳಿಸಿ. ಬದುಕು ಸಾರ್ಥಕ.

ಬರಹ – ಶ್ರೀ. ಗಣೇಶ್ ಕೆ. ದಾವಣಗೆರೆ, ಸಹಾಯಕ ಪ್ರಾಧ್ಯಾಪಕರು. Www.pratispandana.WordPress.com

ಆಕರ – ವಚನ ಸಾಹಿತ್ಯ ಒಂದು ಸಾಂಸ್ಕೃತಿಕ ಅಧ್ಯಯನ ಲೇಖಕರು – ಡಾ. ಪಿ.ವಿ.ನಾರಾಯಣ.

ಮಾಸ್ತರಿಕೆಗೆ ಮೂರು – ಹುಬ್ಳೀಕರ್ ಧಾರವಾಡಕರ್ ಗದಗಕರ್ ಪುಣೇಕರ್ ಬೆಳಗಾಂವಕರ್ ಅಷ್ಟೇ ಅಲ್ಲ. ಇಗ್ನೋರ್ ಕರ್ ಇಗ್ನೋರ್ ಕರ್..!

3 years of teaching - An article by Ganesh K Davanagere ಮಾಸ್ತರಿಕೆಗೆ ಮೂರು – ಗಣೇಶ್ ಕೆ. ದಾವಣಗೆರೆ

ಮಾಸ್ತರಿಕೆಗೆ ದೀಡು : ಕಂಡದ್ದೇನು ಕಾಣದ್ದೇನು? – ಭಾಗ ೧

ಮಾಸ್ತರಿಕೆಗೆ ದೀಡು ೨ : ಒಂದೇ ಒಂದು ಕೊನೆಯ ಸಹಿಯ ಬೆಲೆ